Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರ
ಬಾಲಿವುಡ್ ಮಹಾರಾಣಿ ಶ್ರೀದೇವಿಯ ಮಹಾ ಫ್ಯಾನ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಶ್ರೀದೇವಿಯ ಅಪ್ಪಟ ಅಭಿಮಾನಿ ಆಗಿರುವ ಆರ್.ಜಿ.ವಿಗೆ ಇಂದು ದೊಡ್ಡ ಶಾಕ್ ಸಿಕ್ಕಿದೆ. ಹೃದಯಾಘಾತಕ್ಕೊಳಗಾಗಿ ಶ್ರೀದೇವಿ ಸಾವನ್ನಪಿರುವುದು ಆರ್.ಜಿ.ವಿ ಮನಸ್ಸಿಗೆ ನೋವು ತಂದಿದೆ. 'ಶ್ರೀದೇವಿ ಇನ್ನಿಲ್ಲ' ಎಂಬ ಸುದ್ದಿ ಕೇಳಿದ ಕೂಡಲೆ ತಮ್ಮ ಮನದಾಳವನ್ನ ರಾಮ್ ಗೋಪಾಲ್ ವರ್ಮಾ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಆರ್.ಜಿ.ವಿ ಬರೆದಿರುವ ಪತ್ರದ ಕನ್ನಡ ಅವತರಣಿಕೆ ಇಲ್ಲಿದೆ ಓದಿರಿ...
''ಶ್ರೀದೇವಿನ ಕೊಂದ ದೇವರನ್ನು ನಾನು ದ್ವೇಷಿಸುವೆ.. ಕೊನೆಯುಸಿರೆಳೆದಿದ್ದಕ್ಕೆ ಶ್ರೀದೇವಿನ ದ್ವೇಷಿಸುವೆ.
ರಾತ್ರಿ ನಿದ್ದೆಯಲ್ಲಿ ಸದಾ ಕನಸು ಕಾಣುವ ಹಾಗೂ ಆಗೊಮ್ಮೆ ಈಗೊಮ್ಮೆ ಎದ್ದು ಮೊಬೈಲ್ ಫೋನ್ ನೋಡುವ ಹವ್ಯಾಸ ನನಗಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ 'ಶ್ರೀದೇವಿ ಇನ್ನಿಲ್ಲ' ಎಂಬ ಮೆಸೇಜ್ ನೋಡಿದೆ. ಅದು ಕೆಟ್ಟ ಕನಸು ಇರಬೇಕು ಅಥವಾ ಸುಳ್ಳು ಸುದ್ದಿ ಇರಬೇಕು ಅಂತ ನಿದ್ದೆಗೆ ಜಾರಿದೆ. ಒಂದು ಗಂಟೆಯ ಬಳಿಕ ಮತ್ತೆ ಎದ್ದು ನೋಡಿದ್ರೆ, ಶ್ರೀದೇವಿ ನಿಧನದ ಕುರಿತು 50 ಮೆಸೇಜ್ ಗಳು ಬಂದಿದ್ವು.
ಒಂದ್ಕಾಲದಲ್ಲಿ ನಾನು ವಿಜಯವಾಡದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗ, ಶ್ರೀದೇವಿ ಅವರ ತೆಲುಗು ಸಿನಿಮಾ 'ಪದಹಾರೆಲ್ಲ ವಯಸ್ಸು' ವೀಕ್ಷಿಸಿದ್ದೆ. ಅಂದು ಶ್ರೀದೇವಿಯ ಸೌಂದರ್ಯ ನೋಡಿ ನಾನು ಮೂಕವಿಸ್ಮಿತನಾಗಿದ್ದೆ. ಸಿನಿಮಾ ನೋಡಿ ಥಿಯೇಟರ್ ನಿಂದ ಆಚೆ ಬಂದಾಗ, ಆಕೆ ಸಾಮಾನ್ಯದವಳಲ್ಲ. ಯಕ್ಷಕನ್ನಿಕೆ ಇರಬೇಕು ಎಂದುಕೊಂಡಿದ್ದೆ. ನಂತರ ಆಕೆಯ ಇತರೆ ಸಿನಿಮಾಗಳನ್ನು ನೋಡಿದೆ. ಎಲ್ಲದರಲ್ಲೂ ಆಕೆಯ ಸೌಂದರ್ಯ ಮತ್ತು ಪ್ರತಿಭೆ ಎದ್ದು ಕಾಣುತ್ತಿತ್ತು. ನಾವು ಮಾಡಿರುವ ಕೆಲ ಒಳ್ಳೆಯ ಕೆಲಸಗಳಿಗಾಗಿ ನಮ್ಮನ್ನ ಆಶೀರ್ವದಿಸಲು ಗಂಧರ್ವ ಲೋಕದಿಂದ ಇಳಿದು ಬಂದ ಅಪ್ಸರೆಯಂತೆ ನನಗೆ ಆಕೆ ಕಂಗೊಳಿಸುತ್ತಿದ್ದಳು.
