ಆ ದಿನವೇ 'ಕಾಂತಾರ- 2' ಮುಹೂರ್ತ: ರಿಷಬ್ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು?
ಈ ಬಾರಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟುಹಬ್ಬ ಬಹಳ ವಿಶೇಷವಾಗಿತ್ತು. ಈ ಹಿಂದಿನ ವರ್ಷಗಳಿಗಿಂತ ಹೆಚ್ಚು ಸಂಭ್ರಮ, ಸಡಗರ ತುಂಬಿತ್ತು. ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಅಭಿಮಾನಿಗಳ ಜೊತೆ ಡಿವೈನ್ ಸ್ಟಾರ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 'ಕಾಂತಾರ' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಅಭಿಮಾನಿಗಳನ್ನು ಭೇಟಿ ಮಾಡಿದ್ದರು.
ಸದ್ಯ ರಿಷಬ್ ಶೆಟ್ಟಿ 'ಕಾಂತಾರ'-2 ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅದೇ ಕಾರಣಕ್ಕೋ ಏನೋ ಸಿನಿಮಾ ಬಗ್ಗೆ ಸಾಕಷ್ಟು ಅಂತೆಕಂತೆ ಸುದ್ದಿಗಳು ಹರಿದಾಡ್ತಿದೆ. ಅಭಿಮಾನಿಗಳ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ರಿಷಬ್ ಮಾಧ್ಯಮಗಳ ಜೊತೆ ಮಾತನಾಡಿದರು. 'ಕಾಂತಾರ'-2 ಕುರಿತು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾಹಿತಿ ಬಿಚ್ಚಿಟ್ಟರು.

"ಕಾಂತಾರ -2 ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದೆ. ಈಗ ಸಂಭಾಷಣೆ ಭಾಗವನ್ನು ಮುಗಿಸಿದ್ದೇವೆ. ಇನ್ನು ಮುಂದೆ ಲೊಕೇಶನ್ ಹುಡುಕಾಟ, ಕಲಾವಿದರ ಆಯ್ಕೆ ನಡೆಯಲಿವೆ. ಆ ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಧಿಕೃತವಾಗಿ ಸಿನಿಮಾದ ಚಿತ್ರೀಕರಣದ ಬಗ್ಗೆ ಘೋಷಣೆ ಮಾಡಲಿದ್ದಾರೆ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಗಾಳಿಸುದ್ದಿಗಳ ಬಗ್ಗೆ ಸ್ಪಷ್ಟನೆ
"ಕಾಂತಾರ -2 ಸಿನಿಮಾ ಇದೇ ವರ್ಷ ಘೋಷಣೆ ಆಗುತ್ತೆ, ಚಿತ್ರೀಕರಣ ಕೂಡ ನಡೆಯುತ್ತದೆ ಎಂದ ರಿಷಬ್ ಶೆಟ್ಟಿ, ಸಿನಿಮಾದ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಅದೆಲ್ಲ ನಿಜವಲ್ಲ ಎಂದರು. ಸಿನಿಮಾ ಚಿತ್ರೀಕರಣ ಮಳೆಯಲ್ಲೇ ಮಾಡ್ತೀವಿ, ಮಾರುದ್ದ ಗಡ್ಡ ಬಿಡ್ತೀನಿ, ವಿಶೇಷ ಕಸರತ್ತುಗಳನ್ನು ಕಲಿಯುತ್ತಿದ್ದೀನಿ, ಕಾಂತಾರ -1 ಸಿನಿಮಾ ಮುಹೂರ್ತ ಮಾಡಿದ ಸಮಯಕ್ಕೆ ಕಾಂತಾರ- 2 ಸಿನಿಮಾದ ಮುಹೂರ್ತವೂ ನಡೆಯಲಿದೆ ಅಂತೆಲ್ಲಾ ಹೇಳ್ತಿದ್ದಾರೆ. ಹೊಸ ಸಿನಿಮಾ ಮುಹೂರ್ತ ಬೇರೆ ಸಮಯಕ್ಕೆ ಆಗುತ್ತೆ, ಹೊಂಬಾಳೆ ಸಂಸ್ಥೆ ಅದನ್ನು ನಿರ್ಣಯ ಮಾಡುತ್ತದೆ" ಎಂದಿದ್ದಾರೆ.
ಹುಟ್ಟುಹಬ್ಬ ಆಚರಣೆ
"ನಮ್ಮೂರಿನಲ್ಲಿದ್ದಾಗ ಹುಟ್ಟುಹಬ್ಬ ಆಚರಣೆ ಕಲ್ಪನೆಯೇ ಇರಲಿಲ್ಲ. ಕಾಲೇಜಿಗೆ ಬಂದ ಮೇಲೆ ಅದರಲ್ಲೂ ಬೆಂಗಳೂರಿಗೆ ಬಂದಮೇಲೆ ಹುಟ್ಟುಹಬ್ಬ ಹೀಗೂ ಆಚರಿಸಿಕೊಳ್ಳುತ್ತಾರೆ ಅನ್ನೋದು ಗೊತ್ತಾದದ್ದು. ಚಿತ್ರರಂಗಕ್ಕೆ ಬಂದಮೇಲೂ ಸಹ ಹುಟ್ಟುಹಬ್ಬ ದಿನ ಕೆಲಸ ಮಾಡುವ ಆಲೋಚನೆಯೇ ನನಗೆ ಇತ್ತು. ಆದರೆ ಈ ಬಾರಿ ಅಭಿಮಾನಿಗಳನ್ನು ಭೇಟಿ ಆಗುವ ಎಂಬ ಆಸೆಯಿತ್ತು. ಸ್ನೇಹಿತರು, ಕುಟುಂಬದವರ ಕೋರಿಕೆ ಮೇರೆಗೆ ಈ ಕಾರ್ಯಕ್ರಮ ಆಯೋಜನೆಯಾಯ್ತು" ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.

ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕಿತ್ತು
"ಕಾಂತಾರ ಸಿನಿಮಾ ಬಳಿಕ ಸಾಕಷ್ಟು ಜನ ಮನೆ ಬಳಿ ಬಂದಿದ್ದರು, ನಾನು ಬೇರೆ ಕಾರ್ಯಕ್ರಮಗಳಿಗೆ ಹೋದಾಗ ಭೇಟಿ ಆಗಲು ಯತ್ನಿಸುತ್ತಿದ್ದರು ಆಗುತ್ತಿರಲಿಲ್ಲ. ಹಲವರು ಮೆಸೇಜ್ ಕೂಡ ಮಾಡುತ್ತಿದ್ದರು. ಅಲ್ಲದೇ ಕಾಂತಾರ ಸಿನಿಮಾ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕಿತ್ತು. ಅದೆಲ್ಲದಕ್ಕೂ ಇದಕ್ಕಿಂತಲೂ ಒಳ್ಳೆ ವೇದಿಕೆ ಸಿಗುವುದಿಲ್ಲ ಎಂದುಕೊಂಡೆವು. ಹಾಗಾಗಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿ ಧನ್ಯವಾದ ಹೇಳಿದ್ದೇವೆ" ಎಂದು ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್
ಕೆಲ ನಿರ್ದೇಶಕರ ಬಳಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ ರಿಷಬ್ ಶೆಟ್ಟಿ ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಬಳಿಕ 'ರಿಕ್ಕಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. 'ಕಿರಿಕ್ ಪಾರ್ಟಿ' ನಿರ್ದೇಶಕನಾಗಿ ದೊಡ್ಡ ಬ್ರೇಕ್ ಕೊಟ್ಟಿತ್ತು. 'ಬೆಲ್ ಬಾಟಂ' ಚಿತ್ರದಲ್ಲಿ ಹೀರೊ ಆಗಿ ಸಕ್ಸಸ್ ಕಂಡರು. 'ಕಾಂತಾರ' ಸಿನಿಮಾ ಮೂಲಕ ನಿರ್ದೇಶಕ ಹಾಗೂ ಹೀರೊ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು.


Click it and Unblock the Notifications











