"ನನಗಾದ ಅನುಭವ ನನಗಷ್ಟೇ ಇರಲಿ": ರಿಷಬ್ಗೆ 'ದೈವ ಆವಾಹನೆ' ಆಗಿದ್ದು ನಿಜನಾ..?
ನಟ ರಿಷಬ್ ಶೆಟ್ಟಿ ತಾವೇ ರಚಿಸಿ, ನಟಿಸಿ, ನಿರ್ದೇಶಿಸಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ 'ಕಾಂತಾರ' ನಾಳೆ (ಸಪ್ಟೆಂಬರ್ 30) ರಂದು ತೆರೆ ಕಾಣುತ್ತಿದೆ. ಇಂದು ಸಂಜೆಯಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಸಿನಿಮಾ ಪ್ರಿಯರು ಈಗಾಗಲೇ ಪ್ರೀಮಿಯರ್ ಶೋಗಳ ಟಿಕೆಟ್ಗಳನ್ನು ಸಹ ಕಾಯ್ದಿರಿಸಿದ್ದಾರೆ. 'ಕಾಂತಾರ' ಟಿಕೆಟ್ ಬುಕ್ಕಿಂಗ್ ಕೂಡ ಭರದಿಂದ ಸಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹೊರತು ಪಡಿಸಿ ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮೊದಲ ಬಾರಿಗೆ ರಿಷಬ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ 'ಕಾಂತಾರ' ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ.
'ಕಾಂತಾರ' ಟ್ರೈಲರ್ನಲ್ಲಿ ಹಾಗೂ ಪೋಸ್ಟರ್ನಲ್ಲಿ ಕರಾವಳಿ ಭಾಗದ ಕಂಬಳ ಹಾಗೂ ಭೂತಾರಾಧನೆಯನ್ನು ಹೈಲೈಟ್ ಮಾಡಗಿದೆ. ಅಲ್ಲದೇ ರಿಷಬ್ ಶೆಟ್ಟಿ ಭೂತಾರಾಧನೆ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಷಭೂಷಣದಲ್ಲಿ ರಿಷಬ್ ಆಕರ್ಷಿಣೀಯವಾಗಿ ಕಾಣಿಸಿಕೊಂಡಿದ್ದು, ಕರಾವಳಿಯ ಪವಿತ್ರ ಆರಾಧನೆ ಭೂತಾರಾಧನೆಯ ಚಿತ್ರೀರಣದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರಿಗೆ ವಿಶೇಷ ಅನುಭವವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ.

ನನಗಾದ ಅನುಭವ ನನಗಷ್ಟೇ ಇರಲಿ ಎಂದ ರಿಷಬ್ ಶೆಟ್ಟಿ
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್ ದೈವಾರಾಧನೆ ಎನ್ನುವಂತದ್ದು ನಮ್ಮ ಮನಸ್ಸಿನಲ್ಲಿ. ನಾವು ದೇವರನ್ನು ಹೇಗೆ ನಂಬುತ್ತೇವೋ, ಪೂಜಿಸುತ್ತೇವೋ ಹಾಗೆ ದೈವಗಳನ್ನು ನಂಬುತ್ತೇವೆ ಪೂಜಿಸುತ್ತೇವೆ. ಹರಕೆ ಹೊರುತ್ತೇವೆ. ನಮಗೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಮುಂದಿನ ಪೀಳಿಗೆಗೂ ಅದನ್ನು ತಲುಪಿಸಲು ಪ್ರಯತ್ನ ಮಾಡುತ್ತೇವೆ. ದೈವಾರಾಧನೆ ಎನ್ನುವುದು ಅದು ಮಾತಿಗೆ ನಿಲುಕದ್ದು. ಆ ಸಮಯದಲ್ಲಿ ಆದ ಅನುಭವ ನನಗಷ್ಟೇ ಇರಲಿ, ಬಾಯಿ ಮಾತಿನಿಂದ ಹೇಳಲು ಇಷ್ಟಪಡಲ್ಲ ಎಂದಿದ್ದಾರೆ.

