ಸಿಂಗಲ್ ಆಗಿರೋರು ಆದಷ್ಟು ಬೇಗ ಮಿಂಗಲ್ ಆಗೋ ಹಾಗಾಗ್ಲಿ ಎಂದು ರಕ್ಷಿತ್ ಶೆಟ್ಟಿ ಕಾಲೆಳೆದ ರಿಷಬ್ ಶೆಟ್ಟಿ!
ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಹೆಣ್ಮಕ್ಕಳ ನೆಚ್ಚಿನ ನಟನಾಗಿರುವ ರಕ್ಷಿತ್ ಶೆಟ್ಟಿ ವಿವಾಹದ ವಿಷಯವಾಗಿ ಈಗಾಗಲೇ ಸಾಕಷ್ಟು ಸುದ್ದಿಗೀಡಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಜತೆ ಸಪ್ತಪದಿ ತುಳಿಯಬೇಕಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ನಿಶ್ಚಿತಾರ್ಥದ ಬಳಿಕ ವಿವಾಹ ಮುರಿದುಬಿದ್ದಿತ್ತು.
ಹೀಗೆ ರಶ್ಮಿಕಾ ಮಂದಣ್ಣ ಜತೆ ವಿವಾಹ ಮುರಿದು ಬಿದ್ದ ನಂತರ ನಟ ರಕ್ಷಿತ್ ಶೆಟ್ಟಿ ಯಾವ ಕೈ ಹಿಡಿಯಲಿದ್ದಾರೆ ಎಂಬುದರ ಕುರಿತಾದ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಂಡಾಗಲೆಲ್ಲಾ ಈ ಕುರಿತು ಹಲವು ಸುದ್ದಿಗಳಾಗಿದ್ದವು. ಸದ್ಯ ರಕ್ಷಿತ್ ಶೆಟ್ಟಿ ಮತ್ತೊಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ಗೂ ಸಹ ಮದುವೆಗೆ ಸಂಬಂಧಿಸಿದ ರಿಪ್ಲೈಗಳು ಬಂದಿವೆ.

ಹೌದು, ಇಂದು ( ಏಪ್ರಿಲ್ 12 ) ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಶನ್ನ ಮೊದಲ ಚಿತ್ರ ರಾಘವೇಂದ್ರ ಸ್ಟೋರ್ಸ್ನ ಮೊದಲ ಹಾಡು 'ಸಿಂಗಲ್ ಸುಂದರ ಯಾವಾಗ ಹಾಕ್ತ್ಯ ಉಂಗುರ?' ಬಿಡುಗಡೆಯಾಗಿದೆ. ಈ ಹಾಡನ್ನು ರಕ್ಷಿತ್ ಶೆಟ್ಟಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಬಿಡುಗಡೆ ಮಾಡಿದ್ದಾರೆ.
ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ವಯಸ್ಸಾದರೂ ಮದುವೆಯಾಗದೇ ಎಲ್ಲರಿಂದಲೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಎದುರಿಸುವ ಅವಿವಾಹಿತನ ಪಾತ್ರವನ್ನು ನಿರ್ವಹಿಸಿದ್ದು, ಈ ಹಾಡು ಸಹ ಅದೇ ವಿಷಯದ ಬಗ್ಗೆ ಇದೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ನಾಗಾರ್ಜುನ್ ಶರ್ಮಾ ಹಾಡಿನ ಸಾಹಿತ್ಯ ಬರೆದಿದ್ದು, ನವೀನ್ ಸಜ್ಜು ದನಿ ನೀಡಿದ್ದಾರೆ. ಹಾಡಿನುದ್ದಕ್ಕೂ ಸಿಂಗಲ್ ನಾಯಕ ಮಿಂಗಲ್ ಆಗುವುದು ಯಾವಾಗ ಎಂಬ ಪ್ರಶ್ನೆಗಳೇ ತುಂಬಿದ್ದು, ಹಾಡು ಸಿಂಗಲ್ ಹುಡುಗರ ಗಮನ ಸೆಳೆದಿದೆ.
ಇನ್ನು ಈ ಹಾಡಿನ ಲಿಂಕನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ "ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಎಂದಿನಂತೆ ಅಜನೀಶ್ ಮ್ಯೂಸಿಕ್ ವರ್ಕ್ ಆಗಿದೆ. ಜಗ್ಗೇಶ್ ಶ್ರಮವಿಲ್ಲದೇ ಅದ್ಭುತವಾಗಿ ನಟಿಸಿದ್ದಾರೆ. ಸಂತೋಷ್ ಆನಂದ್ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ಗೆ ಒಳ್ಳೆಯದಾಗಲಿ" ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ "ಒಳ್ಳೆಯವರ ಕೈನಲ್ಲಿ ಹಾಡನ್ನ ರಿಲೀಸ್ ಮಾಡ್ಸಿದ್ದೀರಿ, ಹಾಡು ಕೇಳೋಕೆ ನೋಡೋಕೆ ಬಹಳ ಚನ್ನಾಗಿದೆ, ಸಿಂಗಲ್ ಆಗಿರೋರು ಬೇಗ ಮಿಂಗಲ್ ಆಗೋ ಹಾಗಾಗ್ಲಿ! ಜಗ್ಗೇಶ್ ಅಣ್ಣ, ಸಂತೋಷ್ ಆನಂದ್ರಾಮ್, ಹೊಂಬಾಳೆ ಫಿಲ್ಮ್ಸ್ ಹಾಗೂ ಅಜನೀಶ್ ಅವರಿಗೆ ಆಲ್ ದ ಬೆಸ್ಟ್" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಕ್ಷಿತ್ ಶೆಟ್ಟಿ ಆದಷ್ಟು ಬೇಗ ಮಿಂಗಲ್ ಆಗಲಿ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಇನ್ನು ರಕ್ಷತ್ ಶೆಟ್ಟಿಯ ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಸಂತೋಷ್ ಆನಂದ್ರಾಮ್ "ತುಂಬಾ ಧನ್ಯವಾದಗಳು ರಕ್ಷಿತ್. ಬೆಂಬಲಕ್ಕೆ ಧನ್ಯವಾದಗಳು. ಚಿತ್ರದ ಪ್ರೀಮಿಯರ್ನಲ್ಲಿ ಆದಷ್ಟು ಬೇಗ ಸಿಗೋಣ. ನಿಮ್ಮ ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ನಿರ್ದೇಶಕ ಸಂತೋಷ್ ಆನಂದ್ರಾಮ್ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ರಾಜಕುಮಾರ್ ಹಾಗೂ ಯುವರತ್ನ ರೀತಿಯ ಬಿಗ್ಗೆಸ್ಟ್ ಚಿತ್ರಗಳನ್ನು ನೀಡಿ ಹ್ಯಾಟ್ರಿಕ್ ಬಾರಿಸಿದ್ದು, ಇದೀಗ ರಾಘವೇಂದ್ರ ಸ್ಟೋರ್ಸ್ ಮೂಲಕ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಹ್ಯಾಟ್ರಿಕ್ ಬಾರಿಸಲು ಮುಂದಾಗಿದ್ದಾರೆ.


Click it and Unblock the Notifications