ಶ್ರೀದೇವಿನ ಕೊಂದ ದೇವರನ್ನ ದ್ವೇಷಿಸುವೆ ಎಂದ ರಾಮ್ ಗೋಪಾಲ್ ವರ್ಮಾ
ಶ್ರೀದೇವಿ ದೇವರ ಅಪರೂಪದ ಸೃಷ್ಟಿ. ಕಾರಣ, ದೇವರು ಪುರುಸೊತ್ತಲ್ಲಿದ್ದಾಗ ಸೃಷ್ಟಿ ಮಾಡಿ ಮಾನವ ಕುಲಕ್ಕೆ ನೀಡಿದ ಸುಂದರ ಕೊಡುಗೆ ಈಕೆ. ನನ್ನ ಹಾಗೂ ಶ್ರೀದೇವಿಯ ಸಿನಿಮಾ ಪ್ರಯಾಣ ಶುರು ಆಗಿದ್ದು ನನ್ನ ಚೊಚ್ಚಲ ಸಿನಿಮಾ 'ಶಿವ' ಮೂಲಕ. ಚೆನ್ನೈನಲ್ಲಿದ್ದ ನಾಗಾರ್ಜುನ ಕಛೇರಿಯಿಂದ ಪಕ್ಕದ ಬೀದಿಯಲ್ಲಿದ್ದ ಶ್ರೀದೇವಿ ಮನೆಯವರೆಗೂ ನಾನು ನಡೆದುಕೊಂಡು ಹೋಗಿ, ಶ್ರೀದೇವಿ ಮನೆಯ ಗೇಟ್ ಬಳಿ ಕಾಯುತ್ತಿದ್ದೆ. ಶ್ರೀದೇವಿಯನ್ನ ಕಣ್ತುಂಬಿಕೊಳ್ಳುವುದೊಂದೇ ಅದಕ್ಕಿದ್ದ ಏಕೈಕ ಕಾರಣ.
ಸೌಂದರ್ಯದ ಅಧಿದೇವತೆ ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿ ಅವರಿದ್ದದ್ದು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ಕಾರಣ, ಸೌಂದರ್ಯದಲ್ಲಿ ಸಿರಿದೇವಿಯಾಗಿದ್ದ ಶ್ರೀದೇವಿಗೆ ಮನೆಕಟ್ಟುವ ಅರ್ಹತೆ ಯಾವುದೇ ಮನುಷ್ಯನಿಗೂ ಇರಲಿಲ್ಲ ಎಂಬುದು ನನ್ನ ನಂಬಿಕೆ ಆಗಿತ್ತು.
ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!
'ಶಿವ' ಸಿನಿಮಾ ಹಿಟ್ ಆದ್ಮೇಲೆ, ಶ್ರೀದೇವಿ ಜೊತೆ ಸಿನಿಮಾ ಮಾಡ್ತೀರಾ ಅಂತ ಒಬ್ಬ ನಿರ್ಮಾಪಕ ನನಗೆ ಕೇಳಿದರು. ಆದ ನಾನು 'ನೀನೇನು ಹುಚ್ಚನಾ ಅಥವಾ ಏನು.?' ಅಂತ ಕೇಳಿದೆ. ನಾನು ಅವಳನ್ನ ಒಮ್ಮೆ ನೋಡಿದ್ರೆ ಸಾಕು ಅಂತ ಕಾಯ್ತಿದ್ದೇನೆ, ಅಂಥದ್ರಲ್ಲಿ ಅವಳ ಜೊತೆ ಸಿನಿಮಾ ಮಾಡದೇ ಇರ್ತೀನಾ.?
