ಅಂದು ಇದೇ ಥಿಯೇಟರ್ನಲ್ಲಿ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು 10 ಶೋಗಳು ಹೌಸ್ಫುಲ್!
ಎಲ್ಲರಿಗೂ ಒಳ್ಳೆ ಕಾಲ ಬಂದೇ ಬರುತ್ತದೆ. ಕಾಯಬೇಕು ಅಷ್ಟೆ. ನಂಬಿಕೆ ಕಳೆದುಕೊಳ್ಳದೇ ಶ್ರಮಪಟ್ಟರೆ ಯಶಸ್ಸು ಕಟ್ಟಿಟ್ಟಬುತ್ತಿ. ರಿಷಬ್ ಶೆಟ್ಟಿ ವಿಚಾರದಲ್ಲಿ ಈ ಮಾತು ಇದೀಗ ನಿಜವಾಗಿದೆ. 7 ವರ್ಷಗಳ ಹಿಂದೆ ಮಂಗಳೂರಿನ ಅದೇ ಮಲ್ಟಿಪ್ಲೆಕ್ಸ್ನಲ್ಲಿ ತಮ್ಮ ಚಿತ್ರಕ್ಕೆ ಒಂದೇ ಒಂದೇ ಶೋ ಕೊಡಿ ಎಂದು ಕಾಡಿ ಬೇಡಿ ತೆಗೆದುಕೊಂಡಿದ್ದರು. ಇಂದು ಆ ಮಲ್ಟಿಪ್ಲೆಕ್ಸ್ನ ಎಲ್ಲಾ ಶೋಗಳಲ್ಲೂ 'ಕಾಂತಾರ' ಸಿನಿಮಾ ಹೌಸ್ಫುಲ್ ಆಗಿದೆ.
ಸಕ್ಸಸ್ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಒಮ್ಮೊಮ್ಮೆ ಸಿಗುವ ಸಕ್ಸಸ್ ಹಳೇ ನೋವನ್ನೆಲ್ಲಾ ಮರೆಸಿಬಿಡುತ್ತದೆ. ಸದ್ಯ ರಿಷಬ್ ಶೆಟ್ಟಿ ಸ್ಯಾಂಡಲ್ವುಡ್ನಲ್ಲಿ ಸಖತ್ ಶೈನ್ ಆಗ್ತಿದ್ದಾರೆ. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ, ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಾ ಬಂದ ರಿಷಬ್ ಇಂದು ಮಾಸ್ ಹೀರೊ ಆಗಿ ಗೆದ್ದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ 'ಕಾಂತಾರ' ಚಿತ್ರದ ಮೂಲಕ ದೊಡ್ಡ ಹಿಟ್ ತಂದುಕೊಟ್ಟಿದ್ದಾರೆ. ಇಂತಹ ಹೊತ್ತಲ್ಲಿ ನೆಟ್ಟಿಗರೊಬ್ಬರು ರಿಷಬ್ಗೆ ಹಳೆಯ ದಿನಗಳನ್ನು ನೆನಪಿಸಿದ್ದಾರೆ.
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿ ಆರಂಭದ ದಿನಗಳಲ್ಲಿ ಸಾಕಷ್ಟು ಸೈಕಲ್ ಹೊಡೆದಿದ್ದಾರೆ. ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಏನೇನೋ ಮಾಡಿ ಒಂದು ಸಿನಿಮಾ ನಿರ್ದೇಶನ ಮಾಡಿದರೂ ಅದನ್ನು ಪ್ರೇಕ್ಷಕರಿಗೆ ತೋರಿಸಲು ಬಹಳ ಸರ್ಕಸ್ ಮಾಡುವಂತಾಗಿತ್ತು.

ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದರು!
ರಿಷಬ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ 'ರಿಕ್ಕಿ'. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಚಿತ್ರದ ಲೀಡ್ ರೋಲ್ಗಳಲ್ಲಿ ನಟಿಸಿದ್ದಾರೆ. ಸಿನಿಮಾ ಒಂದು ಮಟ್ಟಿಗೆ ಸದ್ದು ಮಾಡಿತ್ತು. ಆದರೆ ಚಿತ್ರಕ್ಕೆ ಥಿಯೇಟರ್ಗಳಲ್ಲಿ ಶೋಗಳನ್ನೇ ಕೊಟ್ಟಿರಲಿಲ್ಲ. ಕಾಡಿ ಬೇಡಿ ಅವರಿವರ ಕೈಕಾಲು ಹಿಡಿದು ಶೋ ತೆಗೆದುಕೊಂಡಿದ್ದರು. ಅಂದು ಈ ಬಗ್ಗೆ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದರು.

