"ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ" ಎಂದಿದ್ದೇಕೆ ರಿಷಬ್ ಶೆಟ್ಟಿ?
ಈ ವರ್ಷ ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇನ್ನು ಬಂದಿಲ್ಲ. ಕೆಲ ಸಿನಿಮಾಗಳು ಈ ವರ್ಷ ಬರೋದು ಅನುಮಾನ ಎನ್ನುವಂತಾಗಿದೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗ ಮತ್ತೆ ಸದ್ದು ಮಾಡೋದು ಗ್ಯಾರೆಂಟಿ. ಯಶ್ ನಟನೆಯ 'ಟಾಕ್ಸಿಕ್' ಹಾಗೂ ರಿಷಬ್ ಶೆಟ್ಟಿ 'ಕಾಂತಾರ-1' ಸಿನಿಮಾ 2025ರಲ್ಲಿ ತೆರೆಗಪ್ಪಳಿಸೋದು ಪಕ್ಕಾ ಆಗಿದೆ.
ಕಳೆದೆರಡು ವರ್ಷಗಳಿಂದ ರಿಷಬ್ 'ಕಾಂತಾರ' ಪ್ರೀಕ್ವೆಲ್ ಗುಂಗಿನಲ್ಲಿದ್ದಾರೆ. ಕುಂದಾಪುರದಲ್ಲಿ ಸೆಟ್ ಹಾಕಿ ಸದ್ದಿಲ್ಲದೇ ಚಿತ್ರೀಕರಣ ನಡೆಸಲಾಗುತ್ತಿದೆ. ಇತ್ತೀಚೆಗೆ ಅಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ ಎನ್ನಲಾಗ್ತಿದೆ. ಎರಡು ವರ್ಷಗಳ ಹಿಂದೆ ದಸರಾ ಸಂಭ್ರಮದಲ್ಲಿ ಬಂದಿದ್ದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಾ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಿತ್ತು. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗುವಂತಾಯಿತು. ರಿಷಬ್ ಶೆಟ್ಟಿ ನಟನೆ ಮಾತ್ರವಲ್ಲದೇ ನಿರ್ದೇಶನದಲ್ಲೂ ಸೈ ಎನಿಸಿಕೊಂಡರು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಪ್ರೀಕ್ವೆಲ್ ಬಹಳ ಅದ್ಧೂರಿಯಾಗಿ ಮೂಡಿ ಬರ್ತಿದೆ. ಫಿಲ್ಮ್ ಫೇರ್ 2023 ಪ್ರಶಸ್ತಿಗಳಲ್ಲಿ ಚಿತ್ರಕ್ಕೆ 6 ಪ್ರಶಸ್ತಿ ಸಿಕ್ಕಿದೆ.
ಅತ್ತುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ(ಕ್ರಿಟಿಕ್ಸ್) ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಗಾಯಕ(ವಹಾರ ರೂಪಂ- ಸಾಯಿ ವಿಘ್ನೇಶ್) ಹೀಗೆ 6 ಪ್ರಶಸ್ತಿಗಳನ್ನು ಚಿತ್ರ ಮುಡಿಗೇರಿಸಿಕೊಂಡಿದೆ. ಇದು ರಿಷಬ್ ಶೆಟ್ಟಿ ಹಾಗೂ ತಂಡದ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರತಂಡದ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಕಾಮೆಂಟ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ. ನೆಟ್ಟಿಗರೊಬ್ಬರ ಪೋಸ್ಟ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಧನ್ಯವಾದ ತಿಳಿಸಿದ್ದಾರೆ. ಇದೇ ಸಮಯದಲ್ಲಿ 'ಕಾಂತಾರ'-1 ಅಪ್ಡೇಟ್ ಕೇಳಿದ್ದಕ್ಕೆ "ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ" ಎಂದು ರಿಪ್ಲೇ ಮಾಡಿದ್ದಾರೆ. ರಿಷಬ್ ಕಾಮೆಂಟ್ ವೈರಲ್ ಆಗುತ್ತಿದೆ.
ರಿಷಬ್ ಶೆಟ್ಟಿ, ಸಪ್ತಮಿ ಗೌಡ ನಟನೆಯ 'ಕಾಂತಾರ' ಚಿತ್ರ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗಾಗಲೇ ಪ್ರೀಕ್ವೆಲ್ ಓಟಿಟಿ ರೈಟ್ಸ್ ಮಾತ್ರ 150 ಕೋಟಿ ರೂ.ಗೆ ಮಾರಾಟವಾಗಿದೆ. ಅಂದಾಜು 100 ಕೋಟಿ ರೂ. ಬಜೆಟ್ನಲ್ಲಿ ಕಾಡುಬೆಟ್ಟು ಶಿವನ ಹಿಂದಿನ ಕಥೆ ಹೇಳಲು ಚಿತ್ರತಂಡ ಮುಂದಾಗಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟೀಸರ್ನಿಂದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
'ಕಾಂತಾರ-1' ಸಿನಿಮಾ ಕಾರಣಕ್ಕ ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಪಕ್ಕಕ್ಕಿಟ್ಟಿದ್ದಾರೆ ರಿಷಬ್ ಶೆಟ್ಟಿ. ಹೊಂಬಾಳೆ ಸಂಸ್ಥೆ ಕೂಡ ಬಹಳ ಪ್ರತಿಷ್ಟಾತ್ಮಕವಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಈ ಬಾರಿ ಸಪ್ತಮಿ ಗೌಡ ಚಿತ್ರದಲ್ಲಿ ಇರಲ್ಲ, ರುಕ್ಮಿಣಿ ವಸಂತ್ ನಟಿಸುತ್ತಾರೆ ಎನ್ನಲಾಗ್ತಿದೆ. ಮಲಯಾಳಂ ನಟ ಜಯರಾಂ ಕೂಡ ತಂಡ ಸೇರಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ.
ಹಿಂದಿನ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಿಸಿ ಬಳಿಕ ಬೇಡಿಕೆಗೆ ತಕ್ಕಂತೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿತ್ತು. ಹಾಗೂ ಪ್ರಚಾರಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ತಂಡ ಹೋಗಿತ್ತು. ಆದರೆ 'ಕಾಂತಾರ'-1 ಪ್ಯಾನ್ ಇಂಡಿಯಾ ಸಿನಿಮಾ ಆಗಿಯೇ ಶುರುವಾಗುತ್ತಿದೆ. ಹಾಗಾಗಿ ಈ ಬಾರಿ ನಿರೀಕ್ಷೆ ಹೆಚ್ಚಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಲೆಕ್ಕಾಚಾರ ನಡೀತಿದೆ.


Click it and Unblock the Notifications











