'ಕಾಂತಾರ' ಮೇಕಿಂಗ್: 'ಕಂಬಳ ಗದ್ದೆಯಲ್ಲಿ ಕ್ಯಾಮೆರಾನೂ ಬಿತ್ತು.. ಮುಖವೂ ಜಜ್ಜಿ ಹೋಯ್ತು'
ಕನ್ನಡ ಚಿತ್ರರಂಗಕ್ಕೆ ಒಂದಾದ ಮೇಲೊಂದು ಹಿಟ್ ಸಿನಿಮಾಗಳ ನೀಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಸಪ್ಟೆಂಬರ್ 30ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಪ್ರತಿ ಚಿತ್ರದ ಮೂಲಕವೂ ಹೊಸ ಪ್ರಯೋಗ ಮಾಡುವ ರಿಷಬ್ ಶೆಟ್ಟಿ ಚಿತ್ರದ ಬಗ್ಗೆ ಪ್ರೇಕ್ಷರಿಗೆ ತೀವ್ರ ಕುತೂಹಲ ಇದ್ದೇ ಇರುತ್ತದೆ. ಇದೀಗ 'ಕಾಂತಾರ' ಚಿತ್ರವೂ ಕೂಡ ತೀವ್ರ ಕುತೂಹಲ ಸೃಷ್ಟಿಸಿದೆ.
ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಕನ್ನಡ ಚಿತ್ರರಂಗದ ದಿಗ್ಗಜರ ಒಗ್ಗೂಡುವಿಕೆಯಲ್ಲಿ ತಯಾರಾದ 'ಕಾಂತಾರ' ಚಿತ್ರ ಹೇಗಿರಿಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೊಂದು ಪಕ್ಕಾ ಕರಾವಳಿ ಸಂಸ್ಕೃತಿಯ ಸಿನಿಮಾ ಎನ್ನುವುದು ಖಚಿತವಾಗಿದೆ. ಟ್ರೈಲರ್, ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ 'ಕಾಂತಾರ'ದ ಬಗ್ಗೆ ಜನರಿಗೆ ಇನ್ನಷ್ಟು ಕಾತುರ ಹೆಚ್ಚಾಗಿಸುವ ಕೆಲಸವನ್ನು ಚಿತ್ರತಂಡ ಮಾಡುತ್ತಿದೆ.
ಸದ್ಯ 'ಕಾಂತಾರಾ' ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ಹೊಸ ಪ್ಲ್ಯಾನ್ ಮಾಡಿರುವ ರಿಷಬ್ ತಮ್ಮ ತಂಡದವರು ಚಿತ್ರದ ಮೇಕಿಂಗ್ ದೃಶ್ಯಗಳನ್ನು ಯೂಟ್ಯೂಬ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 'ದಿ ವಲ್ಡ್ ಆಫ್ ಕಾಂತಾರಾ' ವಿಡಿಯೋ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಚಿತ್ರತಂಡ ಕಂಬಳ ದೃಶ್ಯವನ್ನು ಸೆರೆ ಹಿಡಿದ ಬಗ್ಗೆ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಚಿತ್ರದ ನಾಯಕ ರಿಷಬ್ ಶೆಟ್ಟಿ ಮಾತನಾಡಿದ್ದು, 'ಕಾಂತಾರ' ಚಿತ್ರದ ಕಥೆಯಲ್ಲಿ ಕಂಬಳ ಸೀನ್ ಇರಲಿಲ್ಲ. ಬಳಿಕ ಶಿವನ ಪಾತ್ರವನ್ನು ಇನ್ನಷ್ಟು ವೈಭವೀಕರಿಸಲು ಕಂಬಳ ಸೀನ್ ತರಬೇಕಾಯಿತು. ಕಂಬಳ ಸೀನ್ಗೆ ಮೊದಲು ಮೈ ಚಳಿ ಬಿಟ್ಟಿರಲಿಲ್ಲ, ಮೊದಲ ಬಾರಿಗೆ ದೀಪು ಪ್ರಾಕ್ಟೀಸ್ ಹೋಗಿ ಮುಂದೆ ನಾಲ್ಕು