ಶ್ರೀದೇವಿಯನ್ನ ನೋಡಬೇಕು ಅಂತ ನಾನು ಯಾವ ಮನೆ ಮುಂದೆ ದಿನಾ ಕಾಯ್ತಿದ್ನೋ, ಅದೇ ಮನೆಯಲ್ಲಿ ಆ ನಿರ್ಮಾಪಕ ನನ್ನ ಹಾಗೂ ಶ್ರೀದೇವಿ ಮೀಟಿಂಗ್ ಅರೇಂಜ್ ಮಾಡಿದರು. ಅಂದು ರಾತ್ರಿ ನಾವು ಶ್ರೀದೇವಿ ಮನೆಗೆ ಹೋದ್ವಿ. ಅದೃಷ್ಟಕ್ಕೆ, ಅವತ್ತು ಮನೆಯಲ್ಲಿ ಕರೆಂಟ್ ಇರಲಿಲ್ಲ. ಅಪ್ಸರೆಗಾಗಿ ಕಾಯುತ್ತಾ ನಾನು ಲಿವಿಂಗ್ ರೂಮ್ ನಲ್ಲಿ ನಿರ್ಮಾಪಕರ ಜೊತೆ ಮಂದ ಬೆಳಕಲ್ಲಿ ಅವಳನ್ನೇ ಎದುರು ನೋಡುತ್ತಿದ್ದೆ.
ಮುಂಬೈಗೆ ಹೋಗಲು ಶ್ರೀದೇವಿ ಬಟ್ಟೆ ಪ್ಯಾಕ್ ಮಾಡ್ತಿರೋದಾಗಿ ಆಕೆಯ ತಾಯಿ ನಮಗೆ ತಿಳಿಸಿದರು. ಬಟ್ಟೆ ಪ್ಯಾಕ್ ಮಾಡುವ ಭರದಲ್ಲಿ ಒಂದು ರೂಮ್ ನಿಂದ ಇನ್ನೊಂದು ರೂಮ್ ಕಡೆಗೆ ಶ್ರೀದೇವಿ ಮಿಂಚಿನಂತೆ ಸಂಚರಿಸುತ್ತಾ, ತಡ ಮಾಡಿದ್ದಕ್ಕಾಗಿ ನಮ್ಮ ಕಡೆ ನೋಡುತ್ತಾ ನಸು ನಕ್ಕು ಕ್ಷಮೆ ಕೇಳಿದಳು.
ಕಡೆಗೂ ಶ್ರೀದೇವಿ ಬಂದು ಲಿವಿಂಗ್ ರೂಮ್ ನಲ್ಲಿ ನಮ್ಮ ಮುಂದೆ ಕೂತು, ನನ್ನ ಜೊತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿ, ಮುಂಬೈ ಕಡೆಗೆ ಹೊರಟಳು. ಶ್ರೀದೇವಿಗೆ ಜನ್ಮ ನೀಡಿದ ಅವರ ತಾಯಿಗೆ ನಾನು ತುಂಬಾ ಗೌರವದಿಂದ ಮಾತನಾಡಿಸಿದೆ. ಮನೆಗೆ ಹಿಂತಿರುಗಿ ಸ್ವರ್ಗ ಲೋಕದಲ್ಲಿ ಇದ್ದೇನೆಂಬ ಭಾವನೆಯೊಂದಿಗೆ 'ಕ್ಷಣ ಕ್ಷಣಂ' ಚಿತ್ರದ ಸ್ಕ್ರಿಪ್ಟ್ ಬರೆಯಲು ಶುರು ಮಾಡಿದೆ.
ಶ್ರೀದೇವಿಯನ್ನ ಇಂಪ್ರೆಸ್ ಮಾಡಲು 'ಕ್ಷಣ ಕ್ಷಣಂ' ಸ್ಕ್ರಿಪ್ಟ್ ಬರೆದೆ. 'ಕ್ಷಣ ಕ್ಷಣಂ' ಚಿತ್ರವೇ ನಾನು ಆಕೆಗೆ ಬರೆದ ಲವ್ ಲೆಟರ್. ಇಡೀ ಚಿತ್ರೀಕರಣದಲ್ಲಿ ಆಕೆಯ ಕಣ್ಣು, ಚಹರೆ, ಸೌಂದರ್ಯ, ವ್ಯಕ್ತಿತ್ವಕ್ಕೆ ಮನಸೋತಿದ್ದೆ. ಆಕೆ ತನ್ನ ಸುತ್ತ ಗೌರವ ಹಾಗೂ ಆತ್ಮಾಭಿಮಾನದ ಗೋಡೆ ಕಟ್ಟಿಕೊಂಡಿದ್ದಳು. ಅದನ್ನ ದಾಟಲು ಯಾರಿಗೂ ಬಿಡುತ್ತಿರಲಿಲ್ಲ.
