ತಮ್ಮ, ನೀನು ಚಿತ್ರರಂಗದ ಆಸ್ತಿ ; ತಮಿಳಿನ 'ಯೂತ್' ಚಿತ್ರಕ್ಕೆ ಮನಸೋತ ರಿಷಬ್ ಶೆಟ್ಟಿ - ಕನ್ನಡ ಸಿನಿಮಾಸಕ್ತರ ಅಸಮಾಧಾನ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಕನ್ನಡದ ಹೊಸಬರ ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್ ಗಳೇ ಆಸರೆಯಾಗಿದ್ದರು. ಕಣ್ತುಂಬ ಕನಸೊತ್ತು ಚಿತ್ರರಂಗಕ್ಕೆ ಬರುವ ಹೊಸ ಹುಡುಗರಿಗೆ ಕನ್ನಡದ ಯಾರಾದರೂ ಒಬ್ಬ ಸ್ಟಾರ್ ತಮ್ಮ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರೆ ಅದೇ ಬಹುದೊಡ್ಡ ವಿಷಯವಾಗುತ್ತಿತ್ತು.
ಇನ್ನೂ ಟ್ವಿಟ್ ಮಾಡಿದರಂತೂ ಮುಗಿದೇ ಹೋಯ್ತು. ಅಪ್ಪಿ ತಪ್ಪಿ ಬೇರೆ ಭಾಷೆಯ ಸ್ಟಾರ್ ಗಳೇನಾದರೂ ಮೆಚ್ಚಿ ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ತಮ್ಮ ಚಿತ್ರದ ಪ್ರಚಾರಕ್ಕೆ ಇದರಿಂದ ಅನುಕೂಲವಾಗುತ್ತೆ ಎನ್ನುವ ಉದ್ದೇಶ ಇವರ ಈ ಸಂಭ್ರಮದ ಹಿಂದೆ ಇರುತ್ತಿತ್ತಾದರೂ ಒಂದು ರೀತಿಯ ಪುಳುಕ ಆವರಿಸಿಕೊಳ್ಳುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ಯಾನ್ ಇಂಡಿಯಾ ಅಲೆ ಎದ್ದಿದೆ. ಹೀಗಾಗಿ ನಮ್ಮ ಸ್ಟಾರ್ ಗಳು ಈಗ ನಮ್ಮ ಮನೆಯ ಸದಸ್ಯರ ಕಡೆ ಗಮನ ಕೊಡುವುದನ್ನು ಕಡಿಮೆ ಮಾಡಿದ್ದಾರೆ. ಬದಲಿಗೆ ಅಕ್ಕ-ಪಕ್ಕದ ಮನೆಯವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪರಭಾಷೆಯ ಚಿತ್ರಗಳನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಉದಾಹರಣೆಗೆ ರಿಷಬ್ ಶೆಟ್ಟಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಕನ್ನಡದ ಡಿವೈನ್ ಸ್ಟಾರ್ ಈಗ ಕನ್ನಡ ಚಿತ್ರರಂಗದಲ್ಲಿ ಇಲ್ಲ. ಬದಲಿಗೆ ಪರಭಾಷೆಯ ಪಾಲಾಗಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಒಂದಾದ ಮೇಲೊಂದರಂತೆ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಇಂಥಾ ರಿಷಬ್ ಸದ್ಯ ತಮಿಳಿನ ''ಯೂತ್'' ಚಿತ್ರಕ್ಕೆ ಮನ ಸೋತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಡೀ ತಂಡ ಮತ್ತು ತಂಡದ ಪ್ರಯತ್ನವನ್ನು ಬಾಯ್ತುಂಬ ಹೊಗಳಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಿಷಬ್ ಬಹಳ ದಿನಗಳ ನಂತರ ಇಡೀ ಸಿನಿಮಾ ನೋಡುವಾಗ ನನ್ನ ಮುಖದಲ್ಲಿ ನಗು ಮೂಡಿತ್ತು ಎಂದು ಹೇಳಿದ್ದಾರೆ. ''ಯೂತ್'' ಸಿನಿಮಾ ಪ್ರೀತಿ, ಸ್ನೇಹ ಮತ್ತು ಆಳವಾದ ಭಾವನೆಗಳಿಂದ ಕೂಡಿದೆ. ಇದು ಎಲ್ಲ ಪೋಷಕರಿಗೆ ಅರ್ಪಿಸಲಾದ ಹೃದಯಸ್ಪರ್ಶಿ ಗೌರವ ಎಂದು ಹೇಳಿರುವ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿರುವ ಹೊಸ ಹುಡುಗ ಕೆನ್ ಕರುಣಾಸ್ ಅವರನ್ನು ಹೊಗಳಿದ್ದಾರೆ.

