'ಪುನೀತ ಪರ್ವ' ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಬರದೇ ಇದ್ದದ್ದಕ್ಕೆ ಕಾರಣ ಬಹಿರಂಗ; ಕ್ಷಮಿಸಿ ಎಂದ ನಟ!

ನಿನ್ನೆ ( ಅಕ್ಟೋಬರ್ 21 ) ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಕೃಷ್ಣ ವಿಹಾರದಲ್ಲಿ ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ತುಂಬಾ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.
ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನ ಅನೇಕ ಕಲಾವಿದರು ಸಹ ಕಾರ್ಯಕ್ರಮಕ್ಕೆ ಆಗಮಿಸಿ ಅಪ್ಪು ಅವರನ್ನು ಸ್ಮರಿಸಿದರು. ಅಂತಿಮವಾಗಿ ಯಶ್ ಮತ್ತು ಸೂರ್ಯ ಅಪ್ಪು ಅವರ ಕುರಿತಾಗಿ ಆಡಿದ ಮಾತುಗಳು ನೆರೆದಿದ್ದವರ ಕಣ್ತುಂಬುವಂತೆ ಮಾಡಿದವು ಹಾಗೂ ಅಪ್ಪು ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿದವು.
ಕನ್ನಡ ಚಲನಚಿತ್ರರಂಗದ ಯುವ ನಟರು, ತಂತ್ರಜ್ಞರು, ನಟಿಯರು ಹಾಗೂ ಯಶ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ಧನಂಜಯ್ ರೀತಿಯ ಸ್ಟಾರ್ ನಟರು ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆಯನ್ನೇರಿ ಅಪ್ಪು ಅವರ ಜತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು ಹಾಗೂ ಗಂಧದ ಗುಡಿ ಚಿತ್ರದ ಕುರಿತು ಮಾತನಾಡಿ ಚಿತ್ರವನ್ನು ಮೊದಲ ದಿನವೇ ಚಿತ್ರಮಂದಿರದಲ್ಲಿ ವೀಕ್ಷಿಸಲು ಕಾಯುತ್ತಿದ್ದೇವೆ ಎಂದು ಹೇಳಿಕೆಗಳನ್ನು ನೀಡಿದರು. ಹೀಗೆ ಬಹುತೇಕ ಕನ್ನಡ ಚಿತ್ರರಂಗವೇ ಭಾಗವಹಿಸಿದ್ದ ಈ ಕಾರ್ಯಕ್ರಮಕ್ಕೆ ಹಲವು ಸ್ಟಾರ್ ನಟರು ಗೈರಾಗಿದ್ದರು. ಈ ಪೈಕಿ ಇತ್ತೀಚಿಗಷ್ಟೆ ಕಾಂತಾರ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಕೂಡ ಓರ್ವರು. ಅಪ್ಪು ಅವರ ಮೇಲೆ ದೊಡ್ಡ ಮಟ್ಟದ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದ ರಿಶಬ್ ಶೆಟ್ಟಿ ಅವರು ಇಂತಹ ಮಹೋನ್ನತ ಕಾರ್ಯಕ್ರಮಕ್ಕೆ ಏಕೆ ಆಗಮಿಸಲಿಲ್ಲ ಎಂಬ ಪ್ರಶ್ನೆಯು ಕೂಡ ಅಭಿಮಾನಿಗಳಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಸ್ವತಃ ರಿಷಬ್ ಶೆಟ್ಟಿ ಅವರೇ ಉತ್ತರವನ್ನು ನೀಡಿದ್ದು, ಅಪ್ಪು ಅವರ ಬಳಿ ಕ್ಷಮೆ ಯಾಚಿಸಿದ್ದಾರೆ.

ಪೂರ್ವನಿಯೋಜಿತ ಕಾರ್ಯಕ್ರಮ ಕಾರಣ, ಅಪ್ಪು ಬಳಿ ಕ್ಷಮೆಯಾಚಿಸಿದ ರಿಷಬ್
ಸದ್ಯ ಕಾಂತಾರ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ರಿಷಬ್ ಶೆಟ್ಟಿ ನಿರತರಾಗಿದ್ದಾರೆ. ಈ ಸಲುವಾಗಿ ಬಹ್ರೇನ್ ಪ್ರವಾಸ ಕೈಗೊಂಡಿರುವ ರಿಷಬ್ ಶೆಟ್ಟಿ ಪುನೀತ ಪರ್ವ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ ಈ ರೀತಿ ಬರೆದುಕೊಂಡಿದ್ದಾರೆ: 'ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬಹ್ರೇನ್ನಲ್ಲಿರುವ ಕಾರಣ, ಇಂದಿನ 'ಪುನೀತಪರ್ವ'ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ, ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆಯಿರಲಿ, ಮೊದಲ ದಿನವೇ ಗಂಧದಗುಡಿಯಲ್ಲಿ ಭೇಟಿಯಾಗೋಣಾ.'

ಮಿಸ್ ಮಾಡಿಕೊಂಡೆವು ಎಂದ ನೆಟ್ಟಿಗರು, ಅಪ್ಪು ಫ್ಯಾನ್ಸ್ ಪ್ರತಿಕ್ರಿಯೆ ಏನು?
ರಿಷಬ್ ಶೆಟ್ಟಿ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಹಾಗೂ ಅಪ್ಪು ಅಭಿಮಾನಿಗಳು ರಿಷಬ್ ಶೆಟ್ಟಿ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಆಗಮಿಸಿದ್ದ ಈ ಕಾರ್ಯಕ್ರಮಕ್ಕೆ ನೀವು ಸಹ ಆಗಮಿಸಬೇಕಿತ್ತು ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಅತ್ತ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅಪ್ಪು ಸರ್ ಮೇಲೆ ನಿಮಗಿರುವ ಅಭಿಮಾನಕ್ಕೆ ಚಿರಋಣಿ, ನಿಮ್ಮ ಸರಳತೆ ಹೀಗೇ ಇರಲಿ ನೀವು ಹೇಳಿದಂತೆ ಗಂಧದಗುಡಿ ಬಿಡುಗಡೆ ದಿನ ಎಲ್ಲರೂ ಸೇರೋಣ ಎಂದು ರಿಪ್ಲೈ ಮಾಡಿದ್ದಾರೆ.

ಡಿಪಿ ಬದಲಿಸಿದ್ದ ರಿಷಬ್ ಶೆಟ್ಟಿ
ಇನ್ನು ಪುನೀತ ಪರ್ವ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನವೇ ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಡಿಪಿಯನ್ನು ಬದಲಾಯಿಸಿದ್ದರು. ಗಂಧದ ಗುಡಿ ಚಿತ್ರದ ಅಪ್ಪು ಹಾಗೂ ಅಣ್ಣಾವ್ರ ಪೋಸ್ಟರ್ ಅನ್ನು ರಿಷಬ್ ಶೆಟ್ಟಿ ಡಿಪಿಯಾಗಿ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಕಾಂತಾರ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡ ನಂತರ ಈ ಚಿತ್ರವನ್ನು ನಾನು ಅಪ್ಪು ಸರ್ ಅವರಿಗೆ ಅರ್ಪಿಸುತ್ತೇನೆ ಎಂದೂ ಸಹ ರಿಷಬ್ ಶೆಟ್ಟಿ ಘೋಷಿಸಿದ್ದರು.


Click it and Unblock the Notifications











