"ಪೌರಾಣಿಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತೀನಿ" ಎಂದ ರಿಷಬ್ ಶೆಟ್ಟಿ; ಮತ್ತೆ 'ರಾಂಡಾಮೂಳಂ' ಬಗ್ಗೆ ಚರ್ಚೆ ಶುರು
'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಈಗಾಗಲೇ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ಡಿವೈನ್ ಸ್ಟಾರ್ ಯಾವ ಸಿನಿಮಾ ಮಾಡ್ತಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಷಬ್ ಶೆಟ್ಟಿ ಹೆಸರು ಮಾರ್ದನಿಸುತ್ತಿದೆ. ಸ್ಟಾರ್ ಫಿಲ್ಮ್ ಮೇಕರ್ಸ್ ಕನ್ನಡದ ನಟನ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. 'ಜೈ ಹನುಮಾನ್' ಮಾತ್ರವಲ್ಲ, ಶಿವಾಜಿ ಬಯೋಪಿಕ್ ಸಿನಿಮಾ ಘೋಷಣೆಯಾಗಿದೆ. ರಾಜಮೌಳಿ ಶಿಷ್ಯನ ಜೊತೆಗೂ ಒಂದು ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರುವಂತಹ ಸಿನಿಮಾಗಳೇ.

ರಿಷಬ್ ಶೆಟ್ಟಿ ಕನ್ನಡ ಚಿತ್ರ ನಿರ್ದೇಶಿಸಿ ನಟಿಸುವುದು ಯಾವಾಗ ಎನ್ನುವ ಪ್ರಶ್ನೆ ಕೆಲವರು ಕೇಳುತ್ತಿದ್ದಾರೆ. ಪರಭಾಷಾ ಫಿಲ್ಮ್ ಮೇಕರ್ಸ್ ಕಾಂಬಿನೇಷನ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿಕೊಂಡು ಇರ್ತಾರಾ ಎನ್ನುವ ಅನುಮಾನ ಶುರುವಾಗಿದೆ. ಆದರೆ 'ಕಾಂತಾರ' ಸರಣಿ ಬಳಿಕ ಮತ್ತೊಂದು ಪೌರಾಣಿಕ ಕಥಾಹಂದರದ ಸಿನಿಮಾ ಕೆಲಸಗಳು ನಡೀತಿದೆ ಎಂದು ಸ್ವತಃ ರಿಷಬ್ ಶೆಟ್ಟಿ ಹೇಳಿದ್ದಾರೆ. CNN-News18 ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಅದರ ಬೆನ್ನಲ್ಲೇ 'ರಾಂಡಾಮೂಳಂ' ಬಗ್ಗೆ ಊಹಾಪೋಹ ಶುರುವಾಗಿದೆ.
ಎಂಟರ್ಟೈನ್ಮೆಂಟ್ ಲೀಡರ್ ಆಫ್ ದ ಇಯರ್ ಪ್ರಶಸ್ತಿ ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
"1000 ಕೋಟಿ ರೂ. ಕಲೆಕ್ಷನ್ ಫ್ರಾಂಚೈಸಿ ಸಿನಿಮಾ ಮಾಡ್ದೆ. ಇದೆಲ್ಲವೂ ಪ್ರೇಕ್ಷಕರು ಕೊಟ್ಟಿದ್ದು. ನಮ್ಮ ಊರಿನ ಕಥೆ ಹೇಳ್ದೆ. ನಮ್ಮ ಮೂಲದ ಕಥೆ ಜಾಗತಿಕ ಕಥೆ ಎನ್ನುವುದು ಸಾಬೀತಾಯಿತು. 4 ವರ್ಷಗಳಿಂದ 'ಕಾಂತಾರ' ಪ್ರಪಂಚದಲ್ಲಿದ್ದೆ. ಹಾಗಾಗಿ ಸದ್ಯ ನಿರ್ದೇಶನ ಪಕ್ಕಕ್ಕಿಟ್ಟು 'ಜೈ ಹನುಮಾನ್' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರೀಕರಣ ಶುರುವಾಗಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಬಹುದು. ನಿರ್ದೇಶಕನಾಗಿ ಯಾವ ಸಿನಿಮಾ ಎನ್ನುವುದು ರಿವೀಲ್ ಆಗಿಲ್ಲ. ಒಂದು ಪೌರಾಣಿಕ ಚಿತ್ರಕ್ಕಾಗಿ ಕೆಲಸ ಮಾಡ್ತಿದ್ದೀನಿ" ಎಂದಿದ್ದಾರೆ.
