'ಕಾಂತಾರ' ಚಿತ್ರದಲ್ಲಿ ಹಾಲಿವುಡ್ ನಟ ರಾಕ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ
'ಕಾಂತಾರ' ಸಿನಿಮಾ ರಿಲೀಸ್ಗೆ ಇನ್ನೆರಡೇ ದಿನ ಬಾಕಿ ಇರೋದು. ಗುರುವಾರವೇ ಹಲವೆಡೆ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಲಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಕಿಶೋರ್ ನಡುವಿನ ಮುಖಾಮುಖಿ ದೃಶ್ಯಗಳು ಕುತೂಹಲ ಕೆರಳಿಸಿದೆ. ಇವರಿಬ್ಬರ ಕಾಂಬಿನೇಷನ್ ದೃಶ್ಯಗಳ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಇಬ್ಬರು ಶಿವ ಹಾಗೂ ಮುರಳಿ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ.
ಕರಾವಳಿ ಪ್ರದೇಶವನ್ನು ಪರುಶುರಾಮನ ಸೃಷ್ಟಿ ಎಂದು ಹೇಳುತ್ತಾರೆ. ಕಾಡಿನ ಪಕ್ಕ ಒಂದು ಊರು. ಆ ಕಾಡನ್ನು ನಂಬಿ ಬದುಕುವ ಜನ. ಕಾಡಿನ ರಕ್ಷಣೆಗೆ ನಿಂತ ಅರಣ್ಯ ಇಲಾಖೆ ಅಧಿಕಾರಿ ಮುರಳಿಧರ ಪಾತ್ರದಲ್ಲಿ ಕಿಶೋರ್ ಅಬ್ಬರಿಸಿದ್ದಾರೆ. ಊರಿನ ಜನರ ಪರ ನಿಲ್ಲುವ ನಾಯಕ ಶಿವನಾಗಿ ರಿಷಬ್ ಶೆಟ್ಟಿ ಕಿಶೋರ್ಗೆ ಸವಾಲ್ ಹಾಕಿದ್ದಾರೆ. ಇವರಿಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದ ಕಥೆಯೇ 'ಕಾಂತಾರ'. ನಟ ಕಿಶೋರ್ ಒಬ್ಬ ರೈತ. ಜೊತೆಗೆ ಪರಿಸರ ಪ್ರೇಮಿ. ಅವರಿಗೆ ಚಿತ್ರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಪಾತ್ರ ಸಿಕ್ಕಿರೋದು ವಿಶೇಷ.
ನಟ ಕಿಶೋರ್ ಬಹಳ ಇಷ್ಟಪಟ್ಟು ಅರಣ್ಯ ಇಲಾಖೆ ಅಧಿಕಾರಿ ಮುರಳಿಧರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂದುಕೊಂಡ ರೀತಿಯಲ್ಲೇ ಸಿನಿಮಾ ಮೂಡಿ ಬಂದಿದೆ ಎಂದು ಚಿತ್ರತಂಡ ಖುಷಿಯಾಗಿದೆ. ರಿಷಬ್ - ಕಿಶೋರ್ ಸಿನಿಮಾ ಮೇಕಿಂಗ್ ಬಗ್ಗೆ ಏನ್ ಹೇಳಿದ್ದಾರೆ ಕೇಳೋಣ ಬನ್ನಿ.

ಕಾಡು ಎಂದರೆ ನನಗೆ ಇಷ್ಟ- ಕಿಶೋರ್
ಮುರಳಿ ಪಾತ್ರಕ್ಕೆ ಯಾರು ಅಂದಾಗ ತಂಡದ ಮೊದಲ ಆಯ್ಕೆ ಕೊನೆ ಅಯ್ಕೆ ಕಿಶೋರ್ ಆಗಿದ್ದರಂತೆ. ಕಿಶೋರ್ ಅವರಿಗೂ ಕಾಡು ಎಂದರೆ ಬಹಳ ಇಷ್ಟ. ಕಾಡಿನ ಬಗ್ಗೆ ಕಥೆ. ವ್ಯವಸ್ಥೆಯ ಜೊತೆಗಿನ ತಾಕಲಾಟ ಇವತ್ತಿನ ಕಾಲಕ್ಕೆ ಬಹಳ ಪ್ರಸ್ತುತವಾಗಿದ್ದ ವಿಚಾರಗಳು ಇಂಟ್ರೆಸ್ಟಿಂಗ್ ಎನ್ನಿಸಿ ಬಹಳ ಇಷ್ಟಪಟ್ಟು ಕಿಶೋರ್ ನಟಿಸಿದ್ದಾರೆ. ಸಿಕ್ಕಾಪಟ್ಟೆ ರಫ್ ಅಂಡ್ ಟಫ್ ಆಗಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ರಿಷಬ್ ಹೇಳಿದ್ದಾರೆ.

