ಕಾಂತಾರ ವರ್ಕ್ ಶಾಪ್: ಇದು ಕೇವಲ ತಾಲೀಮು ಅಲ್ಲ, ಕಥೆಯ 'ಆತ್ಮ' ಹಸ್ತಾಂತರ
'ಕಾಂತಾರ ಚಾಪ್ಟರ್ 1' ಈ ವರ್ಷ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ. ರಿಷಬ್ ಶೆಟ್ಟಿ ನಟಿಸಿ-ನಿರ್ದೇಶಿಸಿದ ಈ ಸಿನಿಮಾ ವಿಶ್ವದಾದ್ಯಂತ ₹900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಜೋರಾಗಿಯೇ ಸದ್ದು ಮಾಡಿತ್ತು. ರಿಷಬ್ ಶೆಟ್ಟಿಯನ್ನು ಮತ್ತೆ ಪ್ಯಾನ್ ಇಂಡಿಯಾದಲ್ಲಿ ಸ್ಟಾರ್ ಆಗಿ ಬಿಂಬಿಸಿದ ಸಿನಿಮಾವಿದು. ಸಿನಿಮಾ ರಿಲೀಸ್ ಆದ ಹಲವು ದಿನಗಳ ಬಳಿಕ ಕಾಂತಾರಗಾಗಿ ವರ್ಕ್ಶಾಪ್ ಮಾಡಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ 'ಕಾಂತಾರ' ಚಿತ್ರತಂಡದ ಮೊದಲ ವರ್ಕ್ ಶಾಪ್ನ ಕ್ಷಣಗಳು ಇವೆ. ಈ ಅಪರೂಪದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೊಗಳಲ್ಲಿ ರಿಷಬ್ ಶೆಟ್ಟಿ ಹಾಗೂ ಅವರ ಪ್ರಮುಖ ಕಲಾವಿದರು ಚರ್ಚೆಯಲ್ಲಿ ತೊಡಗಿರುವುದನ್ನು ನೋಡಬಹುದು. ಇದು ಚಿತ್ರೀಕರಣಕ್ಕೆ ಮುನ್ನ ನಡೆದ ಪ್ರಮುಖ ಪೂರ್ವಸಿದ್ಧತಾ ಕಾರ್ಯಕ್ರಮವಾಗಿತ್ತು. ಈ ಫೋಟೊಗಳನ್ನು ಹಂಚಿಕೊಂಡು, ಆಕ್ಷಣಗಳನ್ನು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

"ಕಾಗದದ ಮೇಲೆ ಹುಟ್ಟಿದ ಪಾತ್ರಗು ನನ್ನ ನಟರ ಮೂಲಕ ಜೀವ ಪಡೆದ ಕ್ಷಣವಿದು" ಎಂದು ರಿಷಬ್ ಬರೆದಿದ್ದಾರೆ. ಈ ವರ್ಕ್ ಶಾಪ್ ಕೇವಲ ನಟರ ತರಬೇತಿಗಾಗಿ ಇರಲಿಲ್ಲ ಎಂದು ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಇದು ಕಥೆಯ ಆತ್ಮವನ್ನು ಕಲಾವಿದರಿಗೆ ಹಸ್ತಾಂತರಿಸಿದ ವಿಶೇಷ ಕ್ಷಣವಾಗಿತ್ತು. ಇದೇ ಸಮಯದಲ್ಲಿಯೇ ಭಾವನೆಗಳಿಗೆ ಜೀವ ತುಂಬಲು ಆರಂಭಿಸಲಾಯಿತು ಎಂದು ರಿಷಬ್ ತಿಳಿಸಿದ್ದಾರೆ.
ಇದು 'ಕಾಂತಾರ' ಸಿನಿಮಾದ ಯಶಸ್ಸಿಗೆ ಮುಖ್ಯ ಕಾರಣ ಎಂಬುದನ್ನು ಅವರ ಮಾತುಗಳು ಸೂಚಿಸುತ್ತವೆ. ರಿಷಬ್ ಶೆಟ್ಟಿ ತಮ್ಮೊಂದಿಗೆ ಇದ್ದ 'ಕಾಂತಾರ ಬುಡಕಟ್ಟು' ನಟರ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದ ಪ್ರತಿ ಪಾತ್ರಧಾರಿಗೂ ಈ ಫೋಟೊಗಳ ಮೂಲಕ ಗೌರವ ಸಲ್ಲಿಸಿದ್ದಾರೆ. 'ಕಾಂತಾರ'ದ ಯಶಸ್ಸು ತಂಡದ ಸಾಮೂಹಿಕ ಪ್ರಯತ್ನದ ಫಲ ಎಂಬುದು ಈ ಫೋಟೊಗಳ ಮೂಲಕ ಹೇಳಲಾಗುತ್ತೆ. ಪ್ರತಿ ಪಾತ್ರವೂ ಜೀವಂತವಾಗಿ ಕಾಣಿಸಲು ಇಷ್ಟೊಂದು ತಯಾರಿ ನಡೆಸಿದ್ದೇ ಕಾರಣ
'ಕಾಂತಾರ': ಕೇವಲ ಸಿನಿಮಾ ಅಲ್ಲ
'ಕಾಂತಾರ' ಸಿನಿಮಾವು ಇಡೀ ದೇಶದಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಚಿತ್ರ ಬಿಡುಗಡೆಯಾಗಿ ಇಷ್ಟೊಂದು ಸಮಯ ಕಳೆದಿದ್ದರೂ ಅದರ ಕುರಿತಾದ ಚರ್ಚೆ ನಿಂತಿಲ್ಲ. ಸಿನಿಮಾದ ಪಂಚಭಾಷಾ ಯಶಸ್ಸು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಮ್ಮೆಯಾಗಿದೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರೇ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಿಷಬ್ ನಟನೆಗೆ ದೇಶದ ಮೂಲೆ ಮೂಲೆಗಳಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.
