ಓಡಿ ಹೋಗೋರಲ್ಲ, ತಕ್ಕ ಉತ್ತರವನ್ನೇ ಕೊಡ್ತೀವಿ: ರಿಷಬ್ ಶೆಟ್ಟಿ
'ಕಿರಿಕ್ ಪಾರ್ಟಿ' ಚಿತ್ರತಂಡದ ವಿರುದ್ಧ ನಗರದ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ .
Recommended Video
'ಮಧ್ಯ ರಾತ್ರೀಲಿ ಹೈವೇ ರೋಡಲ್ಲಿ' ಹಾಡಿನ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಹೊಂದಿದ್ದು, ಅದೇ ಹಾಡಿನ ಸಂಗೀತವನ್ನು 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಬಳಸಲಾಗಿದೆ. 'ಕಿರಿಕ್ ಪಾರ್ಟಿ' ಸಿನಿಮಾ ತಂಡವು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಪ್ರಕರಣ ದಾಖಲಿಸಿತ್ತು. ಅದೇ ವಿಚಾರವಾಗಿ ಈಗ 'ಕಿರಿಕ್ ಪಾರ್ಟಿ' ಚಿತ್ರ ತಂಡದ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.
ವಾರೆಂಟ್ ಕುರಿತ ಪ್ರಶ್ನೆಗೆ ಉತ್ತರಿಸಿರುವ 'ಕಿರಿಕ್ ಪಾರ್ಟಿ' ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ, 'ಸಿನಿಮಾ ಬಿಡುಗಡೆ ಮಾಡುವ ಒಂದು ತಿಂಗಳ ಹಿಂದೆಯೇ ನಾವು ಹಾಡಿನ ಲಿರಿಕ್ಸ್ ಬಿಡುಗಡೆ ಮಾಡಿದ್ವಿ. ಹಾಡು ಬಿಡುಗಡೆ ಹಿಂದಿನ ದಿನವೇ ಸ್ಟೇ ತರಲು ಹೋಗಿದ್ದರು ಆದರೆ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದಿದ್ವಿ. ಪ್ರಕರಣ ದಾಖಲಿಸುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ' ಎಂದು ಲಹರಿ ಸಂಸ್ಥೆ ವಿರುದ್ಧ ಹರಿಹಾಯ್ದರು.

ಸಿನಿಮಾ ಬಿಡುಗಡೆ ಸಮಯದಲ್ಲಿ 'ನಿಮ್ಮನ್ನು ನ್ಯಾಯಾಲಯಗಳಿಗೆ ಅಲೆಸುತ್ತೇವೆ' ಎಂದು ನಮಗೆ ಬೆದರಿಕೆ ಹಾಕಿದ್ದರು. ರಾಜಿಗೆ ಬಂದಾಗಲೂ ಬೆದರಿಕೆ ಹಾಕಿದ್ದರು. ಈಗ ಈ ನೊಟೀಸ್ ಬೇರೆ. ನಾವು ಓಡಿಹೋಗೋರಲ್ಲ. ಕೋರ್ಟ್ನಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ' ಎಂದಿದ್ದಾರೆ ರಿಷಬ್ ಶೆಟ್ಟಿ.
ಹಾಡು ಬಿಡುಗಡೆ ಆದಾಗ, ನಮ್ಮ ಬಳಿ ರಾಜಿಗೆ ಬಂದಿದ್ದರು. ಪ್ರಶಾಂತ್ ಸಂಬರ್ಗಿಯೇ ರಾಜಿಗೆ ಬಂದಿದ್ದು. ನೀವು ಇಷ್ಟು ಹಣ ಕೊಡಬೇಕು ಎಂದರು ನಾವು ಒಪ್ಪಲಿಲ್ಲ. ನಾವೇ ಹಣ ಕೊಡ್ತೀವಿ ಹಾಡು ಬಿಟ್ಟುಬಿಡಿ ಎಂದರು ಅದಕ್ಕೂ ನಾವು ಒಪ್ಪದೆ, ಅದೇ ಹಾಡಿನ ಮಾದರಿಯಲ್ಲಿ ಬೇರೆ ಲಿರಿಕ್ಸ್ ಬಳಸಿ, ಬೇರೆ ವಾದ್ಯಗಳನ್ನು ಬಳಸಿ ಹಾಡು ಮಾಡಿದೆವು' ಎಂದಿದ್ದಾರೆ ರಿಷಬ್.
ಕೊರೊನಾ ಲಾಕ್ಡೌನ್ಗೆ ಮುಂಚೆ ನಾವುಗಳು ವಾಸವಿದ್ದ ಅಡ್ರೆಸ್ನಲ್ಲಿ ಈಗ ಇಲ್ಲ. ಹಾಗಾಗಿ ನೋಟೀಸ್ಗಳು ಹಳೆ ಅಡ್ರೆಸ್ಗೆ ಹೋಗಿವೆ. ಕಳೆದ ತಿಂಗಳು ರಕ್ಷಿತ್ ಶೆಟ್ಟಿಗೆ ನೊಟೀಸ್ ಸಿಕ್ಕಿದೆ, ಅವರು ಅದನ್ನು ಫಾಲೋ ಮಾಡುತ್ತಿದ್ದಾರೆ. ನಮಗೆ ಈಗ ವಿಷಯ ಗೊತ್ತಾಗಿದೆ. ನಾವು ನ್ಯಾಯಾಲಯದಲ್ಲಿಯೇ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ' ಎಂದಿದ್ದಾರೆ ರಿಷಬ್ ಶೆಟ್ಟಿ.
'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆ ಆಗಿ 5 ವರ್ಷಗಳಾಗಿವೆ. ಸಿನಿಮಾ ಬಿಡುಗಡೆ ಆದಾಗಲೇ ಲಹರಿ ಸಂಸ್ಥೆಯು ಸಿನಿಮಾ ತಂಡದ ವಿರುದ್ಧ ಪ್ರಕರಣ ದಾಖಲಿಸಿತ್ತು. ಆಗಿನಿಂದಲೂ ಪ್ರಕರಣ ನಡೆಯುತ್ತಲೇ ಇದೆ.


Click it and Unblock the Notifications