ಕಥೆ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದಲ್ಲದೇ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಕೆನ್ ಕರುಣಾಸ್ ಅವರ ಪ್ರತಿಭೆಯನ್ನು ಕೊಂಡಾಡಿರುವ ರಿಷಬ್, ಬರವಣಿಗೆ, ನಿರ್ದೇಶನ ಮತ್ತು ನಟನೆಯನ್ನು ಒಬ್ಬನೇ ವ್ಯಕ್ತಿ ಇಷ್ಟು ಸೂಕ್ಷ್ಮವಾಗಿ ನಿಭಾಯಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಸಹೋದರ ಕೆನ್, ನೀವು ಚಿತ್ರರಂಗದ ಆಸ್ತಿಯಾಗಲಿದ್ದೀರಿ ಎಂದು ಬೆನ್ನು ತಟ್ಟಿದ್ದಾರೆ.
ರಿಷಬ್ ಅವರ ಈ ನಡೆ ಹಲವರಿಗೆ ಇಷ್ಟವಾಗಿಲ್ಲ. ಹೀಗಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿರುವ ಕನ್ನಡದ ಸಿನಿಮಾಸಕ್ತರು, ಕನ್ನಡ ಚಿತ್ರವನ್ನು ಬೆಂಬಲಿಸಿ, ಕನ್ನಡ ಚಿತ್ರರಂಗವನ್ನು ಬೆಳೆಸಿ ಎಂಬ ಮನವಿಯನ್ನು ಮಾಡಿಕೊಂಡಿದ್ಧಾರೆ. ನಮ್ಮ ನಿರ್ದೇಶಕರು, ನಾಯಕ ನಟರು ಒಂದು ಹಂತಕ್ಕೆ ಬೆಳೆದ ಮೇಲೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಕನ್ನಡ ಚಿತ್ರರಂಗವನ್ನು ಮುಂದಕ್ಕೆ ಕೊಂಡೊಯ್ಯುವ ಬದಲು, ತೆಲುಗು, ತಮಿಳು, ಅಂತ ಬೇರೆ ಇಂಡಸ್ಟ್ರೀ ಬೆನ್ನು ಬೀಳುತ್ತಾರೆ. ಇದೇ ವಿಚಾರಕ್ಕೆ ಮೊದಲು ಬೇರೆಯವರನ್ನು ಟೀಕಿಸುತ್ತಿದ್ದ ರಿಷಬ್ ಶೆಟ್ಟಿ ಈಗ ತಾವೇ ಅದೇ ಬಲೆಗೆ ಬಿದ್ದಂತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲ ಕನ್ನಡದಲ್ಲಿ ಈ ವರ್ಷ ಎಷ್ಟೊಂದು ಒಳ್ಳೆಯ ಚಿತ್ರಗಳು ಬಂದಿವೆ, ಆದರೆ ಆ ಚಿತ್ರದ ಕುರಿತು ಮಾತನಾಡಲು, ಟ್ವಿಟ್ ಮಾಡಲು ನಿಮಗೆ ಸಮಯ ಇಲ್ಲ ಎಂದು ಕೂಡ ಕಿಡಿ ಕಾರಿರುವ ಕೆಲವರು ಯಾರದ್ದೋ ಒತ್ತಡಕ್ಕೆ ಮಣಿದು ನೋಡಲು ಸಹ್ಯವಾಗದ ಚಿತ್ರವನ್ನು ಕೊಂಡಾಡುವ ಅವಶ್ಯಕತೆ ಇಲ್ಲ ಎಂದಿದ್ಧಾರೆ.
ಅಂದ್ಹಾಗೇ ''ಯೂತ್'' ಸದ್ಯ ಚಿತ್ರಮಂದಿರದಲ್ಲಿ ಇಲ್ಲ. ಬದಲಿಗೆ ಓಟಿಟಿಗೆ ಬಂದಿದೆ. ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡಕ್ಕೆ ಡಬ್ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆ ಹಲವು ತಮಿಳು ಚಿತ್ರಪ್ರೇಮಿಗಳು ಇದೇ ಮಾತನ್ನು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದಾಗ ನೀವು ಹೇಳಬೇಕಿತ್ತು, ಈಗ ತುಂಬಾ ತಡವಾಯ್ತು ಎಂದು ಕೂಡ ಕಾಮೆಂಟ್ಗಳನ್ನು ಮಾಡಿದ್ಧಾರೆ.
ಇನ್ನು ರಿಷಬ್ ''ಯೂತ್'' ಚಿತ್ರದ ಕುರಿತು ತಮ್ಮ ಈ ಅಭಿಪ್ರಾಯವನ್ನು ಕೇವಲ ''ಎಕ್ಸ್'' ಖಾತೆಯಲ್ಲಿ ಮಾತ್ರ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ''ಯೂತ್'' ಕುರಿತು ಒಂದೇ ಒಂದು ಅಕ್ಷರ ಕೂಡ ರಿಷಬ್ ಬರೆದಿಲ್ಲ. ಇದು ಕೂಡ ಹಲವರ ಅಚ್ಚರಿಗೆ ಕಾರಣವಾಗಿದೆ.


Click it and Unblock the Notifications