ನಂದ್ಯಾಳ್ ನಲ್ಲಿ 'ಕ್ಷಣ ಕ್ಷಣಂ' ಚಿತ್ರದ ಕ್ಲೈಮ್ಯಾಕ್ ಶೂಟಿಂಗ್ ವೇಳೆ, ಶ್ರೀದೇವಿಯನ್ನ ನೋಡಲು ಇಡೀ ಊರಿಗೆ ಊರೇ ಅಲ್ಲಿ ನೆರೆದಿತ್ತು. ಬ್ಯಾಂಕ್, ಸರ್ಕಾರಿ ಕಛೇರಿ, ಸ್ಕೂಲ್, ಕಾಲೇಜ್.. ಎಲ್ಲವೂ ಬಂದ್ ಆಗಿತ್ತು. ಆಕೆಯ ಜನಪ್ರಿಯತೆ ಹಾಗಿತ್ತು.
ನಂದ್ಯಾಳ್ ನಲ್ಲಿ ಶ್ರೀದೇವಿ ನೆಲೆಸಿದ್ದ ಬಂಗಲೆ ಮುಂದೆ ಕನಿಷ್ಟ ಅಂದರೂ ಇಪ್ಪತ್ತು ಸಾವಿರ ಜನ ಪ್ರತಿ ರಾತ್ರಿ ಶ್ರೀದೇವಿಯನ್ನ ನೋಡಲು ಕಾಯುತ್ತಿದ್ದರು. ಆಕೆಯ ರಕ್ಷಣೆಗಾಗಿ 50 ಅಂಗ ರಕ್ಷಕರು ಹಾಗೂ 100 ಮಂದಿ ಪೊಲೀಸರಿದ್ದರು.
ಶ್ರೀದೇವಿಯನ್ನ ಸೃಷ್ಟಿಸಿದ ದೇವರಿಗೆ ಹಾಗೂ ಆಕೆಯ ಸೌಂದರ್ಯವನ್ನು ಸೆರೆಹಿಡಿಯಲು ಮೂವಿ ಕ್ಯಾಮರಾ ಸೃಷ್ಟಿಸಿದ ಲೂಯಿಸ್ ಲೂಮಿಯರ್ ಗೆ ನನ್ನ ಧನ್ಯವಾದಗಳು. ಶ್ರೀದೇವಿ ಇನ್ನಿಲ್ಲ ಎಂಬುದನ್ನು ನನಗೆ ಈಗಲೂ ನಂಬಲಾಗುತ್ತಿಲ್ಲ. ಈಗಲೂ ಇದೊಂದು ಕೆಟ್ಟ ಕನಸು ಆಗಿರಲಿ ಎಂದು ಭಾವಿಸುತ್ತೇನೆ. ಆದ್ರೆ, ಅದಾಗಲ್ಲ ಎಂಬುದು ನನಗೂ ಗೊತ್ತು.
ನಾನು ಶ್ರೀದೇವಿಯನ್ನ ದ್ವೇಷಿಸುವೆ. ಆವಳು ಗಂಧರ್ವ ಕನ್ಯೆ ಅಲ್ಲ, ನಮ್ಮಂತೆ ಮನುಷ್ಯಳು ಎಂದು ಅರ್ಥ ಮಾಡಿಸಿದ್ದಕ್ಕಾಗಿ ನಾನು ಶ್ರೀದೇವಿಯನ್ನ ದ್ವೇಷಿಸುವೆ. ಆಕೆಗೂ ಒಂದು ಹೃದಯವಿದೆ. ಅದು ಎಲ್ಲರಂತೂ ಒಂದು ದಿನ ಸ್ತಬ್ಧವಾಗುತ್ತದೆ ಎಂದು ನನಗೀಗ ಮನವರಿಕೆ ಮಾಡಿಸಿದ್ದಕ್ಕಾಗಿ ನಾನು ಶ್ರೀದೇವಿಯನ್ನ ದ್ವೇಷಿಸುವೆ. ಅವಳ ಸಾವಿನ ಸುದ್ದಿಯನ್ನ ನಾನು ಕೇಳಲು ಇನ್ನೂ ಬದುಕಿರುವುದಕ್ಕೆ ನಾನು ದ್ವೇಷಿಸುವೆ. ಶ್ರೀದೇವಿಯನ್ನ ಕೊಂದ ದೇವರನ್ನ ನಾನು ದ್ವೇಷಿಸುವೆ. ಕೊನೆಯುಸಿರೆಳೆದ ಶ್ರೀದೇವಿಯನ್ನ ನಾನು ದ್ವೇಷಿಸುವೆ.
ನೀನು ಎಲ್ಲೇ ಇದ್ದರೂ, ನಾನು ಎಂದೆಂದಿಗೂ ನಿನ್ನ ಪ್ರೀತಿಸುವೆ ಶ್ರೀ...'' - ರಾಮ್ ಗೋಪಾಲ್ ವರ್ಮಾ.