ಡಾ.ರಾಜ್ ಸಿನಿಮಾಗಳು ಇಂದಿಗೂ ನಮಗೆ ಸ್ಫೂರ್ತಿ
ಬಳಿಕ ತಮ್ಮ ಚಿತ್ರದ ಬಗ್ಗೆ ಮಾತನಾಡಿದ ಅವರು, ಸಿನಿಮಾ ಎನ್ನುವುದು ಡಾಕ್ಯುಮೆಂಟ್ ಕೂಡ ಆಗಬೇಕು. ಕೇವಲ ಎಂಟರ್ಟೈನ್ಮೆಂಟ್ ಆಗಬಾರದು. ಸಿನಿಮಾ ಬರಿ ಎಂಟರ್ಟೈನ್ಮೆಂಟ್ ಆದರೆ ನೋಡುತ್ತೇವೆ, ಖುಷಿ ಪಡುತ್ತೇವೆ. ಆದರೆ ಯಾವಾಗ ಒಂದು ಸಿನಿಮಾ ಡಾಕ್ಯುಮೆಂಟ್ ಆಗುತ್ತದೆಯೋ ಅದು ಮುಂದಿನ ಪೀಳಿಗೆಯನ್ನು ತಲುಪುತ್ತದೆ. ಯಾಕೆಂದರೆ ಡಾ.ರಾಜ್ ಕುಮಾರ್ ಅವರ ಅದೆಷ್ಟೋ ಸಿನಿಮಾಗಳು ಇಂದಿಗೂ ನಮಗೆ ಸ್ಫೂರ್ತಿ. ಅವರ ಚಿತ್ರಗಳಿಂದ ನಾವು ಇಂದಿಗೂ ಅನೇಕ ವಿಚಾರಗಳನ್ನು ಕಲಿಯುತ್ತಿದ್ದೇವೆ ಎಂದಿದ್ದಾರೆ.

ಸಿನಿಮಾವೇ ಒಂದು ದಂತ ಕತೆ
ಮಾತು ಮುಂದುವರಿಸಿದ ಅವರು, ಸಿನಿಮಾ ಅಂದ್ರೆ ಗೂಗಲ್ ಸರ್ಚ್ ಇದ್ದಂತೆ ಕೂಡ. ಸಿನಿಮಾವೇ ಒಂದು ದಂತ ಕತೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಆ ವಿಚಾರ ಹೋಗುಬೇಕು.ನಮ್ಮ ಹಿಂದೂ ಧರ್ಮದಲ್ಲಿ ಅನೇಕ ಆಚರಣೆಗಳಿವೆ. ನಮ್ಮ ಸಂಸ್ಕೃತಿ ನಮ್ಮ ಆಚರಣೆಗಳ ಬಗ್ಗೆ ನಮಗೆ ತಿಳಿದಿರಬೇಕು. ನಮ್ಮ ಪೂರ್ವಜರು ಯಾಕೆ ಈ ರೀತಿಯ ಆಚರಣೆಗಳನ್ನು ಮಾಡಿದ್ದಾರೆ. ಈ ವಿಚಾರಗಳೆಲ್ಲ ನಮಗೆ ತಿಳಿದಿಲ್ಲ ಎಂದರೆ, ನಮ್ಮ ಬದುಕೆ ಸಪ್ಪೆಯಾಗಿ ಬಿಡುತ್ತದೆ. ಮತ್ತೆ ನಮಗೆ ಆ ವಿಚಾರಗಳು ತಿಳಿಯುವುದಿಲ್ಲ ಎಂದರು ರಿಷಬ್ ಶೆಟ್ಟಿ.

ಯಕ್ಷಗಾನದಿಂದ ಎಲ್ಲವನ್ನೂ ತಿಳಿದಿದ್ದೇನೆ
ನಾನು ರಾಮಾಯಣ ಓದಿಲ್ಲ. ಆದರೆ ನನಗೆ ಅಲ್ಲಿನ ಪಾತ್ರಗಳು ಗೊತ್ತು. ಅಲ್ಲಿ ನಡೆದ ಸನ್ನಿವೇಶಗಳು ಗೊತ್ತು. ಆ ಕತೆ ಏನು ಅಂತಾ ಗೊತ್ತು. ರಾಮಾಯಣ ಸಮಾಜಕ್ಕೆ ಏನು ಹೇಳಲು ಹೊರಟಿದೆ ಎನ್ನುವುದು ಗೊತ್ತು. ಆ ಕಥೆಗಳು ನಮ್ಮ ಬದುಕಿಗೆ ಏನು ಕೊಡುತ್ತಿವೆ ಎನ್ನುವುದು ನಮಗೆ ಗೊತ್ತು. ಹೇಗೆಂದರೆ ಯಕ್ಷಗಾನದಿಂದ. ನಾವು ಬಾಲ್ಯದಿಂದಲೂ ಯಕ್ಷಗಾನವನ್ನು ನೋಡಿ ಕಣ್ಣಿಗೆ ಕಟ್ಟಿದ ಹಾಗೆ ಇದನೆಲ್ಲ ತಿಳಿದುಕೊಂಡಿದ್ದೇವೆ. ಈ ಕೆಲಸ ಸಿನಿಮಾಗಳಿಂದಲೂ ಆಗಬೇಕು ಎಂದರು.


Click it and Unblock the Notifications











