ಚಿತ್ರೀಕರಣ ಆರಂಭಿಸಲು ಅನುಮತಿ ನೀಡುವಂತೆ ಸಿಎಂ ಗೆ ಮನವಿ
ಕೊರೊನಾ ಕಾರಣದಿಂದಾಗಿ ಕರ್ನಾಟಕದಾದ್ಯಂತ ಎಲ್ಲಾ ರೀತಿಯ ಚಿತ್ರೀಕರಣಗಳೂ ಬಂದ್ ಆಗಿದೆ. ಈಗ ಕೊರೊನಾ ಲಾಕ್ಡೌನ್ ಅನ್ನು ಹಂತ-ಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು, ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಸಿಎಂ ಗೆ ಮನವಿ ಮಾಡಲಾಗಿದೆ.
ಧಾರವಾಹಿಗಳ ಚಿತ್ರೀಕರಣವನ್ನು ಪುನರ್ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಯಡಿಯೂರಪ್ಪ ಅವರಿಗೆ ನಿನ್ನೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದಿಂದ ಆದೇಶ ಎದುರು ನೋಡಲಾಗುತ್ತಿದೆ.
ನಿನ್ನೆ ಸಿಎಂ ಅವರನ್ನು ಭೇಟಿ ಮಾಡಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಅಧ್ಯಕ್ಷ ಶಿವಕುಮಾರ್ ಅವರು, ಯಡಿಯೂರಪ್ಪ ಅವರಿಗೆ ಮನವಿ ಹಸ್ತಾಂತರ ಮಾಡಿದ್ದಾರೆ. ಈ ಸಮಯದಲ್ಲಿ ನಟಿ ತಾರಾ ಸಹ ಇದ್ದರು.

ಮೇ 11 ರಿಂದ ಚಿತ್ರೀಕರಣಕ್ಕೆ ಅನುಮತಿ ಕೊಡಿ
ಮೇ 4 ರಿಂದ ಗ್ರೀನ್ ಜೋನ್, ಯೆಲ್ಲಾ ಜೋನ್ ನಲ್ಲಿ ಲಾಕ್ಡೌನ್ ಸಡಿಲಿಕೆ ಆಗಿದೆ. ಹಾಗಾಗಿ ಮೇ 11 ರಿಂದ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋ ಗಳನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ಮಾಡುತ್ತಿವೆ. ಚಿತ್ರೀಕರಣ ಬಂದ್ ಆಗಿರುವುದರಿಂದ ಅವರಿಗೆ ತೊಂದರೆ ಆಗಿದೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.

120 ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದೆ
ಕನ್ನಡದಲ್ಲಿ ಸರಿ ಸುಮಾರು 120 ಧಾರಾವಾಹಿಗಳು ಹಲವು ರಿಯಾಲಿಟಿ ಶೋ ಗಳ ಚಿತ್ರೀಕರಣ ನಡೆಯುತ್ತಿದ್ದು, 20,000 ತಂತ್ರಜ್ಞರು, ಕಲಾವಿದರು ಇವನ್ನು ನಂಬಿಕೊಂಡಿದ್ದಾರೆ. ಅವರ ಜೀವನಕ್ಕೆ ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ
ಸರ್ಕಾರವು ಅನುಮತಿ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡುತ್ತೇವೆ. ಚಿತ್ರೀಕರಣದ ಜಾಗದಲ್ಲಿ 20 ಕ್ಕೂ ಹೆಚ್ಚು ಮಂದಿ ಸೇರದಂತೆ ಎಚ್ಚರವಹಿಸುತ್ತೇವೆ. ಕಡಿಮೆ ಮಂದಿ ಕಲಾವಿದರು, ತಂತ್ರಜ್ಞರನ್ನು ಇಟ್ಟುಕೊಂಡು ಚಿತ್ರೀಕರಣ ಮಾಡುತ್ತೇವೆ ಎಂದು ಮನವಿ ಮಾಡಿಕೊಳ್ಳಲಾಗಿದೆ.

ಮಾರ್ಚ್ 19 ರಿಂದ ಚಿತ್ರೀಕರಣ ಬಂದ್ ಆಗಿದೆ
ಮಾರ್ಚ್ 19 ರಿಂದ ಚಿತ್ರೀಕರಣ ಬಂದ್ ಆಗಿದೆ. ಯಾವುದೇ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯುತ್ತಿಲ್ಲ. ಟಿವಿಗಳಲ್ಲಿ ಧಾರಾವಾಹಿಯ ಹಳೆಯ ಎಪಿಸೋಡ್ಗಳನ್ನೇ ಪ್ರದರ್ಶನ ಮಾಡಲಾಗುತ್ತಿದೆ. ಸಿನಿಮಾ ಚಿತ್ರೀಕರಣಗಳು ಸಹ ಬಂದ್ ಆಗಿವೆ.


Click it and Unblock the Notifications











