ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ನಟ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ. ಇತ್ತೀಚೆಗೆ ದರ್ಶನ್ ಗನ್ ಲೈಸೆನ್ಸ್ ರದ್ದು ವಿಚಾರ ಸುದ್ದಿಯಾಗಿತ್ತು. ಇದೀಗ ತಮ್ಮ ಹಣ ವಾಪಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ಧಾರೆ.
ಕಳೆದ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿ ಕೊ* ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಟಿಸಿದ್ದರು. ವಿಚಾರಣೆ ವೇಳೆ ಶಾಕಿಂಗ್ ಸಂಗತಿಗಳು ಬಯಲಾಗಿತ್ತು. ಇನ್ನು ದರ್ಶನ್ ಅವರ 37 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ತಮ್ಮ ಹಣ ವಾಪಸ್ ಕೇಳಿ ದರ್ಶನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಪ್ರಕರಣ ಮುಚ್ಚಿ ಹಾಕಲು ದರ್ಶನ್ 37 ಹಣವನ್ನು ಬಳಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ಮೂವರನ್ನು ಶರಣಾಗಲು ಕಳುಹಿಸಲಾಗಿತ್ತು. ಅವರಿಗೆ ಕೊಂಚ ಹಣವನ್ನು ಕೊಟ್ಟಿದ್ದರು. ಇನ್ನುಳಿದಂತೆ ದರ್ಶನ್ ಮನೆಯಲ್ಲಿ 37 ಲಕ್ಷ ರೂಪಾಯಿ ಹಣ ಸಿಕ್ಕಿತ್ತು. ಪ್ರಕರಣದಿಂದ ತಪ್ಪಿಸಿಕೊಳ್ಳಲು ಈ ಹಣವನ್ನು ದರ್ಶನ್ ಹೊಂದಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ಸದ್ಯ ನಟ ದರ್ಶನ್ 57ನೇ ಸಿಸಿಎಚ್ ಕೋರ್ಟ್ನಲ್ಲಿ ತಮ್ಮ ಹಣ ವಾಪಸ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಂದಹಾಗೆ ಪೊಲೀಸರು ವಶಪಡಿಸಿಕೊಂಡಿದ್ದ ಹಣ ಮೋಹನ್ ರಾಜ್ ಎಂಬುವವರಿಗೆ ದರ್ಶನ್ ಸಾಲವಾಗಿ ನೀಡಿದ್ದ ಹಣ. ಅದೇ ಹಣವನ್ನು ಮೋಹನ್ ರಾಜ್ ಮರಳಿಸಿದ್ದರು. ಇದೇ ಹಣ ದರ್ಶನ್ ಮನೆಯಲ್ಲಿ ಇತ್ತು. ಅದು ಪ್ರಕರಣ ಮುಚ್ಚಿ ಹಾಕಲು ಇಟ್ಟಿದ್ದ ಹಣ ಅಲ್ಲ ಎಂದು ದರ್ಶನ್ ಹೇಳಿದ್ದರು. ಅವರ ಪರ ವಕೀಲರು ಇದನ್ನೇ ವಾದಿಸಿದ್ದರು.
ದರ್ಶನ್ ಸಲ್ಲಿಸಿರುವ ಅರ್ಜಿ ಸಂಬಂಧ ವಿಚಾರಣೆ ನಡೆದಿದ್ದು ಆದಾಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿಸಿದೆ. ಆಕ್ಷೇಪಣೆ ಸಲ್ಲಿಕೆ ಆದರೆ ಮತ್ತೆ 37 ಲಕ್ಷ ರೂಪಾಯಿ ಹಣದ ವಿಚಾರದ ಬಗ್ಗೆ ವಾದ ಪ್ರತಿವಾದ ನಡೆಯಲಿದೆ. ಹಣ ದರ್ಶನ್ಗೆ ವಾಪಸ್ ಸಿಗುತ್ತಾ ಕಾದು ನೋಡಬೇಕಿದೆ.
ಕಳೆದ ವಾರ ನಟ ದರ್ಶನ್, ಪ್ರದೋಶ್ ತಮ್ಮ ಹಣ ವಾಪಸ್ ಕೋರಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೂನ್ 19ರಂದು ದರ್ಶನ್ ಅವರ ಆರ್ಆರ್ ನಗರದ ಮನೆಯಲ್ಲಿ 37.40 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದರು. ಇನ್ನು ದರ್ಶನ್ ವಿಜಯಲಕ್ಷ್ಮಿ ಅವರ ಮನೆಯಿಂದ 3 ಲಕ್ಷ ರೂಪಾಯಿ ಹಣ ಸಿಕ್ಕಿತ್ತು. ಆರೋಪಿ ಪವನ್ ಮನೆಯಲ್ಲಿ ಕೂಡ 5 ಲಕ್ಷ ರೂ. ಪೊಲೀಸರು ವಶಪಡಿಸಿಕೊಂಡಿದ್ದಾಗಿ ವರದಿ ಆಗಿತ್ತು.
ಕೊಲೆ ಪ್ರಕರಣ ಆರೋಪಿಯಾಗಿರುವ ಕಾರಣ ದರ್ಶನ್ ಗನ್ ಲೈಸೆನ್ಸ್ ರದ್ದಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಗನ್ ಲೈಸೆನ್ಸ್ ರದ್ದು ಮಾಡದಂತೆ ದರ್ಶನ್ ಪೊಲೀಸ್ ಇಲಾಖೆಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಗನ್ ಲೈಸೆನ್ಸ್ ಸಂಬಂಧ ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿ ಆಗಿತ್ತು. ಹಾಗಾಗಿ ದರ್ಶನ್ ಮನವಿ ಪತ್ರ ಬರೆದಿದ್ದರು.
"ನಾನು ಸೆಲೆಬ್ರೆಟಿ, ಹೋದಕಡೆ ಎಲ್ಲಾ ಬಹಳ ಜನ ಸೇರುತ್ತಾರೆ. ವೈಯಕ್ತಿಕ ಕಾರಣಕ್ಕಾಗಿ ಗನ್ ಲೈಸೆನ್ಸ್ ಅಗತ್ಯವಿದೆ. ಲೈಸೆನ್ಸ್ ರದ್ದು ಮಾಡಬೇಡಿ, ನನ್ನ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಸಾಕ್ಷಿಗಳಿಗೆ ಬೆದರಿಕೆ ಹಾಕಿಲ್ಲ. ಆ ರೀತಿ ನಡೆದರೆ ಕಾನೂನು ಕ್ರಮ ಜರುಗಿಸಿ" ಎಂದು ದರ್ಶನ್ ತಿಳಿಸಿದ್ದರು.


Click it and Unblock the Notifications