ಸಿನಿಮಾ ಮಾಡಿರುವ ರೀತಿ ಇಷ್ಟ ಆಯ್ತು-ಕಿಶೋರ್
"ಮುರಳಿ ಒಂದು ಐಡಿಯಾಲಜಿ ಹೇಳುವ ಪಾತ್ರ. ಕಿಶೋರ್ ಸರ್ ಈ ಮಣ್ಣಿಗೆ ಹತ್ತಿರವಾದವರು, ಅವರೊಬ್ಬ ರೈತ ಕೂಡ ಹೌದು. ನಾವು ಚಿತ್ರದಲ್ಲಿ ಏನು ಸಮಾಜದ ದುಷ್ಟ ವಿಚಾರಗಳ ಬಗ್ಗೆ ಹೇಳುತ್ತಿದ್ದೇವೆ ಅದು ಅವರಿಗೆ ಇಷ್ಟವಾಯ್ತು. ಕಿಶೋರ್ ಸರ್ ಮುರಳಿ ಪಾತ್ರವನ್ನು ನೆಕ್ಸ್ಟ್ ಲೆವೆಲ್ಗೆ ತಗೊಂಡು ಹೋಗಿದ್ದಾರೆ" ಎಂದು ರಿಷಬ್ ಹೇಳಿದ್ದಾರೆ. ಚಿತ್ರದಲ್ಲಿ ದೈವಕೋಲ, ಕಂಬಳ ಆಚರಣೆಗಳನ್ನೆಲ್ಲಾ ಬಹಳ ಅದ್ಭುತವಾಗಿ, ಕುತೂಹಲಭರಿತವಾಗಿ ಕಟ್ಟಿಕೊಟ್ಟಿದ್ದಾರೆ. ಒಂದು ಸಿನಿಮಾ ಇಂಟ್ರೆಸ್ಟಿಂಗ್ ಆಗಬೇಕಾದರೆ ಒಂದು ಘರ್ಷಣೆ ಇರಬೇಕು, ಆಗ ಬಹಳ ಇಂಟ್ರೆಸ್ಟಿಂಗ್ ಆಗಿರುತ್ತದೆ. ಅದು ಈ ಸಿನಿಮಾದಲ್ಲಿದೆ ಎಂದು ಕಿಶೋರ್ ವಿವರಿಸಿದ್ದಾರೆ.

ಕಿಶೋರ್ ಹಾಲಿವುಡ್ ನಟ ರಾಕ್ ತರ ಕಾಣಿಸ್ತಿದ್ರು
"ಕಿಶೋರ್ ಸರ್ ವೇಯ್ಟ್ ಲಾಸ್ ಆಗಿರುವಂತ ರಾಕ್ ತರ ಕಾಣಿಸ್ತಿದ್ರು. ನಾವು ಸೆಟ್ನಲ್ಲಿ ನಗುತ್ತಿದ್ದೆವು ನೋಡಿ ಹಾಲಿವುಡ್ ಆಕ್ಟರ್ನ ಕರ್ಕೊಂಡು ಬಂದಿದ್ದೀವಿ ಎಂದು. ಇಬ್ಬರ ನಡುವಿನ ಸನ್ನಿವೇಶಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ಕರೆದುಕೊಂಡು ಹೋಗುತ್ತದೆ. ಕಿಶೋರ್ ಸರ್ ಬೇರೆ ಭಾಷೆಯಲ್ಲಿ ಸಿನಿಮಾ ಮಾಡಿದಾಗೆಲ್ಲಾ ಇವರನ್ನು ಕನ್ನಡಕ್ಕೆ ಕರೆದುಕೊಂಡು ಬರಬೇಕು ಎಂದುಕೊಳ್ಳುತ್ತಿದ್ದೆ" ಎಂದು ರಿಷಬ್ ವಿವರಿಸಿದ್ದಾರೆ.

