'ಕಾಂತಾರ' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಯಾಕೆ?
ವರ್ಷದ ಬಹುನಿರೀಕ್ಷಿತ 'ಕಾಂತಾರ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ದಸರಾ ಸಂಭ್ರಮದಲ್ಲಿ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಇದೀಗ ಸೆನ್ಸಾರ್ ಮಂಡಳಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರೋ 'ಕಾಂತಾರ' ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡ್ತಾ ಬಂದಿತ್ತು.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾ 'ಕಾಂತಾರ'. ರಿಷಬ್ ಶೆಟ್ಟಿ ತಮ್ಮ ಬಾಲ್ಯ, ಅವರ ಊರು, ಸುತ್ತಲಿನ ಕಾಡು, ಕಾಯುವ ದೈವ, ನಂಬಿಕೆಗಳು ಅದನ್ನೆಲ್ಲಾ ಸೇರಿಸಿ ಈ ಕಥೆ ಹೆಣೆದಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎನ್ನುವಂತಹ ಕುತೂಹಲ ಮೂಡಿಸಿದೆ. ಸೆಪ್ಟೆಂಬರ್ 30ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.
ಕಾಡಿನ ಪಕ್ಕ ಒಂದು ಊರು. ಆ ಕಾಡನ್ನು ನಂಬಿ ಬದುಕುವ ಜನ. ಕಾಡಿನ ರಕ್ಷಣೆಗೆ ನಿಂತ ಅರಣ್ಯ ಇಲಾಖೆ ಅಧಿಕಾರಿ. ಆ ಊರಿನ ಜನರು ಹಾಗೂ ಆ ಅಧಿಕಾರಿ ನಡುವಿನ ಸಂಘರ್ಷದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಮುರಳಿಧರ ಪಾತ್ರದಲ್ಲಿ ಕಿಶೋರ್ ಮಿಂಚಿದ್ರೆ, ಊರಿನ ಜನರ ಪರ ನಿಲ್ಲುವ ನಾಯಕ ಶಿವನಾಗಿ ರಿಷಬ್ ಶೆಟ್ಟಿ ಅಬ್ಬರಿಸಿದ್ದಾರೆ. ಇವರಿಬ್ಬರ ನಡುವಿನ ಮುಖಾಮುಖಿ ದೃಶ್ಯಗಳು ಸಖತ್ ಕಿಕ್ ಕೊಡಲಿದೆ.

'ಕಾಂತಾರ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ದಕ್ಷಿಣ ಕನ್ನಡ ಸುತ್ತಾಮುತ್ತ ಪ್ರಸಿದ್ದಿಯಾಗಿರುವ ದೈವರಾಧನೆ, ಕಂಬಳವನ್ನು ಬಹಳ ಸೊಗಸಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಆದರೆ ಚಿತ್ರಕ್ಕೆ ಯು ಬದಲು ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡಬಹುದು. ಅದಕ್ಕೆ ಕಾರಣ ಆಕ್ಷನ್ ಸೀಕ್ವೆನ್ಸ್. ಹೌದು 'ಕಾಂತಾರ' ಚಿತ್ರದಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳು ಇದೆ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ಫೈಟ್ ಮಾಡಿದ್ದಾರೆ. ಯಾವುದೇ ಡ್ಯೂಪ್ ಇಲ್ಲದೇ ಆಕ್ಷನ್ ಸೀಕ್ವೆನ್ಸ್ನಲ್ಲಿ ಅಬ್ಬರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಕೊಂಚ ವೈಲೆನ್ಸ್ ಇದೆ ಎನ್ನುವ ಕಾರಣಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸ್ಟಂಟ್ ಮಾಸ್ಟರ್ ವಿಕ್ರಂ ಮೋರ್ ಫೈಟ್ಸ್ ಕಂಪೋಸ್ ಮಾಡಿದ್ದಾರೆ.
ಮಂಗಳೂರು, ಕುಂದಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಆ ಭಾಗದ ಜನರಿಗೆ ಸಿನಿಮಾ ಬಹಳ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಇನ್ನು ಮಾಸ್ ಆಡಿಯನ್ಸ್ ಬಯಸುವ ಅಂಶಗಳು ಚಿತ್ರದಲ್ಲಿದೆ. ಇನ್ನು ಬೇರೆ ಭಾಗದ ಜನರಿಗೆ ಹೊಸ ಅನುಭವ ನೀಡಲಿದೆ. ನಾಯಕಿಯಾಗಿ ಸಪ್ತಮಿ ಗೌಡ ಮಿಂಚಿದ್ರೆ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್ ರೈ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಸಿನಿಮಾ ಪ್ರಮೋಷನ್ ಶುರು ಮಾಡಿದ್ದು ಮೇಕಿಂಗ್ ವಿಡಿಯೋಗಳನ್ನು ರಿಲೀಸ್ ಮಾಡಿ 'ಕಾಂತಾರ' ಪ್ರಪಂಚಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ಕೆಲಸ ನಡೀತಿದೆ.

'ಕಾಂತಾರ' ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದೆ. 'ಸಿಂಗಾರ ಸಿರಿಯೇ' ಸಾಂಗ್ ಈಗಾಗಲೇ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡದೇ ಕನ್ನಡದಲ್ಲೇ ಬೇರೆ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ರಿಲೀಸ್ ಮಾಡಲಾಗ್ತಿದೆ.


Click it and Unblock the Notifications











