ರತನ್ ಟಾಟಾ ಅಗಲಿಕೆಗೆ ಕಂಬನಿ ಮಿಡಿದ ಕನ್ನಡ ಸಿನಿಮಾ ತಾರೆಯರು
ಹಿರಿಯ ಕೈಗಾರಿಕೋದ್ಯಮಿ ಹಾಗೂ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಪದ್ಮವಿಭೂಷಣ ಪುರಸ್ಕೃತ ಉದ್ಯಮಿಯ ಅಗಲಿಗೆ ಅಭಿಮಾನಿಗಳು, ಕೀಡಾ ಜಗತ್ತು, ಸಿನಿಮಾ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡ ಸಿನಿಮಾ ತಾರೆಯರು ಕೂಡ ಅಗಲಿದ ಚೇತನಕ್ಕೆ ಕಂಬನಿ ಮಿಡಿದಿದ್ದಾರೆ.
ನಟ ಶಿವರಾಜ್ಕುಮಾರ್ ಎಕ್ಸ್ ಖಾತೆಯಲ್ಲಿ "ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ" ಎಂದು ಬರೆದುಕೊಂಡಿದ್ದಾರೆ. ಟಾಟಾ ಅವರ ಫೋಟೊವನ್ನು ಶೇರ್ ಮಾಡಿದ್ದಾರೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ "ದಿಗ್ಗಜನಿಗಾಗಿ ಗಡಿಯಾರದ ಸದ್ದು ನಿಂತಿದೆ. ರತನ್ ಟಾಟಾ, ಭಾರತದ ಹೆಮ್ಮೆ. ಸಮಗ್ರತೆ, ದಾರ್ಶನಿಕ ನಾಯಕತ್ವ, ಪರೋಪಕಾರದ ಸಂಕೇತ. ಭಾರತದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯುಲು ತಮ್ಮನ್ನು ಅರ್ಪಿಸಿಕೊಂಡಿದ್ದರು. ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ, ಅವರು ಹೊರಟು ಹೋಗಿರಬಹುದು. ಆದ್ರೆ ಅವರ ಪ್ರಭಾವ ಎಲ್ಲರ ಮನಸ್ಸಿನಲ್ಲಿ ಸದಾ ಜೀವಂತ. ಆತ್ಮಕ್ಕೆ ಶಾಂತಿ ಸಿಗಲಿ ಸರ್" ಎಂದು ಪೋಸ್ಟ್ ಮಾಡಿದ್ದಾರೆ.
ನಮ್ರತೆಯ ಪ್ರತಿರೂಪ, ನಿಜವಾದ ಸಂಭಾವಿತ ಮತ್ತು ಗೌರವಾನ್ವಿತ ಉದ್ಯಮಿ. ದೇಶಕ್ಕೆ ನಿಮ್ಮ ಕೊಡುಗೆ ಮತ್ತು ಮನುಕುಲದ ಸೇವೆ ಎಂದಿಗೂ ಮರೆಯಲಾಗದು ಸರ್. ನಾವು ನಿಜವಾಗಿಯೂ ರತ್ನವನ್ನು ಕಳೆದುಕೊಂಡಿದ್ದೇವೆ. ಓಂ ಶಾಂತಿ ಎಂದು ರಕ್ಷಿತ್ ಶೆಟ್ಟಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಟ, ನಿರ್ದೇಶಕ ಉಪೇಂದ್ರ "ಮಹಾನ್ ಚೇತನ ರತನ್ ಟಾಟಾ ರವರಿಗೆ ಭಾವಪೂರ್ಣ ವಿದಾಯ.. ಓಂ ಶಾಂತಿ" ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಿರೂಪಕಿ ಅನುಶ್ರೀ ಕೂಡ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಎಕ್ಸ್ ಖಾತೆಯಲ್ಲಿ "ಟಾಟಾ ಸಮೂಹದ ಮುಖ್ಯಸ್ಥರಾದ ಶ್ರೀ ರತನ್ ಟಾಟಾ ಅವರಿಗೆ ಭಾವಪೂರ್ಣ ನಮನಗಳು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ನಟ ನೀನಾಸಂ ಸತೀಶ್ ರತನ್ ಟಾಟಾ ಅವರ ಫೋಟೊ ಹಂಚಿಕೊಂಡು ಗೌರವ ಸೂಚಕ ಎಮೋಜಿ ಹಾಕಿದ್ದಾರೆ.
ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ರತನ್ ಟಾಟಾ ಅಗಲಿಕೆಗೆ ಕಂಬನಿ ಮಿಡಿದಿದೆ. "ಭಾರತ ಇಂದು ನಿಜವಾದ ಲೆಜೆಂಡ್ ಅನ್ನು ಕಳೆದುಕೊಂಡಿದೆ. ರತನ್ ಟಾಟಾ, ದೂರದೃಷ್ಟಿಯ ನಾಯಕ ಮತ್ತು ವಿನಮ್ರ ವ್ಯಕ್ತಿತ್ವ, ಅಚಲವಾದ ನೈತಿಕತೆ, ನಾಯಕತ್ವ ಮತ್ತು ಪರೋಪಕಾರಿ ಮನೋಭಾವಕ್ಕೆ ಉದಾಹರಣೆಯಾಗಿದ್ದರು. ಅವರ ಪರಂಪರೆ ಮುಂದುವರೆಯಲಿ" ಎಂದು ಬರೆಯಲಾಗಿದೆ.
ಕೈಗಾರಿಕಾ ಕ್ಷೇತ್ರದ ಗೌರವಾನ್ವಿತ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಸ್ಫೂರ್ತಿದಾಯಕ ಮಾತುಗಳು ಮತ್ತು ಕೆಲಸಗಳಿಂದಾಗಿ ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಇರುತ್ತದೆ ಎಂದು ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಉದ್ಯಮಿಯಾಗಿ ಮಾತ್ರವಲ್ಲದೇ ತಮ್ಮ ಸರಳ ಸಜ್ಜನ ವ್ಯಕ್ತಿತ್ವ ಹಾಗೂ ಸಹಾಯಗುಣದಿಂದ ರತನ್ ಟಾಟಾ ಬಹಳಷ್ಟು ಜನರಿಗೆ ಹತ್ತಿರವಾಗಿದ್ದರು. ಉದ್ಯಮ ಕ್ಷೇತ್ರ, ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಒಂದು ಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದರು. ಬಿಗ್ ಬಿ ನಟಿಸಿದ್ದ 'ಏತಬಾರ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಆ ಸಿನಿಮಾ ಗೆಲ್ಲಲಿಲ್ಲ. ಬಳಿಕ ಅವರು ಯಾವುದೇ ಸಿನಿಮಾ ನಿರ್ಮಿಸಲಿಲ್ಲ.


Click it and Unblock the Notifications