ಮಲಯಾಳಂನಲ್ಲಿ ಎಂ. ಟಿ. ವಾಸುದೇವನ್ ನಾಯರ್ ಬರೆದ 'ರಾಂಡಾಮೂಳಂ' ಕಾದಂಬರಿ ಆಧರಿಸಿ ಸಿನಿಮಾ ಮಾಡುವ ಪ್ರಯತ್ನಗಳು ನಡೀತಿದೆ. ಈ ಹಿಂದೆ ಮೋಹನ್ ಲಾಲ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. 1000 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಆ ಸಿನಿಮಾ ನಿಂತು ಹೋಗಿತ್ತು. ಅದೇ ಕಥೆಯನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಭೀಮನ ದೃಷ್ಟಿಕೋನದಲ್ಲಿ ಮಹಾಭಾರತ ಕಾವ್ಯವನ್ನು 'ರಾಂಡಾಮೂಳಂ' ಕಾದಂಬರಿ ರೂಪದಲ್ಲಿ ರಚಿಸಲಾಗಿದೆ. ಭೀಮನ ಪಾತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಾರೆ ಎನ್ನಲಾಗಿತ್ತು.
ರಿಷಬ್ ಶೆಟ್ಟಿ ಪೌರಾಣಿಕ ಸಿನಿಮಾ ಮಾಡುವ ಬಗ್ಗೆ ಈ ಹಿಂದೆ ಮಾತನಾಡಿರಲಿಲ್ಲ. ಇದೀಗ ಈ ಬಗ್ಗೆ ಸುಳಿವು ಕೊಟ್ಟಿರುವುದರಿಂದ ಯಾವ ಕಥೆ ಇರಬಹುದು ಎನ್ನುವ ಕುತೂಹಲ ಮೂಡಿದೆ. ನಿಜವಾಗಿಯೂ 'ರಾಂಡಾಮೂಳಂ' ಕಾದಂಬರಿಯನ್ನು ಡಿವೈನ್ ಸ್ಟಾರ್ ಕಟ್ಟಿಕೊಟ್ಟರೆ ಸಿನಿರಸಿಕರಿಗೆ ಹಬ್ಬವೇ ಸರಿ. ಬಲಭೀಮನಾಗಿ ಬಣ್ಣ ಹಚ್ಚಿದ್ರೆ ಬಾಕ್ಸಾಫೀಸ್ ಶೇಕ್ ಆಗುವುದರಲ್ಲಿ ಅನುಮಾನವಿಲ್ಲ. ಅಥವಾ ಮೋಹನ್ ಲಾಲ್ ಭೀಮನಾಗಿ ರಿಷಬ್ ಶೆಟ್ಟಿ ಸಿನಿಮಾ ನಿರ್ದೇಶನ ಮಾಡಿದ್ರು ಅಚ್ಚರಿ ಪಡಬೇಕಿಲ್ಲ.
ಯುಎಇ ಮೂಲದ ಕನ್ನಡಿಗ ಉದ್ಯಮಿ ಡಾ. ಬಿ.ಆರ್. ಶೆಟ್ಟಿ 9 ವರ್ಷಗಳ ಹಿಂದೆ 'ರಾಂಡಾಮೂಳಂ' ಕಾದಂಬರಿ ಆಧರಿಸಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ವಿ.ಎ. ಶ್ರೀಕುಮಾರ್ ಮೆನನ್ ಆಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದರು. 1000 ಕೋಟಿ ರೂ. ಬಜೆಟ್ನಲ್ಲಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದರು. ಬಳಿಕ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಯಿತು. ಕಾದಂಬರಿ ಸಿನಿಮಾ ಮಾಡುವ ಕೆಲಸಗಳು ನಡೀತಿದೆ. ಶೀಘ್ರದಲ್ಲೇ ಮಾಹಿತಿ ಕೊಡ್ತೀವಿ ಎಂದು ಎಂ. ಟಿ. ವಾಸುದೇವನ್ ನಾಯರ್ ಪುತ್ರಿ ಇತ್ತೀಚೆಗೆ ಹೇಳಿದ್ದರು.


Click it and Unblock the Notifications











