ಕಾಂತಾರ ಟಿಕೆಟ್ ಬುಕ್ಕಿಂಗ್ ಆರಂಭ: ರಿಷಬ್ ಚಿತ್ರಕ್ಕೆ ಮುಗಿಬಿದ್ದ ಪ್ರೇಕ್ಷಕರು
ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನೇ ನೀಡಿರುವ ಭರವಸೆಯ ನಟ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಕಾಂತಾರ' ಇನ್ನೇನು ತೆರೆ ಕಾಣಲು ಸಜ್ಜಾಗಿದೆ. ಸಪ್ಟೆಂಬರ್ 30ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದ ಮೂರು ಚಿತ್ರಗಳು ಸಹ ಸೂಪರ್ ಹಿಟ್ ಆಗಿದ್ದು, ನಾಲ್ಕನೇ ಚಿತ್ರ 'ಕಾಂತಾರ' ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆಯಿದೆ. ಹೀಗಾಗಿ ಜನ ಮುಗಿಬಿದ್ದು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ.
ಟ್ರೈಲರ್ನಿಂದಲೇ ಕುತೂಹಲ ಕೆರಳಿಸಿರುವ 'ಕಾಂತಾರ' ಚಿತ್ರದ ಮೊದಲ ದಿನದ ಶೋಗಳು ಬಹುತೇಕ ಬುಕ್ ಆಗಿದ್ದು, ಮಲ್ಟಿಫ್ಲೆಕ್ಸ್ಗಳಲ್ಲಿ 200-250 ರೂಪಾಯಿ ವರೆಗೆ ದರ ನಿಗದಿ ಮಾಡಲಾಗಿದೆ. ಇನ್ನು ಇತರ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 100-150 ರೂಪಾಯಿ ದರ ನಿಗದಿ ಮಾಡಲಾಗಿದೆ. ಹೊಂಬಾಳೆ ಫಿಲ್ಸ್ ನಿರ್ಮಾಣದಲ್ಲಿ ತೆರೆ ಕಾಣುತ್ತಿರುವ 'ಕಾಂತಾರಾ' ಚಿತ್ರಕ್ಕಾಗಿ ಸಿನಿ ಪ್ರಿಯರು ಉತ್ಸುಕರಾಗಿದ್ದು, ಚಿತ್ರತಂಡದಿಂದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿದ ಸೇರಿದಂತೆ ಸಪ್ಟೆಂಬರ್ 29ರ ಸಂಜೆ 6 ಗಂಟೆಯಿಂದ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಈಗಾಗಲೇ ಪ್ರೀಮಿಯರ್ ಶೋನ ಬಹುತೇಕ ಎಲ್ಲಾ ಟಿಕೆಟ್ಗಳು ಬುಕ್ ಆಗಿರುವುದು ಚಿತ್ರತಂಡಕ್ಕೆ ಸಂತಸದ ವಿಚಾರವಾಗಿದೆ.
ಕನ್ನಡ ಚಿತ್ರರಂಗಕ್ಕೆ ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನೇ ನೀಡಿರುವ ರಿಷಬ್ ಶೆಟ್ಟಿ 'ಕಾಂತಾರ' ಚಿತ್ರದ ಮೂಲಕವೂ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಪುನೀತ್ ರಾಜ್ಕುಮಾರ್ ಅವರ ಯುವರತ್ನ ರಾಜಕುಮಾರ ಹಾಗೂ ಯಶ್ ಕೆಜಿಎಫ್ನಂತಹ ಚಿತ್ರಗಳಿಗೆ ಬಂಡವಾಳ ಹಾಕಿರುವ ಹೊಂಬಾಳೆ ಫಿಲ್ಮ್ಸ್ ಇದೇ ಮೊದಲ ಬಾರಿ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಕನ್ನಡ ಚಿತ್ರರಂಗದ ಎರಡು ಪ್ರಯೋಗಶೀಲರ ಕೈ ಚಳಕದಲ್ಲಿ ಮೂಡಿಬಂದಿರುವ ಕಾಂತಾರ ಚಿತ್ರದ ಮೇಲಿನ ಕಾತುರ ದಿನದಿಂನ ದಿನಕ್ಕೆ ಹೆಚ್ಚಾಗುತ್ತಿದೆ.
ರಿಷಬ್ ಕೇಲವ ನಿರ್ದೇಶಕರಾಗಿ ಅಲ್ಲದೇ 'ಕಾಂತಾರ' ಚಿತ್ರದ ನಾಯಕ ನಟನಾಗಿದ್ದಾರೆ. ಟ್ರೈಲರ್ ಹಾಗೂ ಪೋಸ್ಟರ್ಗಳಲ್ಲಿ ರಿಷಬ್ ವಿವಿಧ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಂಬಳ, ಭೂತಕೋಲ ಸೇರಿದಂತೆ ಕರಾವಳಿಯ ಆಚರಣೆಗಳ ಜೊತೆಗೆ ಶಿವ ಎನ್ನುವ ಪಾತ್ರದ ಜೀವನದ ಸುತ್ತ ಕಾಂತಾರ ಕಥೆ ಸುತ್ತಲಿದೆ. 'ಕಾಂತಾರ' ಇದೊಂದು ದಂಥಕತೆ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ.

'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಪ್ತಮಿ ಗೌಡ ಹಿಂದೆದಿಗಿಂತ ವಿಭಿನ್ನ ವೇಷಭೂಷಣದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹಿರಿಯ ನಟ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸುವಂತೆ ಚಿತ್ರದ ಮೇಕಿಂಗ್ ವಿಡಿಯೋಗಳನ್ನು ಚಿತ್ರತಂಡ 'ದಿ ವಲ್ಡ್ ಆಫ್ ಕಾಂತಾರ' ಹೆಸರಿನಲ್ಲಿ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದೆ. ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣದ ಜೊತೆಗೆ ತಾಂತ್ರಿಕವಾಗಿಯೂ ಚಿತ್ರತಂಡ ಹೆಚ್ಚಿನ ಶ್ರಮವಹಿಸಿದ್ದು, ನೋಡುಗರ ಕಣ್ಣಿಗೆ ಹಬ್ಬದೂಟ ಬಡಿಸುವುದಂತೂ ಗ್ಯಾರಂಟಿ ಎನ್ನುವಂತಿದೆ. ಅಲ್ಲದೆ ಅಜನೀಶ್ ಬಿ. ಲೋಕನಾಥ್ ಅವರ ಹಿನ್ನೆಲೆ ಸಂಗೀತ ಕೂಡ ಚಿತ್ರದ ಅದ್ಧೂರಿತನವನ್ನು ಇನ್ನಷ್ಟು ಹೆಚ್ಚಸಿದೆ.
ಈಗಾಗಲೇ ಚಿತ್ರದ 'ಸಿಂಗಾರ ಸಿರಿಯೇ' ಹಾಡು ಬಿಡುಗಡೆಗೊಂಡಿದ್ದು, ಯೂಟ್ಯೂಬ್ನಲ್ಲಿ 4.5 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಕೇಳುಗರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಒಟ್ಟಾರೆ ಅತ್ಯುತ್ತಮ ಕಲಾವಿದರ ಒಗ್ಗೂಡುವಿಕೆಯಲ್ಲಿ ತಯಾರಾದ' ಕಾಂತಾರ' ಚಿತ್ರದ ವೀಕ್ಷಣೆಗಾಗಿ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.


Click it and Unblock the Notifications











