ಅಮೆಜಾನ್ ಅಮೇಜಿಂಗ್ ಇವೆಂಟ್ ; ಕಾಂತಾರ ಗುಟ್ಟು ರಟ್ಟು, ಪ್ರಿಕ್ವೆಲ್ ಬಗ್ಗೆ ಹೇಳಿದ್ದೇನು ರಿಷಬ್..?
ನಿರ್ದೇಶಕನಾಗಿ ಅಷ್ಟೇ ಅಲ್ಲ ನಾಯಕ ನಟನಾಗಿಯೂ ಗೆದ್ದವರು ರಿಷಬ್ ಶೆಟ್ಟಿ. ಕಾಂತಾರ ಚಿತ್ರದ ಮೂಲಕ ಕನ್ನಡದ ಕಹಳೆಯನ್ನ ಮೊಳಗಿಸಿದ ರಿಷಬ್ ಶೆಟ್ಟಿ, ನಿನ್ನೆಯ ಅಮೆಜಾನ್ ಪ್ರೈಂ ವಿಡಿಯೋ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಸೌತ್ & ನಾರ್ತ್ ಇಂಡಿಯಾ ಸಮಾಗಮಕ್ಕೆ ಸಾಕ್ಷಿಯಂತೆ ಇದ್ದ ಈ ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತನ್ನೂ ಹಂಚಿಕೊಂಡರು. ಕಾಂತಾರ ಕಥೆ ಇಂದು ನಿನ್ನೆ ಹುಟ್ಟಿದ್ದಲ್ಲ, ಅನೇಕ ವರ್ಷಗಳಿಂದ ಎದೆಯಲ್ಲಿ ಕಾಪಿಟ್ಟುಕೊಂಡ ಕಥೆ ಎಂದರು ರಿಷಬ್ ಶೆಟ್ಟಿ.
ವರುಣ್ ಧವನ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ವೇದಿಕೆಯನ್ನೇರಿದ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತು ಆರಂಭಿಸಿದರು. ಆ ನಂತರ ಯಕ್ಷಗಾನದಿಂದಲೇ ನಟನೆಗಿಳಿದಿದ್ದಾಗಿ ಹೇಳಿದರು. ಮೊದಲಿಂದ ನಮ್ಮ ಊರಿನ ಜನಪದ ಕತೆಗಳನ್ನು ಹೇಳುವ ಹಂಬಲ ನನ್ನಲ್ಲಿ ಇತ್ತು ಎಂದ ರಿಷಬ್ ಶೆಟ್ಟಿ, ಕಾಲೇಜ್ ನಲ್ಲಿದ್ದಾಗ ಕಾಂತಾರ ಚಿತ್ರದ ಕಥೆ ಎರಡು ಭಾಗದಲ್ಲಿ ನನ್ನ ತಲೆಯಲ್ಲಿ ಓಡ್ತಾನೇ ಇತ್ತು ಎಂದರು. ಇನ್ನೂ ಅದಾದ ನಂತರ ನಾನು ಚಿತ್ರರಂಗಕ್ಕೆ ಬಂದೆ. ಚಿತ್ರ ಮಾಡುವ ಕಲೆ ಅರಿತುಕೊಂಡೆ. ಕಾಂತಾರ ಚಿತ್ರದ ಚಿತ್ರಕಥೆಯನ್ನೂ ಸಿದ್ದ ಪಡಿಸಿಕೊಂಡೆ, ನನ್ನ ಸೌಭಾಗ್ಯ ಸರಿಯಾದ ಸಮಯಕ್ಕೆ ಹೊಂಬಾಳೆ ಸಂಸ್ಥೆ ನನಗೆ ಸಿಕ್ಕಿತು ಎಂದರು ರಿಷಬ್ ಶೆಟ್ಟಿ.

ಇನ್ನೂ ಇದೇ ಸಮಯದಲ್ಲಿ ಕಾಂತಾರ ಚಿತ್ರದ ಮೊದಲ ಭಾಗದ ಗುಟ್ಟನ್ನೂ ರಟ್ಟು ಮಾಡಿದ ರಿಷಬ್ ಶೆಟ್ಟಿ, 'ಕಾಂತಾರ 2'ಗಾಗಿ ನಮ್ಮ ಊರಿನ ಬಳಿಯೇ ದೊಡ್ಡದಾದ ಸೆಟ್ ನಿರ್ಮಾಣ ಮಾಡಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ ಎಂದರು. 'ಕಾಂತಾರ' ಸಿನಿಮಾದ ಚಿತ್ರೀಕರಣ ಮಾಡುವಾಗಲೇ ಸೀಕ್ವೆಲ್ ಮಾಡುವ ಪ್ಲ್ಯಾನ್ ಇತ್ತು. 'ಕಾಂತಾರ' ಸಿನಿಮಾ ಬಿಡುಗಡೆ ಆದ ಬಳಿಕ ಭಾರತದ ಪ್ರೇಕ್ಷಕರು ಆ ಸಿನಿಮಾಕ್ಕೆ ಕೊಟ್ಟ ಗೌರವ ಬಹಳ ದೊಡ್ಡದು. ಅದು ನನ್ನ ಪುಣ್ಯವೆಂದೇ ನಾನು ಭಾವಿಸಿದ್ದೀನಿ ಎಂದು ತಲೆ ಬಾಗಿದರು ರಿಶಬ್ ಶೆಟ್ಟಿ