ಚಿತ್ರದಲ್ಲಿನ ಭೂತಕೋಲ, ದೈವ ನರ್ತಕರ ದೃಶ್ಯಗಳು ಪ್ರೇಕ್ಷಕರ ಮೈ ಜುಮ್ಮೆನಿಸುವಂತೆ ಮಾಡಿದ್ದವು. ಈ ಚಿತ್ರದ ಕಲೆಕ್ಷನ್ ದಾಖಲೆಗಳನ್ನು ಬರೆದಿದ್ದು ಈಗ ಇತಿಹಾಸ. ಯಾವುದೇ ಒಂದು ಕಥೆಯನ್ನು ತೆರೆಯ ಮೇಲೆ ತರುವ ಮೊದಲು ನಿರ್ದೇಶಕರು ಆ ಪಾತ್ರಗಳೊಂದಿಗೆ ಜೀವಿಸಬೇಕು. ರಿಷಬ್ ಶೆಟ್ಟಿ ಅದೇ ವಿಧಾನವನ್ನು ಅನುಸರಿಸಿದ್ದಾರೆ. ನಟರು ಪಾತ್ರವನ್ನು ಕೇವಲ ಅಭಿನಯ ಮಾಡದೇ ಅದನ್ನು ಅನುಭವಿಸುವಂತೆ ಮಾಡಿದ್ದಾರೆ. ಮೊದಲ ವರ್ಕ್ಶಾಪ್ನಲ್ಲಿಯೇ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸಿದ್ದು ನಿರ್ದೇಶಕರ ದೊಡ್ಡ ಜಾಣ್ಮೆ. ಈ ಫೋಟೋವು 'ಕಾಂತಾರ' ನಿರ್ಮಾಣದ ಹಿಂದಿನ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಹೊಸ ಪೀಳಿಗೆಯ 'ಸೆನ್ಸೇಷನ್' ನಿರ್ದೇಶಕ...
ರಿಷಬ್ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ನಿರ್ದೇಶನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಕೇವಲ ಮನರಂಜನೆಗೆ ಮಾತ್ರ ಗಮನ ಕೊಡದೆ ಕಥೆಯ ಮೂಲ ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸುತ್ತಾರೆ. 'ಕಾಂತಾರ' ಸಿನಿಮಾದ ಮೂಲಕ ಅವರು ತಮ್ಮ ಈ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ಸಿನಿಮಾದ ಯಶಸ್ಸು ಅವರನ್ನು ಪ್ಯಾನ್-ಇಂಡಿಯಾ ಸ್ಟಾರ್ ನಿರ್ದೇಶಕರ ಸಾಲಿಗೆ ಸೇರಿಸಿದೆ.
ವರ್ಕ್ ಶಾಪ್ ನಿಂದ 'ದೈವದ' ಪರಂಪರೆ
ಒಟ್ಟಾರೆಯಾಗಿ ರಿಷಬ್ ಶೆಟ್ಟಿ ಹಂಚಿಕೊಂಡಿರುವ ಈ ವರ್ಕ್ ಶಾಪ್ ಫೋಟೋಗಳು, ಅದಕ್ಕೆ ಬರೆದ ಫೋಟೋಗಳು 'ಕಾಂತಾರ' ಕೇವಲ ಒಂದು ಚಲನಚಿತ್ರವಾಗಿರದೆ ಅದು ಇಡೀ ತಂಡದ ನಂಬಿಕೆ, ಸಂಸ್ಕೃತಿ ಮತ್ತು ಭಾವನಾತ್ಮಕ ಬದ್ಧತೆಯ ಫಲವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪಾತ್ರಗಳ ಹಿಂದಿನ ಮಾನಸಿಕ ಮತ್ತು ದೈಹಿಕ ಶ್ರಮವೇ ಚಿತ್ರಕ್ಕೆ ಜೀವ ತುಂಬಿ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.


Click it and Unblock the Notifications











