'ಕಾಂತಾರ' ಬಳಿಕ ರಿಷಬ್ ಶೆಟ್ಟಿಯ ನಡೆ ಏನು? ಭದ್ರಾವತಿಯಲ್ಲಿ ಸೆಟ್ಟೇರಿತು 'ಲಾಫಿಂಗ್ ಬುದ್ಧ'
'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಎಲ್ಲಾ ಭಾಷೆಯ ಜನರಿಗೂ 'ಕಾಂತಾರ' ಸಿನಿಮಾ ಆ ಮಟ್ಟಿಗೆ ಹಿಡಿಸಿಬಿಟ್ಟಿತ್ತು. ಈ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಏನು ಮಾಡುತ್ತಾರೆ? ಅನ್ನೋದು ಯಶ್ರಂತೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ರಿಷಬ್ ಶೆಟ್ಟಿ ಮುಂದೆ ಇಡುವ ಹೆಜ್ಜೆಯನ್ನು ಎಲ್ಲಾ ಚಿತ್ರರಂಗದವರು ಎದುರು ನೋಡುತ್ತಿದ್ದಾರೆ. 'ಕಾಂತಾರ' ಬಳಿಕ ರಿಷಬ್ 'ಕಾಂತಾರ 2'ಗೆ ಸಜ್ಜಾಗುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ರಿಷಬ್ ಶೆಟ್ಟಿ ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನೇನು ಬಿಟ್ಟುಕೊಟ್ಟಿಲ್ಲ. ಆದರೂ ಸದ್ದಿಲ್ಲದೆ ಇವರ ಒಂದು ಸಿನಿಮಾ ಸೆಟ್ಟೇರಿದೆ.

ರಿಷಭ್ ಶೆಟ್ಟಿ ಸದ್ದಿಲ್ಲದೆ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ತಮ್ಮದೇ ರಿಷಭ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ 'ಲಾಫಿಂಗ್ ಬುದ್ಧ'. ಈ ಸಿನಿಮಾ ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಸಿಂಪಲ್ ಆಗಿ ಸೆಟ್ಟೇರಿದೆ.
'ಲಾಫಿಂಗ್ ಬುದ್ಧ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದರೆ, ಎಂ.ಭರತ್ ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಿದ್ದಾರೆ. ಸಿನಿಮಾ ಸೆಟ್ಟೇರುವ ಈ ಹೊತ್ತಲ್ಲಿ ಇಡೀ ತಂಡ ಒಟ್ಟಿಗೆ ಸೇರಿದ್ದು, ವಿಶೇಷ.

ಇನ್ನು ಟೆಕ್ನಿಕಲ್ ಸೈಡ್ನಲ್ಲಿ 'ಲಾಫಿಂಗ್ ಬುದ್ಧ'ಗೆ ವಿಷ್ಣು ವಿಜಯ್ ಸಂಗೀತ ನೀಡುತ್ತಿದ್ದಾರೆ. ಇವರೊಂದಿಗೆ ಚಂದ್ರಶೇಖರ್ ಕ್ಯಾಮರಾ ಹಿಡಿದರೆ, ಕೆ.ಎಂ.ಪ್ರಕಾಶ್ ಎಡಿಟಿಂಗ್ ಮಾಡುತ್ತಿದ್ದಾರೆ. ಭದ್ರಾವತಿಯಲ್ಲೇ ಸೆಟ್ಟೇರಿದ ಸಿನಿಮಾ ಮೊದಲ ಹಂತದ ಚಿತ್ರೀಕರಣವನ್ನು ಇಲ್ಲಿಯೇ ನಡೆಸಲಿದೆ.


Click it and Unblock the Notifications