ಕಾರ್ಯಕ್ರಮದಲ್ಲಿ ರಿಷಬ್ ಮಾತ್ರ ಅಲ್ಲ ಹೊಂಬಾಳೆ ಫಿಲ್ಮ್ಸ್ನ ಸಹ ನಿರ್ಮಾಪಕ ಆಗಿರುವ ಚೆಲುವೇ ಗೌಡ ಕೂಡ ಇದ್ದರು. ರಿಷಬ್ ನಂತರ ಅವರು ಕೂಡ ಚಿತ್ರದ ಕುರಿತು ಕೆಲ ಮಾಹಿತಿ ಹಂಚಿಕೊಂಡರು.'ಕಾಂತಾರ' ಅಥವಾ ಇನ್ಯಾವುದೇ ಕತೆಯನ್ನು ನಾವು ಆಯ್ಕೆ ಮಾಡುವಾಗ ನಾವು ಪ್ರೇಕ್ಷಕರಿಗೆ ಏನು ಭಿನ್ನವಾಗಿ ನೀಡುತ್ತಿದ್ದೇವೆ ಎಂಬುದನಷ್ಟೇ ನಾವು ನೋಡುತ್ತೇವೆ ಎಂದ ಚೆಲುವೇ ಗೌಡ , ಕಾಂತಾರ ನಮ್ಮ ನೆಲದ ಕತೆ ಅದರಲ್ಲಿಯೂ ಕರಾವಳಿ ಭಾಗದ ಸಂಸ್ಕೃತಿ ಈ ಕತೆಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸುವ ಪ್ರಯತ್ನ ನಾವು ಮಾಡಿ, ಅದ್ರಲ್ಲಿ ಯಶಸ್ವಿಯೂ ಆಗಿದ್ದಾಗಿ ಹೇಳಿದರು

ಅಂದ ಹಾಗೇ ಕಾಂತಾರ ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಂನಲ್ಲಿದೆ. ಇನ್ನೂ ವಿಶೇಷ ಅಂದರೆ ರಿಷಬ್ ಶೆಟ್ಟಿ ಕಾಂತಾರ ಮೊದಲ ಭಾಗದ ಚಿತ್ರೀಕರಣ ಇನ್ನೂ ಆರಂಭವನ್ನೇ ಮಾಡಿಲ್ಲ. ಆದರೆ ಅದಕ್ಕೂ ಮೊದಲೇ ಕಾಂತಾರ ಪ್ರಿಕ್ವೆಲ್ ನ ಹಕ್ಕುಗಳನ್ನ ಅಮೆಜಾನ್ ಖರೀದಿಸಿದೆ. ಅಮೆಜಾನ್ ಹಾಗೂ ಹೊಂಬಾಳೆ ನಡುವೆ ನಡೆದ ಡೀಲ್ ಎಷ್ಟು ಕೋಟಿಗೆ ಕುದುರಿದೆ ಅನ್ನುವುದು ಸದ್ಯಕ್ಕೆ ನಿಗೂಡ ರಹಸ್ಯ

ಒಟ್ಟಿನಲ್ಲಿ ಕನ್ನಡ ಚಿತ್ರಗಳಿಗೆ ಒಟಿಟಿಯಲ್ಲಿ ಬೆಲೆ ಇಲ್ಲ ಅನ್ನುವ ಮಾತಿನ ನಡುವೆ, ಕಾಂತಾರ ಚಿತ್ರದ ಮೊದಲ ಭಾಗದ ಹಕ್ಕುಗಳು ಬಿಕರಿಯಾಗಿವೆ. ಅದು ಚಿತ್ರದ ಚಿತ್ರೀಕರಣಕ್ಕೂ ಮುನ್ನವೇ. ಬಹುಶ: ಕನ್ನಡ ಚಿತ್ರದ ಚಿತ್ರೀಕರಣಕ್ಕೂ ಮುನ್ನವೇ ಒಟಿಟಿ ಅಂಗಳದಲ್ಲಿ ಇಂಥಹದ್ದೊಂದು ಡೀಲ್ ಹಿಂದೆ ನಡೆದ ಉದಾಹರಣೆ ಚಂದನವನದಲ್ಲಿ ಇಲ್ಲ. ಈ ಅರ್ಥದಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಕೂಡ ಒಂದು ದಾಖಲೆ. ಕನ್ನಡ ಚಿತ್ರರಂಗ ಹೆಮ್ಮೆ ಪಡಲು ಇಷ್ಟು ಸಾಕಲ್ಲವೇ..?


Click it and Unblock the Notifications











