ದೈವ ನರ್ತಕನ ಪಾತ್ರ ಮಾಡುವ ಮುನ್ನ ಆ ಸ್ಥಳಕ್ಕೆ ಕಡ್ಡಾಯವಾಗಿ ಹೋಗಿ ಬಾ; ರಿಷಬ್ಗೆ ಬಂದಿತ್ತು ಎಚ್ಚರಿಕೆ!
ಶುಕ್ರವಾರ ( ಸೆಪ್ಟೆಂಬರ್ 30 ) ಬಿಡುಗಡೆಗೊಂಡ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸದ್ಯ ಎಲ್ಲೆಡೆ ಅಬ್ಬರಿಸುತ್ತಿದೆ. ಕರಾವಳಿಯ ಸಂಸ್ಕೃತಿ ಹಾಗೂ ಆಚರಣೆಗಳನ್ನು ಸಾರಿರುವ ಕಾಂತಾರ ಚಿತ್ರವನ್ನು ಕರಾವಳಿ ಪ್ರೇಕ್ಷಕರು ಮಾತ್ರವಲ್ಲದೇ ಇದು ನಮ್ಮ ಕರ್ನಾಟಕದ ಭಾಗವೊಂದರ ಸಂಸ್ಕೃತಿಯನ್ನು ಸಾರುತ್ತಿರುವ ಚಿತ್ರ ಎಂದು ಕನ್ನಡ ಸಿನಿ ಪ್ರೇಕ್ಷಕರು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಪ್ರಕೃತಿ ಹಾಗೂ ಮಾನವನ ನಡುವಿನ ಕತೆಯನ್ನು ಹೊಂದಿರುವ ಕಾಂತಾರ ಚಿತ್ರದಲ್ಲಿ ಭೂತ ಕೋಲ ಹಾಗೂ ದೈವ ನರ್ತನೆ ಜನರ ಮನಗೆದ್ದ ಅಂಶಗಳು. ಇನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಸಹ ದೈನ ನರ್ತಕನಾಗಿ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಕೆಲ ದೃಶ್ಯಗಳಲ್ಲಿ ಮಾತ್ರ ಕೋಲ ಪಾತ್ರವನ್ನು ಮಾಡಿದ್ದರೂ ಸಹ ಆ ದೃಶ್ಯಗಳು ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕನ ಮನದಲ್ಲಿ, ತಲೆಯಲ್ಲಿ ಕೆಲವೊಂದಿಷ್ಟು ಗಂಟೆಗಳ ಕಾಲ ಪದೇ ಪದೇ ಮರುಕಳಿಸುವಂತಿವೆ.
ಹೌದು, ರಿಷಬ್ ಶೆಟ್ಟಿ ಅಷ್ಟರ ಮಟ್ಟಿಗೆ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಫಲಿತಾಂಶವಾಗಿ ಚಿತ್ರ ಮೊದಲ ದಿನಕ್ಕಿಂತ ಎರಡನೇ ದಿನ, ಮೊದಲೆರಡು ದಿನಗಳಿಗಿಂತ ಮೂರನೇ ದಿನ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದೆ. ಅದರಲ್ಲಿಯೂ ಬಹುತೇಕ ಎಲ್ಲಾ ಪ್ರದರ್ಶನಗಳು ಹೌಸ್ಫುಲ್ ಆಗಿವೆ. ಈ ಮೂಲಕ ಕಾಂತಾರ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸುತ್ತಿದ್ದು, ಚಿತ್ರತಂಡ ಈ ಯಶಸ್ಸಿನ ಸಲುವಾಗಿ ಪತ್ರಿಕಾಗೋಷ್ಠಿಯನ್ನೂ ಸಹ ನಡೆಸಿದೆ. ಈ ಸಂದರ್ಭದಲ್ಲಿ ಭೂತ ಕೋಲ ಮತ್ತು ದೈವ ನರ್ತಕನಾಗಿ ಅಭಿನಯಿಸುವ ಮುನ್ನ ಯಾವ ರೀತಿಯ ಸಿದ್ಧತೆಗಳನ್ನು ರಿಷಬ್ ಮಾಡಿಕೊಂಡಿದ್ದರು ಎಂಬ ವಿಷಯವನ್ನು ರಿಷಬ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