ಹೆಜ್ಜೆ ಹೋಗಿ ಬಿದ್ದ, ಮುಖ ಪೂರ್ತಿ ಜಜ್ಜಿ ಹೋಯ್ತು. ನನ್ನ ಮುಂದೆ ಇಬ್ಬರು ಈಗಾಗಲೇ ಬಿದ್ದಿದ್ದರು. ನನಗೆ ಬೇಕಾ ಇದು ಅಂತಾ ಅನಿಸಿತ್ತು. ಮೊದಲ ಬಾರಿಗೆ ಕೋಣದ ಬಾಲ ಹಿಡಿದು ಕಂಬಳ ಓಡಿಸಲು ರೆಡಿಯಾದಾಗ ಒಳಗಡೆ ಗಡಗಡ ಅಂತಿತ್ತು. ಕೋಣ ಓಡಿಸಿ ಕೊನೆಯಲ್ಲಿ ಬಿದ್ದಿದ್ದೇನೆ. ರಿಷಬ್ ಶೆಟ್ಟಿ ಏನು ಕೋಣ ಓಡಿಸ್ತಾನೆ ನೋಡೋಣ ಅಂತಾ ನೂರಾರು ಜನ ಸೇರಿದ್ದರು. ಈ ಕಂಬಳ ಸೀನ್ ಅನ್ನು ಒಂದು ದಿನ ಪೂರ್ತಿ ಶೂಟ್ ಮಾಡಿದ್ದೇವೆ. ರಡೆ್ ರಾಪ್ಟರ್ ಕ್ಯಾಮಾರದಲ್ಲಿ ಬ್ಯಾಕ್ ಶಾಟ್ ಒಂದು ತೆಗೆದುಕೊಂಡೆವು, ನಾನು ಕೋಣ ಓಡಿಸಿಕೊಂಡು ಹೋಗ್ತಿದ್ದೆ, ಆಗ ಫ್ರಂಟ್ ಶಾಟ್ ಕೂಡ ಬೇಕಿತ್ತು. ಈ ಟೈಮ್ ಅಲ್ಲಿ ಕ್ಯಾಮರ ರೋಪ್ನಿಂದ ಬಿಚ್ಚಿ ಹೋಗಿ ಬಿದ್ದೋಯ್ತು. ಅದೃಷ್ಟವಶಾತ್ ಕೆಸರಲ್ಲಿ ಬೀಳದೆ ಆಚೆ ಗದ್ದೆ ಮೇಲೆ ಬಿತ್ತು ಎಂದು ರಿಷಬ್ ತಮ್ಮ ಕಂಬಳ ಚಿತ್ರೀಕರಣದ ಬಗ್ಗೆ ಹೇಳಿಕೊಂಡಿದ್ದಾರೆ.
ಇನ್ನು 'ಕಾಂತಾರ' ಸಿನಿಮಾ ಕಂಬಳ ದೃಶ್ಯ ಚಿತ್ರೀಕರಣದ ವೇಳೆ ನಟ ರಕ್ಷಿತ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಅವರು ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿರುವುದನ್ನು ಸಹ ದಿ ವಲ್ಡ್ ಆಫ್ ಕಾಂತಾರಾ ವಿಡಿಯೋದಲ್ಲಿ ತೋರಿಸಲಾಗಿದೆ. ಇನ್ನು ಕರಾವಳಿ ಭಾಗದ ಆಚರಣೆಗಳಿಗೆ 'ಕಾಂತಾರಾ' ಚಿತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಕಂಬಳ ದೃಶ್ಯದ ಚಿತ್ರೀಕರಣವನ್ನು ಕಂಬಳಕ್ಕೆ ಹೆಸರು ವಾಸಿಯಾದ ಬೈಂದೂರಿನ ಬೀಡಿನ ಮನೆ ಗದ್ದೆಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಕಷ್ಟಕರ ಚಿತ್ರೀಕರಣದವಾದ ಕಂಬಳದ ದೃಶ್ಯದ ಬಗ್ಗೆ ಮಾತನಾಡಿದ ರಿಷಬ್ ಸ್ಥಳೀಯ ಕಂಬಳ ದಿಗ್ಗಜರಾದ ಪರಮೇಶ್ವರ್ ಭಟ್ ಹಾಗೂ ಮಹೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ನಲ್ಲಿ ಟಾಕ್ ಆಫ್ ದಿ ಟೌನ್ ಆಗಿರುವ ಕಾಂತಾರಾ ಚಿತ್ರ ಮೇಕಿಂಗ್ ವಿಡಿಯೋ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.


Click it and Unblock the Notifications











