Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಟ್ಟೂರಿನಲ್ಲಿ ಹೊಸ ಸಿನಿಮಾ ಆರಂಭಿಸಿದ ರಿಷಬ್ ಶೆಟ್ಟಿ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಸಿನಿಮಾ ಆರಂಭ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಘೋಷಣೆಯಾಗಿದ್ದ 'ಕಾಂತಾರ' ಸಿನಿಮಾದ ಮುಹೂರ್ತವನ್ನು ತಮ್ಮ ಹುಟ್ಟೂರಿನಲ್ಲಿ ಮುಗಿಸಿದ್ದಾರೆ ರಿಷಬ್ ಶೆಟ್ಟಿ.
ಶ್ರೀ ಆನೆಗುಡ್ಡ ದೇವಾಲಯದಲ್ಲಿ ಸಿನಿಮಾ ಮುಹೂರ್ತ ನೆರವೇರಿದ್ದು, ಸಿನಿಮಾದ ಕ್ಲ್ಯಾಪ್ ಸಹ ಆಗಿದೆ. ಮುಹೂರ್ತ ಸಮಾರಂಭಕ್ಕೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗೆ ಇತರೆ ಕೆಲವು ಪ್ರಮುಖರು, ಚಿತ್ರದ ತಾಂತ್ರಿಕ ವರ್ಗದ ಕೆಲವು ಸದಸ್ಯರು ಸಹ ಆಗಮಿಸಿದ್ದರು. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಮುಹೂರ್ತ ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ''ಕಾಂತಾರ ಚಿತ್ರದ ಮುಹೂರ್ತ ಇಂದು ಹುಟ್ಟೂರಿನ ಶ್ರೀ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ವಿಜಯ್ ಕಿರಗಂದೂರು ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಆಗಮಿಸಿ ಶುಭ ಕೋರಿದ ಪ್ರತಿಯೊಬ್ಬರುಗೂ ಪ್ರೀತಿಯ ನಮನ. 'ಕಾಂತಾರ' ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ'' ಎಂದಿದ್ದಾರೆ ರಿಷಬ್ ಶೆಟ್ಟಿ.
ಅರವಿಂದ ಕಶ್ಯಪ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಅನಿರುದ್ಧ ಮಹೇಶ್, ಪ್ರಕಾಶ್ ಕೆ ತುಮ್ಮಿನಾಡು, ಶ್ಯಾಮ್ ಪ್ರಸಾದ್, ಶನಿಲ್ ಗುರು, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಅವರುಗಳಿಗೂ ರಿಷಬ್ ಶೆಟ್ಟಿ ಧನ್ಯವಾದ ಹೇಳಿದ್ದಾರೆ.
ಹಲವು ಸಿನಿಮಾಗಳ ಮೇಲೆ ಹೊಂಬಾಳೆ ಬಂಡವಾಳ
'ಕಾಂತಾರ' ಸಿನಿಮಾವು ಕರಾವಳಿ ಪ್ರದೇಶದ ಕತೆಯನ್ನು ಆಧರಿಸಿದ್ದು, ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಮ್ಸ್ನ 11ನೇ ಸಿನಿಮಾ ಇದಾಗಿದ್ದು, ಪುನೀತ್ ರಾಜ್ ಕುಮಾರ್ ನಟನೆಯ 'ದ್ವಿತ್ವ', ಪ್ರಭಾಸ್ ನಟನೆಯ 'ಸಲಾರ್', ರಕ್ಷಿತ್ ಶೆಟ್ಟಿ ಜೊತೆಗೆ ಹೊಸ ಸಿನಿಮಾ ಇನ್ನೂ ಕೆಲವು ಸಿನಿಮಾಗಳಿಗೆ ಏಕ ಕಾಲದಲ್ಲಿ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದೆ.
ರಿಷಬ್ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಲಿದೆ
ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ, ''ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ರಿಷಬ್ ನಿರ್ದೇಶನದ ನಾಲ್ಕನೇ ಸಿನಿಮಾ 'ಕಾಂತಾರ'. ಈ ಹಿಂದೆ ರಕ್ಷಿತ್ ಶೆಟ್ಟಿ ನಟನೆಯ 'ರಿಕ್ಕಿ', 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು' ಸಿನಿಮಾಗಳನ್ನು ರಿಷಬ್ ನಿರ್ದೇಶನ ಮಾಡಿದ್ದಾರೆ. 'ಕಾಂತಾರ' ಸಿನಿಮಾದ ಬಳಿಕ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾವನ್ನು ರಿಷಬ್ ನಿರ್ದೇಶಿಸಲಿದ್ದಾರೆ. ನಂತರ 'ಕಿರಿಕ್ ಪಾರ್ಟಿ 2' ಸಿನಿಮಾವನ್ನೂ ರಿಷಬ್ ನಿರ್ದೇಶನ ಮಾಡಲಿದ್ದಾರೆ.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅಸಮಾಧಾನ
ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾದ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅಸಮಾಧಾನ ಹೊರಹಾಕಿದ್ದಾರೆ. ''ಎರಡು ವರ್ಷದ ಹಿಂದೆ ಕಂಬಳದ ಕುರಿತು 'ವೈರಮುಡಿ' ಸಿನಿಮಾ ಘೋಷಣೆ ಮಾಡಿದ್ದೆ, ಇದೀಗ ಅದೇ ವಿಷಯದ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ ಅನೌನ್ಸ ಮಾಡಿದ್ದಾರೆ, ನಮ್ಮನ್ನು ಸಂಪರ್ಕ ಮಾಡದೆ ಸಿನಿಮಾ ಘೋಷಣೆ ಮಾಡಿದ್ದಾರೆ, ಒಂದೇ ವಿಷಯದ ಬಗ್ಗೆ ಸಿನಿಮಾ ಮಾಡುವಾಗ ಕನಿಷ್ಠ ಸೌಜನ್ಯಕ್ಕಾದರೂ ಕೇಳಬಹುದಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಶಿವಣ್ಣನ ಚಿತ್ರವುಳ್ಳ 'ವೈರಮುಡಿ' ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.
'ಕಾಂತಾರ'ದಲ್ಲಿ ನಟಿಸಲಿದ್ದಾರೆ ಅರ್ಚನಾ
ಶಂಕರ್ ನಾಗ್ ನಿರ್ದೇಶಿಸಿ ಡಾ.ರಾಜ್ಕುಮಾರ್ ನಟಿಸಿದ್ದ 'ಒಂದು ಮುತ್ತಿನ ಕತೆ' ಸಿನಿಮಾದಲ್ಲಿ ನಟಿಸಿದ್ದ ಅರ್ಚನಾ 'ಕಾಂತಾರ' ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. 'ಒಂದು ಮುತ್ತಿನ ಕತೆ', 'ಗುರಿ', 'ಪ್ರೇಮಿಗಳ ಸವಾಲ್', 'ಬೆಳ್ಳಿ ನಾಗ', 'ಹುಲಿಯ' ಸಿನಿಮಾಗಳಲ್ಲಿ ಅರ್ಚನಾ ನಟಿಸಿದ್ದರು. 'ಹುಲಿಯ' ಬಳಿಕ ಕನ್ನಡದ ಯಾವುದೇ ಸಿನಿಮಾದಲ್ಲಿ ಅರ್ಚನಾ ನಟಿಸಿರಲಿಲ್ಲ. ಇದೀಗ 'ಕಾಂತಾರ' ಸಿನಿಮಾಕ್ಕಾಗಿ ಅರ್ಚನಾ ಮರಳಿ ಬರುತ್ತಿದ್ದಾರೆ.