ದೈವ, ಭೂತಕೋಲ ಪಾತ್ರ ಮಾಡಿದ್ರೆ ಸಮಸ್ಯೆಯಾಗಬಾರದೆಂದು ಮುಂಜಾಗ್ರತೆ ವಹಿಸಿದ್ರು ರಿಷಬ್
ಪತ್ರಿಕಾಗೋಷ್ಠಿಯಲ್ಲಿದ್ದ ದೈವ ಹಾಗೂ ಭೂತಕೋಲದ ಪಾತ್ರಗಳನ್ನು ಮಾಡಿ ಸಮಸ್ಯೆಗೆ ಒಳಗಾದವರು ಇದ್ದಾರೆ, ಇದಕ್ಕೆ ನೀವೇನಾದ್ರೂ ತಯಾರಿ ನಡೆಸಿದ್ರಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ ನಾವೇನೇ ಮಡೋಕೆ ಹೋದ್ರೂನೂ ನಂಬಿ ಮಾಡಬೇಕು, ಹಾಗಿದ್ದಾಗ ಮಾತ್ರ ಸಂಪೂರ್ಣ ಬೆಲೆ ಸಿಗುತ್ತೆ, ದೇವರ ಮುಂದೆ ಕೂಡ ಇದನ್ನೇ ಬೇಡಿಕೊಳ್ತೇವೆ ಎಂದರು. ಹೀಗೆ ಮಾತು ಮುಂದುವರಿಸಿದ ರಿಷಬ್ ಶೆಟ್ಟಿ ಈ ವಿಚಾರ ಬಂದಾಗ ಮಂಗಳೂರಿನ ಸುತ್ತಮುತ್ತಲಿನ ಕೆಲ ದೈವ ನರ್ತಕರು, ದೈವಾರಾಧಾನೆ ಮಾಡುವಂತ ಹಿರಿಯರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಹೇಗೆ ನಡೆದುಕೊಳ್ಳಬೇಕು ಎಂದು ಕೇಳಿದ್ದೆ, ಏಕಂದ್ರೆ ಒಂದು ಭಾಗದ ಜನರು ಮಾತ್ರ ಇದನ್ನ ಮಾಡ್ತಾರೆ, ನಾವು ಸಿನಿಮಾಗೆ ಮಾಡಬೇಕಾದಾಗ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಿತ್ತು ಎಂದರು. ಆಗ ಅವರು ನನಗೆ ಹೇಳಿದ್ದು ಒಂದೇ ಮಾತನ್ನ, ಸೀದಾ ಧರ್ಮಸ್ಥಳಕ್ಕೆ ಹೋಗು, ಮಂಜುನಾಥ ಸ್ವಾಮಿ ಹತ್ತಿರ ಪ್ರಾರ್ಥಿಸು, ಯಾಕಂದ್ರೆ ಇದರ ಮೂಲ ಎಲ್ಲಾ ಅಲ್ಲೇ ಇರೋದು ಎಂದು ರಿಷಬ್ ಶೆಟ್ಟಿ ದೈವನರ್ತಕರು ನೀಡಿದ ಸಲಹೆಯನ್ನು ಹಂಚಿಕೊಂಡರು.

ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ರಿಷಬ್
ಇನ್ನು ಅವರ ಸಲಹೆಯಂತೆ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿರೇಂದ್ರ ಹೆಗ್ಗಡೆಯವರನ್ನು ಈ ರೀತಿ ಸಿನಿಮಾ ಮಾಡ್ತಾ ಇದ್ದೇನೆ, ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೇಳಿದಾಗ ಅವರು ಏನೂ ಆಗಲ್ಲ, ಇಲ್ಲಿಗೆ ಬಂದಿದ್ದೀಯಲ್ಲ ಒಳ್ಳೆಯದಾಗುತ್ತೆ ಹೋಗು ಅಂದಿದ್ರು ಎಂದು ರಿಷಬ್ ಶೆಟ್ಟಿ ತಿಳಿಸಿದರು.

ಮಾಂಸಾಹಾರ ಬಿಟ್ಟಿದ್ರು, ನಿಷೇಧಿಸಿದ್ರು
ಇನ್ನೂ ಮುಂದುವರಿದು ಮಾತನಾಡಿದ ರಿಷಬ್ ಶೆಟ್ಟಿ ಶೂಟಿಂಗ್ ಆರಂಭವಾಗಲು ಒಂದು ತಿಂಗಳಿಗೂ ಮುನ್ನವೇ ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದೆ, ಶೂಟಿಂಗ್ ಸ್ಥಳದಲ್ಲಿ ಎಲ್ಲಿ ದೈವ ಇಟ್ಟಿದ್ದಿವೋ ಅಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡ್ತಾ ಇರಲಿಲ್ಲ ಹಾಗೂ ಶೂಟಿಂಗ್ ಸೆಟ್ನಲ್ಲಿ ಮಾಂಸಾಹಾರ ಮಾಡ್ತಾ ಇರಲಿಲ್ಲ ಎಂದು ಹೇಳಿಕೆ ನೀಡಿದರು. ದೈವ ನಮಗೆ ಪವಿತ್ರವಾದ ಅಂಶವಾದ್ದರಿಂದ ಚಿಕ್ಕ ವಯಸ್ಸಿಂದ ನಾವೂ ಸಹ ಇದನ್ನೇ ಪಾಲಿಸ್ತಾ ಬಂದಿದ್ದೆವು ಹಾಗೂ ಈಗಲೂ ಶೂಟಿಂಗ್ಗಾಗಿ ಅದನ್ನೇ ಪಾಲಿಸಿದ್ವಿ ಎಂದರು ರಿಷಬ್ ಶೆಟ್ಟಿ.


Click it and Unblock the Notifications