ಆ ಮಲ್ಟಿಪ್ಲೆಕ್ಸ್ನಲ್ಲೀಗ 'ಕಾಂತಾರ' ಆರ್ಭಟ
ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ 'ರಿಕ್ಕಿ' ಸಿನಿಮಾ ರಿಲೀಸ್ ಆದ ಎರಡೇ ವಾರಕ್ಕೆ ಶೋ ಕೊಡಲು ನಿರಾಕರಿಸಿದ್ದರು. ರಿಷಬ್ ಶೆಟ್ಟಿ ಕಾಡಿ ಬೇಡಿ ಒಂದೇ ಒಂದು ಶೋ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡಿದ್ದರು. "ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ Big Cinemas ನಲ್ಲಿ ನಾಳೆಯಿಂದ ಸಂಜೆ 7 PM show ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ticket book ಮಾಡಿ thank u" ಎಂದು ಬರೆದುಕೊಂಡಿದ್ದರು.

ರಿಷಬ್ ಶೆಟ್ಟಿ ಹಳೇ ಪೋಸ್ಟ್ ವೈರಲ್
ಅಂದು ರಿಷಬ್ ಶೆಟ್ಟಿ ಎಂದರೆ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. 'ರಿಕ್ಕಿ' ಸಿನಿಮಾ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿಬಂದರೂ, ಕೆಲವರು ಸಿನಿಮಾ ನೋಡಲು ಬಯಸಿದರೂ, ಶೋಗಳು ಸಿಕ್ಕಿರಲಿಲ್ಲ. ರಿಷಬ್ ಮಾಡಿದ್ದ ಈ ಪೋಸ್ಟ್ಗೆ ಎರಡ್ಮೂರು ಕಾಮೆಂಟ್ ಮಾತ್ರ ಬಂದಿತ್ತು. ಈಗ ಎಲ್ಲೆಲ್ಲೂ 'ಕಾಂತಾರ' ಆರ್ಭಟ ಜೋರಾಗಿದೆ. ಪರಭಾಷಿಕರು ರಿಷಬ್ ಶೆಟ್ಟಿ ಪ್ರತಿಭೆಗೆ ಬಹುಪರಾಕ್ ಹೇಳ್ತಿದ್ದಾರೆ. ಅಂದು ರಿಷಬ್ ಮಾಡಿದ್ದ ಆ ಪೋಸ್ಟ್ ಈಗ ಫುಲ್ ವೈರಲ್ ಆಗಿದೆ.

ಅಮರ ಹಳೇ ನೆನಪು ಎಂದು ರಿಷಬ್
ಅಂದು ಬಿಗ್ ಸಿನಿಮಾಸ್ನಲ್ಲಿ ಒಂದು ಶೋಗಾಗಿ ರಿಷಬ್ ಅಷ್ಟೆಲ್ಲಾ ಸರ್ಕಸ್ ಮಾಡಿದ್ದರು. ಆದರೆ ಇಂದು ಕರಾವಳಿಯ ಎಲ್ಲಾ ಥಿಯೇಟರ್ಗಳಲ್ಲೂ 'ಕಾಂತಾರ' ಸಿನಿಮಾ ಪ್ರದರ್ಶನ ಕಾಣ್ತಿದೆ. ಪ್ರೇಕ್ಷಕರು ಟಿಕೆಟ್ಗಾಗಿ ಪರದಾಡುವಂತಾಗಿದೆ. ಇಂತಾ ಹೊತ್ತಲ್ಲಿ ನೆಟ್ಟಿಗರೊಬ್ಬರು ಅಂದು ರಿಷಬ್ ಮಾಡಿದ್ದ ಟ್ವೀಟ್ ನೆನಪಿಸಿ 'ಕಾಲಾಯಾ ತಸ್ಮೈ ನಮಃ' ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಬ್, ಒಳ್ಳೆ ನೆನಪನ್ನು ನೆನಪಿಸಿದ್ದಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.


Click it and Unblock the Notifications