ಕಾನೂನು ಉಳಿಸಲು ಹೋರಾಡುವ ಅಧಿಕಾರಿ
ಭಾರತದಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಬಗ್ಗೆ ಮೊದಲು ಬಂದಿರುವ ಸಿನಿಮಾ ಡಾ. ರಾಜ್ಕುಮಾರ್ ನಟನೆಯ 'ಗಂಧದಗುಡಿ'. ಅಣ್ಣಾವ್ರ ಸಿನಿಮಾದಿಂದ ಇನ್ಸ್ಪೈರ್ ಆಗಿ ಸಿನಿಮಾ ಮಾಡಲು ಹೋದಾಗ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ನಾಲ್ಕೈದು ಜನ ಫಾರಿಸ್ಟ್ ಆಫೀಸರ್ಗಳು ಇಡೀ ಕಾಡನ್ನು ಕಾಯಬೇಕು. ಹಳ್ಳಿ, ಕೃಷಿ ಅಂದಾಕ್ಷಣ ಕಾಡು ಹಾಗೂ ಊರಿನ ನಡುವೆ ಸಂಘರ್ಷ ಶುರುವಾಗುತ್ತದೆ. ಇದೇ ಚಿತ್ರದ ತಿರುಳು ಎನ್ನುತ್ತಾರೆ ರಿಷಬ್ ಶೆಟ್ಟಿ. ಕಾನೂನು ಉಳಿಸೋಕೆ ಜನರನ್ನು ಎದುರು ಹಾಕಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ, ಜನರ ಜೊತೆಯಾಗಿ ಕೆಲಸ ಮಾಡಬೇಕಾಗುತ್ತದೆ. ಅಂತಹ ಪಾತ್ರದಲ್ಲಿ ನಟಿಸಿದ್ದೀನಿ ಎಂದು ಕಿಶೋರ್ ವಿವರಿಸಿದ್ದಾರೆ.

'ಅಟ್ಟಹಾಸ' ಚಿತ್ರದಲ್ಲಿ ಒಟ್ಟಿಗೆ ನಟನೆ
"ನನಗೆ ಮೊದಲಿಗೆ ಅಟ್ಟಹಾಸ ಚಿತ್ರದಲ್ಲಿ ಕಿಶೋರ್ ಸರ್ ಜೊತೆ ಪುಟ್ಟ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು. ಅವರು ವೀರಪ್ಪನ್ ಪಾತ್ರ ಮಾಡಿದ್ದರು. ನಾನು ಸಣ್ಣ ಪಾತ್ರ ಮಾಡಿದ್ದೆ. ಆ ನಂತರ 'ಉಳಿದವರು ಕಂಡಂತೆ'. ನಾವೆಲ್ಲಾ ಸಹ ಕಲಾವಿದರಾಗಿದ್ದಾಗ ಅವರು ಹೀರೊ ಆಗಿದ್ದರು. ಇವತ್ತು ನಾವಿಬ್ಬರು ಸರಿಸಮನಾದ ಪಾತ್ರಗಳನ್ನು ಮಾಡಿದ್ದೇವೆ. ಇದು ಸಿನಿಮಾ ಬ್ಯೂಟಿ ಎನ್ನಿಸುತ್ತದೆ. ಮುಂದಿನ ದಿನಗಳಲ್ಲಿ ಕಿಶೋರ್ ಸರ್ ಜೊತೆ ಮತ್ತಷ್ಟು ಕೆಲಸ ಮಾಡ್ತೀನಿ ಎಂದು ರಿಷಬ್ ಹೇಳಿದ್ದಾರೆ.


Click it and Unblock the Notifications











