ಸೌಜನ್ಯ ಕೇಸ್ ಬಗ್ಗೆ ಸಮೀರ್ ವೀಡಿಯೋ ಬೆನ್ನಲ್ಲೇ 'ಕಾಂತಾರ' ಸಿನಿಮಾ ಟ್ರೆಂಡಿಂಗ್
13 ವರ್ಷಗಳ ಹಿಂದೆ ನಡೆದ ಸೌಜನ್ಯ ಹ* ಪ್ರಕರಣದ ಬಗ್ಗೆ ಯೂಟ್ಯೂಬರ್ ಸಮೀರ್ ಮಾಡಿರುವ ವೀಡಿಯೋ ಕೋಲಾಹಲಕ್ಕೆ ಕಾರಣವಾಗಿದೆ. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎನ್ನುವ ಆಗ್ರಹ ಮತ್ತೆ ಕಾವು ಪಡೆದುಕೊಂಡಿದೆ. ಇನ್ನು ಈ ವೀಡಿಯೋ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. 3 ದಿನದಲ್ಲಿ ವೀಡಿಯೋ ಒಂದು ಕೋಟಿಗೂ ಅಧಿಕ ವೀವ್ಸ್ ಸಾಧಿಸಿ ಮುನ್ನುಗ್ಗುತ್ತಿದೆ. ಇದೆಲ್ಲದ ಮಧ್ಯೆ 'ಕಾಂತಾರ' ಸಿನಿಮಾ ಟ್ರೆಂಡ್ ಆಗ್ತಿದೆ.
ಕನ್ನಡ ಯೂಟ್ಯೂಬ್ ಲೋಕದಲ್ಲಿ ಸಮೀರ್ ಮಾಡಿರುವ ವೀಡಿಯೋ ಹೊಸ ದಾಖಲೆ ಸೃಷ್ಟಿಸಿದೆ. ಇದೆಲ್ಲದರ ನಡುವೆ ಆತನಿಗೆ ಸಂಕಷ್ಟ ಕೂಡ ಎದುರಾಗಿದೆ. ಬೆದರಿಕೆ ಕರೆಗಳು ಬರುತ್ತಿರುವುದಾಗಿ ಖುದ್ದು ಸಮೀರ್ ಹೇಳಿಕೊಂಡಿದ್ದಾನೆ. ಇನ್ನು ಆತನ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್ಬಝಾರ್ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಾಗಿಸಿಕೊಂಡಿದ್ದರು. ಬಂಧನಕ್ಕೂ ಮುಂದಾಗಿದ್ದರು. ಸೌಜನ್ಯ ಹ* ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಪದೇ ಪದೆ ಈ ಬಗ್ಗೆ ಹೋರಾಟಗಳು ನಡೆಯುತ್ತಲೇ ಇವೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವೀಡಿಯೋಗಳನ್ನು ಮಾಡುತ್ತಿದ್ದಾರೆ. ಆದರೆ ಸಮೀರ್ ಮಾಡಿದ್ದ ವೀಡಿಯೋ ಸಂಚಲನಕ್ಕೆ ಕಾರಣವಾಗಿದೆ.

ಧರ್ಮಸ್ಥಳ ದೇವಸ್ಥಾನವನ್ನು ಮುನ್ನಡೆಸುತ್ತಿರುವ ದೊಡ್ಡವರೇ ಸೌಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸಿದ್ದಾರೆ ಎನ್ನುವ ಅರ್ಥದಲ್ಲಿ ಸಮೀರ್ ವೀಡಿಯೋದಲ್ಲಿ ಮಾತನಾಡಿದ್ದ. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ವೀಡಿಯೋ ಆರಂಭದಲ್ಲಿ ಆತ ಪ್ರಸ್ತಾಪಿಸಿರುವ ಧರ್ಮಸ್ಥಳ ಹಿಂದೂ ದೇವಾಲಯವಾ? ಅಥವಾ ಜೈನ ದೇವಾಲಯವಾ? ಎನ್ನುವ ವಿಚಾರದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮೀರ್ ತನ್ನ ವೀಡಿಯೋದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಸಮೀರ್ ವೀಡಿಯೋ ವೈರಲ್ ಬೆನ್ನಲ್ಲೇ 'ಕಾಂತಾರ' ಸಿನಿಮಾ ಟ್ರೆಂಡ್ ಆಗುತ್ತಿದೆ. ರಿಷಬ್ ಶೆಟ್ಟಿ ಚಿತ್ರದಲ್ಲಿ ದೇವೇಂದ್ರ ಸುತ್ತೂರು(ಅಚ್ಯುತ್ ಕುಮಾರ್) ಪಾತ್ರದ ಮೂಲಕ ಯಾವ ವಿಚಾರ ಹೇಳುವ ಪ್ರಯತ್ನ ಮಾಡಿದ್ದರು ಎಂದು ಚರ್ಚೆ ಶುರುವಾಗಿದೆ. ಸಮೀರ್ ವೀಡಿಯೋದಲ್ಲಿ ಪ್ರಸ್ತಾಪಿಸಿದ ಗೌಡರ ವಿಚಾರವನ್ನೇ 'ಕಾಂತಾರ' ಕಥೆಯಲ್ಲಿ ಗೋಮುಖ ವ್ಯಾಘ್ರ ದೇವೇಂದ್ರ ಸುತ್ತೂರು ಪಾತ್ರದ ಮೂಲಕ ಹೇಳಲಾಗಿದ್ಯಾ? ಎನ್ನುವ ಚರ್ಚೆ ಶುರುವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ದಿಢೀರನೆ 'ಕಾಂತಾರ' ಚಿತ್ರದ ವೀಡಿಯೋಗಳು ವೈರಲ್ ಆಗುತ್ತಿದೆ. ಕೆಲವರು ಓಟಿಟಿಗೆ ಹೋಗಿ ಮತ್ತೆ ಸಿನಿಮಾ ನೋಡಲು ಆರಂಭಿಸಿದ್ದಾರೆ. ಹಾಗಾಗಿ ರಿಷಬ್ ಶೆಟ್ಟಿ ಸಿನಿಮಾ ದಿಢೀರನೆ ಟ್ರೆಂಡ್ ಆಗಿ ಸದ್ದು ಮಾಡ್ತಿದೆ. 'ಕಾಂತಾರ' ಚಿತ್ರದ ಆರಂಭದಲ್ಲಿ ಒಬ್ಬ ರಾಜ ಇದ್ದ. ಆತ ಧರ್ಮ ದೇವತೆಗಳನ್ನು ಕರ್ಕೊಂಡ್ ಬಂದ. ತಲೆಮಾರುಗಳ ನಂತರ ದೇವೇಂದ್ರ ಸುತ್ತೂರು ಪಾತ್ರ ಬರುತ್ತದೆ. ಇದು ನಿಜವಾಗಿಯೂ ಕಥೆನಾ? ಅಥವಾ ಈ ಮೂಲಕ ರಿಷಬ್ ಶೆಟ್ಟಿ ಏನಾದರೂ ಹೇಳೋಕೆ ಪ್ರಯತ್ನಿಸಿದ್ರಾ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆ 'ಧೂತ ಸಮೀರ್ ಎಂಡಿ' ಯೂಟ್ಯೂಬ್ ಚಾನಲ್ನಲ್ಲಿ ಬಂದ ವೀಡಿಯೋ ಭಾರೀ ಚರ್ಚೆ ಹುಟ್ಟುಹಾಕಿದೆ. ಸಮೀರನ ಬಗ್ಗೆ ಟೀಕೆಗಳು ಹೆಚ್ಚಾಗಿದೆ. ಸಮೀರನ ವಿಚಾರ ಬಿಡಿ, ಸೌಜನ್ಯ ಪ್ರಕರಣದಲ್ಲಿ ಆತ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸೌಜನ್ಯ ಪ್ರಕರಣಕ್ಕೆ ನ್ಯಾಯ ಬೇಕು ಎಂದು ಸಾಕಷ್ಟು ಜನ ಆಗ್ರಹಿಸುತ್ತಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಚಿತ್ರ ಸೆಪ್ಟೆಂಬರ್ 22, 2022ರಂದು ಬಿಡುಗಡೆ ಆಗಿತ್ತು. ಚಿತ್ರಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿತ್ತು. ಕನ್ನಡದಲ್ಲಿ ಸಕ್ಸಸ್ ಕಂಡ ಬಳಿಕ ಸಿನಿಮಾ ಪರಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿತ್ತು. ಎಲ್ಲಾ ಕಡೆ ಸಿನಿಮಾ ಗೆದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಅಂದಾಜು 15 ಕೋಟಿ ರೂ. ಬಜೆಟ್ ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಚಿತ್ರದ ಪ್ರೀಕ್ವೆಲ್ ಇದೇ ವರ್ಷ ಅಕ್ಟೋಬರ್ 2ರಂದು ತೆರೆಗೆ ಬರಬೇಕಿದೆ.


Click it and Unblock the Notifications











