ಅವತ್ತು ರಿಷಬ್ ಶೆಟ್ಟಿಗೆ ಅವರಿವರ ಕೈ ಕಾಲು ಹಿಡಿಯುವಂತ ಸ್ಥಿತಿ ಬಂದಿದ್ದು ಯಾಕೆ?
ಒಂದು ಗೆಲುವು ಚಮತ್ಕಾರಗಳನ್ನು ಮಾಡಿಬಿಡುತ್ತದೆ. ರಾತ್ರೋ ರಾತ್ರಿ ಸ್ಟಾರ್ ಪಟ್ಟ ಅಲಂಕರಿಸಿದವರು ಇದ್ದಾರೆ. ಅವಮಾನ ಅಪಮಾನಗಳನ್ನು ಮೆಟ್ಟಿ ಗೆದ್ದವರು ರಾಜನಂತೆ ಮೆರೆಯುತ್ತಾರೆ. ಚಿತ್ರರಂಗದಲ್ಲಿ ಕೂಡ ಗೆಲುವು ಅಷ್ಟು ಸುಲಭವಾಗಿ ಸಿಗಲ್ಲ. ಆದರೆ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟ ಕೈ ಹಿಡಿದರೆ ಅದ್ಭುತಗಳು ನಡೆಯುತ್ತವೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ನೂರಾರು ಕೋಟಿ ಕೊಳ್ಳೆ ಹೊಡೆಯುತ್ತಿದೆ. ಕರ್ನಾಟಕದಲ್ಲಿ ಅಂತೂ ಎಲ್ಲಾ ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. 3 ಪಟ್ಟು 4 ಪಟ್ಟು ಹೆಚ್ಚು ದರ ಕೊಟ್ಟು ಪ್ರೇಕ್ಷಕರು ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದಾರೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶಕ ಕಂಡು ಬೆರಗಾಗಿದ್ದಾರೆ. ಅವರ ಪರಿಶ್ರಮಕ್ಕೆ ಬಹುಪರಾಕ್ ಎನ್ನುತ್ತಿದ್ದಾರೆ. ಆದರೆ 9 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ.

ಚಿತ್ರರಂಗದ ಹಿನ್ನೆಲೆ ಇಲ್ಲದೇ ಬಂದ ರಿಷಬ್ ಶೆಟ್ಟಿ ಆರಂಭದಲ್ಲಿ ಅವಮಾನ ಅಪಮಾನ ಎದುರಿಸಿದ್ದು ಇದೆ. ಅದನ್ನೆಲ್ಲಾ ಮೆಟ್ಟಿನಿಂತು ರಿಷಬ್ ಗೆದ್ದು ಬೀಗಿದ್ದಾರೆ. ಇಂದು ಅವರನ್ನು ನಂಬಿ ನಿರ್ಮಾಪಕರು ಕೋಟಿ ಕೋಟಿ ಹಣ ಸುರಿಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫಿಲ್ಮ್ ಮೇಕರ್ಸ್ ಕಾಲ್ಶೀಟ್ ಪಡೆಯಲು ಕ್ಯೂ ನಿಂತಿದ್ದಾರೆ. ಬರೀ ನಿರ್ದೇಶಕರಾಗಿದ್ದವರು ಈಗ ರಾಷ್ಟ್ರಪ್ರಶಸ್ತಿ ವಿಜೇತ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೆ ಅಂದು ತಮ್ಮ ಚಿತ್ರದ ಒಂದೇ ಒಂದು ಶೋ ಪಡೆಯಲು ರಿಷಬ್ ಶೆಟ್ಟಿ ಅವರಿವರ ಕೈಕಾಲು ಹಿಡಿಯುವಂತಾಗಿತ್ತು. ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ್ದ ಚಿತ್ರಕ್ಕೆ ಶೋಗಳನ್ನು ಕೊಡಲು ಚಿತ್ರಮಂದಿರದ ಮಂದಿ ಹಿಂದೇಟು ಹಾಕಿದ್ದರು. ಕಾಲ ಒಂದೇ ರೀತಿ ಇರುವುದಿಲ್ಲ. ಎಲ್ಲಾ ಬದಲಾಗಲೇಬೇಕು. 2016ರಲ್ಲಿ ರಿಷಬ್ ಶೆಟ್ಟಿ ಮಾಡಿದ್ದ ಪೋಸ್ಟ್ ಈಗ ವೈರಲ್ ಆಗುತ್ತಿದೆ.
'ರಿಕ್ಕಿ' ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಚೊಚ್ಚಲ ಸಿನಿಮಾ. ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ನಾಯಕ-ನಾಯಕಿಯಾಗಿ ಚಿತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡ ಆಗದೇ ಪ್ರೇಕ್ಷಕರಿಂದ ಬೇಡಿಕೆ ಇದ್ದರೂ ಶೋಗಳನ್ನು ಕೊಡಲು ಸಾಧ್ಯವಾಗಿರಲಿಲ್ಲ. ಎರಡನೇ ವಾರಕ್ಕೆ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ತೆಗೆದುಬಿಟ್ಟಿದ್ದರು. ಮಂಗಳೂರಿನಲ್ಲಿ ಪ್ರೇಕ್ಷಕರು ಕೇಳಿದ್ರು ಶೋ ಸಿಕ್ಕಿರಲಿಲ್ಲ. ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ ಸಂಜೆ 7 ಗಂಟೆಗೆ ಶೋ ಪ್ರದರ್ಶನ ಮಾಡಲು ರಿಷಬ್ ಶೆಟ್ಟಿ ಹರಸಾಹಸಪಟ್ಟಿದ್ದರು. ಈ ಬಗ್ಗೆ ಪೋಸ್ಟ್ ಮಾಡಿದ್ದರು.

"ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ ನಾಳೆಯಿಂದ ಸಂಜೆ 7ಕ್ಕೆ ಶೋ ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್ ಬುಕ್ ಮಾಡಿ ಥ್ಯಾಂಕ್ಯೂ" ಎಂದು ರಿಷಬ್ ಬರೆದುಕೊಂಡಿದ್ದರು. ಸದ್ಯ 'ಕಾಂತಾರ- 1' ದೇಶ ವಿದೇಶಗಳಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದ್ದು ನೆಟ್ಟಿಗರು ರಿಷಬ್ ಶೆಟ್ಟಿ ಮಾಡಿದ್ದ ಅಂದಿನ ಪೋಸ್ಟ್ ಅನ್ನು ವೈರಲ್ ಮಾಡುತ್ತಿದ್ದಾರೆ.
"ಸಮಯ ಒಂದೇ ರೀತಿ ಇರೋಲ್ಲ ಎಲ್ಲರಿಗೂ, ಒಳ್ಳೆಯ ಸಮಯ ಬಂದೆ ಬರುತ್ತೆ, ತಾಳ್ಮೆ ಇರಲಿ. ಶ್ರೀ ಕೃಷ್ಣನ ಭಾಗವದ್ಗೀತೆಯ ಸಾಲುಗಳು ಕಣ್ಣ ಮುಂದೆ ಬಂತು, ಆ ಭಗವಂತನೆ ನಮ್ಮ ತುಳುನಾಡಿನ ಸಂಸ್ಕೃತಿಯ ಅನಾವರಣ ಮಾಡಲು ಕಳಿಸಿದ್ದಾನೋ ಎನ್ನುವ ತರ ಅನಿಸಿ ಬಿಟ್ಟಿತು" ಎಂದು ಬರೆದು ನೆಟ್ಟಿಗರೊಬ್ಬರು ರಿಷಬ್ ಶೆಟ್ಟಿ ಅವರ ಅಂದಿನ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ನೋಡ ನೋಡುತ್ತಲೇ ಈ ಪೋಸ್ಟ್ ವೈರಲ್ ಆಗುತ್ತಿದೆ. ಅಂದು ರಿಷಬ್ ಶೆಟ್ಟಿ ಪಟ್ಟ ಕಷ್ಟ ಎಂಥದ್ದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇವತ್ತು ಬೆಂಗಳೂರಿನಲ್ಲೇ 1000ಕ್ಕೂ ಅಧಿಕ ಶೋಗಳಲ್ಲಿ 'ಕಾಂತಾರ- 1' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅದೇ ಮಂಗಳೂರಿನಲ್ಲಿ 100ಕ್ಕೂ ಅಧಿಕ ಶೋಗಳು ಹೌಸ್ಫುಲ್ ಆಗ್ತಿದೆ. ನಿಜಕ್ಕೂ ಇದು ಸ್ಫೂರ್ತಿದಾಯಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವತ್ತು ನಿಮ್ಮ ಸಿನಿಮಾ ನೋಡಲು ಇಡೀ ದೇಶವೇ ಕಾಯುತ್ತಿದೆ. ಟಿಕೆಟ್ ಸಿಗುತ್ತಿಲ್ಲ" ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











