ದೆಹಲಿಯಲ್ಲಿ ಕುಂದಾಪುರದ ಕಂಪು ; ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ- ಕುತೂಹಲ ಮೂಡಿಸಿದ ಭೇಟಿ
ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ .. ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಕನ್ನಡ ಕಲಾರಸಿಕರ ಹೃದಯ ಗೆದ್ದ ರಿಷಬ್ ಈಗ ಕುಂದಾಪುರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇವಲ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಆಗಿ ಮಾತ್ರ ಉಳಿದಿಲ್ಲ.
ಬದಲಿಗೆ ಎಲ್ಲರಿಗೆ ಗೊತ್ತಿರುವಂತೆ ಕನ್ನಡದ ಡಿವೈನ್ ಸ್ಟಾರ್ ಈಗ ಪರಭಾಷೆಯ ಪಾಲಾಗಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಒಂದಾದ ಮೇಲೊಂದರಂತೆ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಒಪ್ಪಿಕೊಳ್ಳುತ್ತಿದ್ದಾರೆ.

ಇನ್ನೂ ಮೊದಲಾದರೆ ರಿಷಬ್ ಸುತ್ತ ಮುತ್ತ ನಮ್ಮವರು, ಅವರ ಊರಿನವರು ಕಾಣಿಸುತ್ತಿದ್ದರು. ಇವರದ್ದೇ ಆದ ಸ್ನೇಹಿತರ ಬಳಗವೂ ಇರುತ್ತಿತ್ತು. ಬಪ್ಪಾ.. ಬತ್ತೆ.. ಹೋಪಾ.. ಎಂತಾ.. ಎಂದು ಸುಂದರವಾಗಿ ಮಾತನಾಡಿಕೊಂಡು, ಪರಸ್ಪರ ಕಾಲೆಳೆದುಕೊಂಡು ಎಲ್ಲರೂ ಅನೋನ್ಯವಾಗಿದ್ದರು. ಕನ್ನಡ ಚಿತ್ರರಂಗದ ಏಳಿಗೆಯ ಕುರಿತು ಚಿಂತನ-ಮಂಥನ ಮಾಡುತ್ತಾ ಜಾಲಿಯಾಗಿದ್ದರು.
ಆದರೆ ಈಗ ರಿಷಬ್ ಅಕ್ಕ-ಪಕ್ಕ-ಎಡ-ಬಲ ದುರ್ಬಿನ್ ಹಾಕಿಕೊಂಡು ನೋಡಿದರೂ ಕೂಡ ಮೊದಲಿದ್ದವರು ಯಾರು ಕಣ್ಣಿಗೆ ಬೀಳ್ತಿಲ್ಲ. ಖುದ್ದು ರಿಷಬ್ ಅವರೇ ತಮ್ಮ ಇನ್ಸ್ಟಾಗ್ರಾಮ್ದಿಂದ ಹತ್ ಹತ್ರ 137 ಜನರನ್ನು ಹೊರ ಹಾಕಿದ್ದಾರೆ.
ಹೀಗಿರುವಾಗ ಇದೀಗ ಕುಂದಾಪುರದ ಶೆಟ್ರು ಕೇಂದ್ರ ಗೃಹ ಮಂತ್ರಿ, ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿ ಆಗಿದ್ದಾರೆ. ''ಚಾಯ್ ಪೇ ಚರ್ಚಾ'' ಮಾಡಿದ್ದಾರೆ. ನೆನಪಿಗೆ ಇರಲಿ ಎಂದು ರಿಷಬ್ ತಮ್ಮ ಈ ಸುಂದರ ಭೇಟಿಯ ಫೋಟೊಗಳನ್ನು ಕ್ಲಿಕಿಸಿಕೊಂಡಿದ್ಧಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.
ತಮ್ಮ ಈ ಭೇಟಿಯ ಕುರಿತು ಬರೆದಕೊಂಡಿರುವ ರಿಷಬ್ ಶೆಟ್ಟಿ, ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಯ್ತು ಎಂದು ಹೇಳಿದ್ದಾರೆ. ''ಕಾಂತಾರ'' ಮತ್ತು ''ಕಾಂತಾರ-1'' ಚಿತ್ರದ ಕುರಿತು ಅವರು ತಮ್ಮ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡರು ಎಂದು ಹೇಳಿರುವ ರಿಷಬ್ ಈ ಭೇಟಿ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ನನ್ನ ಮುಂದಿನ ಚಿತ್ರಗಳ ಕುರಿತು ಕೂಡ ಅವರು ಕೇಳಿ ಮಾಹಿತಿ ಪಡೆದರು ಎಂದು ಹೇಳಿರುವ ರಿಷಬ್, ನಮ್ಮ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಚಲನಚಿತ್ರ ನಿರ್ಮಾಣದ ಬಗ್ಗೆ ಆಳವಾದ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿದ್ದಾರೆ ಎಂದಿದ್ದಾರೆ. ಇಬ್ಬರೂ ಸಹ ಈ ಬಗ್ಗೆ ಚರ್ಚಿಸಿದ್ದು ಬಹಳ ಸಂತೋಷವಾಯ್ತು ಎಂದು ಬರೆದಕೊಂಡಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಮತ್ತು ಅಮಿತ್ ಶಾ ಅವರ ಈ ಭೇಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪಂಚರಾಜ್ಯ ಚುನಾವಣೆಯ ಫಲಿತಾಂಶ ಬೇರೆ ಬರಬೇಕಿರುವ ಹಿನ್ನೆಲೆ ಹಲವರು ಈ ಭೇಟಿಯ ವಿಚಾರವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ಧಾರೆ.
ಇನ್ನು 2023 ರಲ್ಲಿ ಪ್ರಧಾನಿ ಮೋದಿ ಅವರನ್ನು ಕೂಡ ರಿಷಬ್ ಭೇಟಿಯಾಗಿದ್ದರು. ಅಂದು ಕೂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಮೋದಿ ಅವರು ಮಹಾನ್ ನಾಯಕ ಎಂದು ಬಣ್ಣಿಸಿದ್ದರು.
ಇನ್ನುಳಿದಂತೆ 2023ರಲ್ಲಿಯೇ ರಾಜಕೀಯ ಪ್ರವೇಶದ ಕುರಿತ ಸುದ್ದಿಗೆ ಪ್ರತಿಕ್ರಿಯಿಸಿದ್ದ ರಿಷಬ್ ಶೆಟ್ಟಿ, ನನ್ನ ರಾಜಕೀಯ ಪ್ರವೇಶದ ಕುರಿತು ಸುದ್ದಿ ಸುಳ್ಳು ಎಂದಿದ್ದರು. ಏಪ್ರಿಲ್ 1ರಂದು ಏಪ್ರಿಲ್ ಫೂಲ್ ಪ್ರಯುಕ್ತ ಮಾಡಲಾಗಿದ್ದ ಟ್ವಿಟ್ ನ ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದ ರಿಷಬ್ ಸುಮ್ನನೆ ಇರಿ ಮರ್ರೆ. ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ ಎಂದು ಕೈ ಮುಗಿದು ರಿಪ್ಲೈ ಮಾಡಿದ್ದರು. ಈಗ ಅಮಿತ್ ಶಾ ಅವರನ್ನು ರಿಷಬ್ ಭೇಟಿಯಾಗಿದ್ಧಾರೆ. ಈ ಮೂಲಕ ಸುದ್ದಿಯಲ್ಲಿದ್ಧಾರೆ.


Click it and Unblock the Notifications