ಐದು ದಿನಗಳಲ್ಲಿ 'ಕಾಂತಾರ' ಸಿನಿಮಾ ಗಳಿಸಿದ್ದೆಷ್ಟು?
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿದ್ದು, ಸಿನಿಮಾವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ ಪ್ರೇಕ್ಷಕರು.
'ಕಾಂತಾರ' ಸಿನಿಮಾ ಬಿಡುಗಡೆ ಆಗಿ ಐದು ದಿನಗಳಾಗಿದ್ದು ಸಿನಿಮಾ ಯಶಸ್ವಿ ಎನಿಸಿಕೊಂಡಿದೆ. ಜೊತೆಗೆ ಆಸಕ್ತಿಕರ ವಿಷಯವೆಂದರೆ ದಿನದಿಂದ ದಿನಕ್ಕೆ ಕಲೆಕ್ಷನ್ನಲ್ಲಿ ಏರಿಕೆಯನ್ನೇ ಕಾಣುತ್ತಿದೆ.
ಹೊಂಬಾಳೆ ಫಿಲಮ್ಸ್ ವತಿಯಿಂದ ನಿರ್ಮಿಸಲಾದ ಈ ಸಿನಿಮಾ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಹಾಗೂ ಹಿಂದಿಯ 'ವಿಕ್ರಂ ವೇದ' ಸಿನಿಮಾಕ್ಕೆ ಕರ್ನಾಟಕದಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವುದು ಮಾತ್ರವಲ್ಲದೆ ಗೆಲುವು ಸಹ ಸಾಧಿಸಿದೆ. ಹಾಗಿದ್ದರೆ 'ಕಾಂತಾರ' ಸಿನಿಮಾ ಐದು ದಿನದಲ್ಲಿ ಗಳಿಸಿದ್ದೆಷ್ಟು?

ಒಳ್ಳೆ ಕಲೆಕ್ಷನ್ ಮಾಡುತ್ತಿರುವ ಕಾಂತಾರ
'ಕಾಂತಾರ' ಸಿನಿಮಾವು ಮೊದಲ ದಿನ ಅಷ್ಟೇನೂ ಒಳ್ಳೆಯ ಕಲೆಕ್ಷನ್ ಅನ್ನು ಮಾಡಿರಲಿಲ್ಲ. ಸೆಪ್ಟೆಂಬರ್ 30 ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ದಿನ ಕೇವಲ 2.50 ಕೋಟಿ ಹಣವನ್ನಷ್ಟೆ ಗಳಿಸಿತು. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದ ಕಾರಣ ಮೊದಲ ದಿನ ಹೆಚ್ಚು ಮೊತ್ತದ ಗಳಿಕೆ ಸಾಧ್ಯವಾಗಲಿಲ್ಲ. ಆದರೆ ಮೊದಲ ದಿನದ ಬಳಿಕ ಸಿನಿಮಾದ ಬಗೆಗಿನ ಧನಾತ್ಮಕ ವಿಮರ್ಶೆಗಳು ಹೆಚ್ಚಾಗಿ ಸಿನಿಮಾ ನೋಡಲು ಬರುವ ಫ್ಯಾಮಿಲಿ ಪ್ರೇಕ್ಷಕರು ಹಾಗೂ ಸಿನಿಮಾ ಆಸಕ್ತರ ಸಂಖ್ಯೆ ಹೆಚ್ಚಾಯಿತು.

ಈವರೆಗೆ 'ಕಾಂತಾರ' ಗಳಿಸಿದ್ದೆಷ್ಟು?
ಕಾಂತಾರ ಸಿನಿಮಾವು ಎರಡನೇ ದಿನ ಭಾರತದಾದ್ಯಂತ 4.5 ಕೋಟಿ ರುಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತು. ಬಳಿಕ ಮೂರನೇ ದಿನ ಅಂದರೆ ಭಾನುವಾರ ಬರೋಬ್ಬರಿ 7.50 ಕೋಟಿ ಕಲೆಕ್ಷನ್ ಮಾಡಿತು. ಬಳಿಕ ನಾಲ್ಕನೇ ದಿನ 4.50 ಕೋಟಿ ರುಪಾಯಿ ಕಲೆಕ್ಷನ್ ಮಾಡಿತು. ಐದನೇ ದಿನ ಬರೋಬ್ಬರಿ 6.50 ಕೋಟಿ ರುಪಾಯಿ ಹಣ ಗಳಿಸಿದೆ. ಆ ಮೂಲಕ ದಿನದಿಂದ ದಿನಕ್ಕೆ ಕಲೆಕ್ಷನ್ನಲ್ಲಿ ಪ್ರಗತಿ ಸಾಧಿಸುತ್ತಾ ಸಾಗುತ್ತಿದೆ 'ಕಾಂತಾರ'. ಈ ವರೆಗೆ ಈ ಸಿನಿಮಾವು ಸುಮಾರು 25 ಕೋಟಿ ರುಪಾಯಿ ಹಣವನ್ನು ಭಾರತದಾದ್ಯಂತ ಗಳಿಸಿದೆ.

ಪ್ಯಾನ್ ಇಂಡಿಯಾ ಸಿನಿಮಾ ಮಾಡಲಾಗುತ್ತಾ?
'ಕಾಂತಾರ' ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಿಲ್ಲ. ಆದರೆ ಕೆಲವೇ ಶೋಗಳನ್ನು ಹೈದರಾಬಾದ್, ಚೆನ್ನೈ, ಮುಂಬೈ ಹಾಗೂ ಇನ್ನಿತರೆ ನಗರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಅಲ್ಲಿಯೂ ಸಹ 'ಕಾಂತಾರ' ಸಿನಿಮಾಕ್ಕೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ 'ಕಾಂತಾರ' ಸಿನಿಮಾವನ್ನು ಇತರೆ ಭಾಷೆಗಳಲ್ಲಿ ಡಬ್ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆಯನ್ನು ಹೊಂಬಾಳೆ ಮಾಡುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ವಿಮರ್ಶೆ
'ಕಾಂತಾರ' ಸಿನಿಮಾವು ಅರಣ್ಯ, ದೈವ, ಕರಾವಳಿ ಸಂಸ್ಕೃತಿ ಆಧರಿಸಿದ ಸಿನಿಮಾ ಆಗಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟನೆಯನ್ನೂ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದು, ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications











