Kantara Trailer: ಸೇಡಿನ ಕಥೆ ಹೇಳುವ 'ಕಾಂತಾರ' ಟ್ರೈಲರ್!
ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಭಿನ್ನ ಕಥಾಹಂದರವನ್ನು ಹೊಂದಿರುವ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಅದರಲ್ಲೂ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಅಡಿಯಲ್ಲಿ ಹಲವು ವಿಭಿನ್ನ ಎಳೆ ಇರುವ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಅದರಲ್ಲಿ ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ' ಸಿನಿಮಾ ಕೂಡ ಒಂದು.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಸಾಂಗ್ ರಿಲೀಸ್ ಸೂಪರ್ ಹಿಟ್ ಆಗಿವೆ. ಬಹುನಿರೀಕ್ಷಿತ ಚಿತ್ರದ ಟ್ರೈಲರ್ ಕೂಡ ಈಗ ರಿಲೀಸ್ ಮಾಡಿದೆ ಚಿತ್ರತಂಡ.
'ಕಾಂತಾರ' ಎನ್ನುವ ಟೈಟಲ್ಲೇ ವಿಭಿನ್ನ ಎನಿಸುತ್ತದೆ. ಇನ್ನು ಈಗಾಗಲೇ ಚಿತ್ರತಂಡ ಹರಿಬಿಟ್ಟ ತುಣುಕುಗಳು ವಿಶೇಷವಾದ ಕುತೂಹಲವನ್ನು ಹುಟ್ಟು ಹಾಕಿವೆ. ಹಾಗಿದ್ದರೆ ಈಗ ರಿಲೀಸ್ ಆಗಿರುವ ಈ ಟ್ರೈಲರ್ನಲ್ಲಿ ಇರೋದೇನು ಎನ್ನುವುದನ್ನು ಮುಂದೆ ಓದಿ...

'ಕಾಂತಾರ' ಟ್ರೈಲರ್ಗೆ ಭಾರಿ ಮೆಚ್ಚುಗೆ!
ಸದ್ಯ ಕನ್ನಡದಲ್ಲಿ ತೆರೆಗೆ ಬರ್ತಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಕಾಂತಾರ' ಸಿನಿಮಾ ಮುಂಚೂಣಿಯಲ್ಲಿದೆ. ಹಾಗಾಗಿ ಈ ಚಿತ್ರದ ಅಪ್ಡೇಟ್ಗಾಗಿ ಪ್ರೇಕ್ಷಕರು ಕಾಯುತ್ತಿದ್ದರು. ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಹಿಂದೆ ಈ ಚಿತ್ರದ ಹಾಡಿಗೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ಸಿಕ್ಕಿತ್ತು. ಈಗ ಚಿತ್ರ ಟ್ರೈಲರ್ಗೂ ಕೂಡ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. 22 ನಿಮಿಷದ 44 ಸೆಕೆಂಡಿನ ಈ ಟ್ರೈಲರ್ ಸಿಕ್ಕಾಪಟ್ಟೆ ರೋಚಕವಾಗಿದ್ದು ಸಿನಿಮಾದ ಮೇಲಿನ ಕೌತುಕತೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಕಾಡಿನ ಸೇಡಿನ ಕಥೆ 'ಕಾಂತಾರ'?
'ಕಾಂತಾರ' ಟ್ರೈಲರ್ನಲ್ಲಿ ಸಿನಿಮಾ ಕಥೆಯ ಎಳೆಯನ್ನು ಬಿಚ್ಚಿಡಲಾಗಿದೆ. ಟ್ರೈಲರ್ನಲ್ಲಿ ಸಿನಿಮಾ ಬಗ್ಗೆ ಒಂದಷ್ಟು ಸುಳಿವುಗಳನ್ನು ಕೊಡಲಾಗಿದೆ. ಇದು ಕಾಡಿನ ಸೇಡಿನ ಕಥೆ ಎನ್ನುವು ಸ್ಪಷ್ಟವಾಗುತ್ತದೆ. ಅಂದರೆ ಟ್ರೈಲರ್ ಆರಂಭದಲ್ಲಿ, 'ಒಬ್ಬ ರಾಜ, ಒಂದು ಕಲ್ಲಿಗಾಗಿ ವಿಶಾಲವಾದ ಜಾಗವನ್ನು ತನ್ನ ಊರಿನವರಿ ಬಿಟ್ಟು ಕೊಟ್ಟ, ಕೊಟ್ಟ ಜಾಗ ವಾಪಸ್ ತೆಗೆದುಕೊಂಡರೆ ದೈವ ಕೊಟ್ಟ ಮಾತಿಗೆ ತಪ್ಪಿದ ಹಾಗೆ ಅಲ್ವಾ' ಎನ್ನುವ ಡೈಲಾಗ್ ಇದೆ. ಬಳಿಕ ಟ್ರೈಲರ್ ಉದ್ದಕ್ಕೂ ಫಾರೆಸ್ಟ್ ಆಫೀಸರ್ ಮತ್ತು ಊರಿನ ಒಬ್ಬ ಸದಸ್ಯ ರಿಷಬ್ ಶೆಟ್ಟಿ ನಡುವೆ ಮಾರಾಮಾರಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ಆ ಊರಿನ ಜನರನ್ನು ಅಲ್ಲಿಂದ ಓಡಿಸಲು ಪ್ರಯತ್ನ ಮಾಡಲಾಗುತ್ತದೆ. ಇದರ ವಿರುದ್ಧ ನಟ ಹೋರಾಟ ಮಾಡುತ್ತಾನೆ ಎನ್ನುವುದು ಮುಖ್ಯ ತಿರುಳು ಎನ್ನುವ ಹಿಂಟ್ ಕೊಟ್ಟಿದೆ ಟ್ರೈಲರ್.

ಸೆಪ್ಟೆಂಬರ್ 30ಕ್ಕೆ 'ಕಾಂತಾರ' ತೆರೆಗೆ!
ಕರಾವಳಿಯ ಕಲರವ ಇರುವ 'ಕಾಂತಾರ' ಸಿನಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ತುಳು ನಾಡಿನ ಜನರ ಬದುಕು, ಭಾಷೆ, ಸಂಸ್ಕೃತಿಯ ಸುತ್ತಾ 'ಕಾಂತಾರ' ಕಥೆಯನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಕಂಬಳ ಓಟ, ಶಿಕಾರಿ, ಅಚರಣೆ, ಬೇಟೆ ಇದೆಲ್ಲವನ್ನೂ ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿ ಕೊಟ್ಟಿರುವಂತೆ ಕಾಣುತ್ತಿದೆ. ಇದೇ ಸೆಪ್ಟೆಂಬರ್ 30ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

ಅದ್ಧೂರಿ ತಾರಾಗಣ!
'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ನಟ ಕಿಶೋರ್, ಅಚ್ಯುತ್ ಕುಮಾರ್, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ವಿಜಯ್ ಕಿರಗಂದೂರು ಅದ್ದೂರಿ ನಿರ್ಮಾಣ 'ಕಾಂತಾರ' ಚಿತ್ರಕ್ಕಿದೆ. ಅರವಿಂದ್. ಎಸ್. ಕಶ್ಯಪ್ ಛಾಯಾಗ್ರಹಣ ಇದೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದು ಈಗಾಗಲೇ ಚಿತ್ರದ 'ಸಿಂಗಾರ ಸಿರಿಯೇ' ಹಾಡು ಸೂಪರ್ ಹಿಟ್ ಆಗಿದೆ.


Click it and Unblock the Notifications











