"ನಂಗೆ ವೋಟ್ ಹಾಕಿದ್ರೆ, ಆಧಾರ್- ಪ್ಯಾನ್ ಲಿಂಕ್ ಫ್ರೀ ಮಾಡ್ತಿನಿ, ವಿಧಾನಸೌಧ ಮಾರಿ ನಿಮ್ಮ ಸಾಲ ತೀರಿಸ್ತೀನಿ" ಎಂದ ರಿಷಿ
'ಆಪರೇಷನ್ ಅಲಮೇಲಮ್ಮ' ಸಿನಿಮಾ ಖ್ಯಾತಿಯ ನಟ ರಿಷಿ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದರು. ಇದೀಗ ದಿಢೀರನೇ ನಾನು ಎಲೆಕ್ಷನ್ಗೆ ನಿಲ್ತೀನಿ, ವೋಟ್ ಹಾಕಿ ನನ್ನನ್ನು ಗೆಲ್ಲಿಸಿದರೆ ವಿಧಾನಸೌಧ ಮಾರಿ ನಿಮ್ಮ ಸಾಲ ತೀರಿಸುತ್ತೀನಿ. ಆಧಾರ್ ಕಾರ್ಡ್- ಪ್ಯಾನ್ ಕಾರ್ಡ್ ಲಿಂಕ್ ಫ್ರೀ ಮಾಡ್ತೀನಿ ಅಂತೆಲ್ಲಾ ಆಶ್ವಾಸನೆ ಕೊಡ್ತಿದ್ದಾರೆ. ಹಾಗಂತ ರಿಷಿ ಚುನಾವಣೆಗೆ ನಿಲ್ತಿಲ್ಲ. ಇದು ಬರೀ ಸಿನಿಮಾ ಪ್ರಮೋಷನ್ ಅಷ್ಟೇ.
ರಿಷಿ ನಟನೆಯ 'ರಾಮನ ಅವತಾರ' ಎನ್ನುವ ಸಿನಿಮಾ ರಿಲೀಸ್ಗೆ ರೆಡಿ ಆಗ್ತಿದೆ. ಇತ್ತೀಚೆಗೆ ರಾಮನವಮಿ ವಿಶೇಷವಾಗಿ ಪೋಸ್ಟರ್ ರಿಲೀಸ್ ಮಾಡಿದ್ದ ತಂಡ ಈಗ ಟೀಸರ್ ಹೊರಬಿಡಲು ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ಒಂದೊಂದು ಪಕ್ಷ ಒಂದೊಂದು ರೀತಿ ಆಶ್ವಾಸನೆ ನೀಡುತ್ತಿದೆ. ಅದೇ ರೀತಿ ರಿಷಿ ಕೂಡ ಕೂಡ ಒಂದಷ್ಟು ಆಶ್ವಾಸನೆ ನೀಡಿದ್ದಾರೆ. ಆದರೆ ಇದೆಲ್ಲಾ 'ರಾಮನ ಅವತಾರ' ಚಿತ್ರದ ಜಂಟಲ್ಮನ್ ರಾಮನ ಕಥೆ ಅಷ್ಟೇ.

ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿರುವ ರಿಷಿ ವಿಡಿಯೋ ಸಖತ್ ವೈರಲ್ ಆಗ್ತಿದೆ. "ನಮ್ಮ ರಾಜ್ಯದ ಎಲ್ಲಾ ಸಮಸ್ಯೆಗಳು ಬಗೆಹರಿಸಬೇಕು ಅಂದ್ರೆ ಮೊದಲು ನಾವು ವಿಧಾನಸೌಧ ಮಾರಬೇಕು" ಎಂದು ಆರಂಭದಲ್ಲೇ ರಿಷಿ ಗಮನ ಸೆಳೆಯುತ್ತಾರೆ. ಮುಂದೆ "ಓಹ್... ನಾನು ಯಾರು ಅಂತ ಕೇಳ್ತಾ ಇದ್ದೀರಾ? ನಮಸ್ಕಾರ. ನನ್ನ ಹೆಸರು ರಾಮಕೃಷ್ಣ. ಊರಲ್ಲಿ ನನ್ನ ಎಲ್ಲರೂ ಜಂಟಲ್ಮನ್ ರಾಮ ಅಂತ ಕರೀತಾರೆ. ಚಾಟ್ ಜಿಪಿಟಿ ಬಂದಮೇಲೆ ನನ್ನನ್ನು ಕೆಲಸದಿಂದ ಕಿತ್ತು ಹಾಕಿದ್ರು. ಬೇಜಾರ್ ಆಗಲ್ವಾ ನನಗೆ. ನನ್ನ ಹೃದಯಕ್ಕೆ ಪೇಯ್ನ್ ಆಗಲ್ವಾ. ಎಲ್ಲೇ ಕೆಲಸ ಹುಡುಕಿಕೊಂಡು ಹೋದ್ರು ಏನ್ ಓದಿದ್ದೀಯಾ ಅಂತ ಕೇಳ್ತಾರೆ. ಯಾರೂ ಈ ಪ್ರಶ್ನೆ ಕೇಳಬಾರದು. ಅಂತಹ ಕೆಲಸ ಮಾಡ್ತೀನಿ. ಎಲೆಕ್ಷನ್ಗೆ ನಿಲ್ತೀನಿ"
ಮಾತು ಮುಂದುವರೆಸಿರುವ ರಿಷಿ "ನಾನೇನಾದರೂ ಅಧಿಕಾರಕ್ಕೆ ಬಂದ್ರೆ ವಿಧಾನಸೌಧ ಮಾರಿಬಿಡ್ತೀನಿ. ಎಲ್ಲರಿಗೂ ವರ್ಕ್ ಫ್ರಮ್ ಹೋಮ್ ಇದೆ. ನಮ್ಮಂಥ ನಾಯಕರಿಗೆ ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಆಫೀಸ್ ಯಾಕೆ ಬೇಕು? ವಿಧಾನಸೌಧ ಮಾರಿದಾಗ ಬರುತ್ತಲ್ಲಾ ಆ ದುಡ್ಡಲ್ಲಿ ನಮ್ಮೆಲ್ಲರ ಸಾಲ ತೀರಿಸುತ್ತೇನೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಉಚಿತವಾಗಿ ಮಾಡಿಸುತ್ತೇನೆ. ನನ್ನಂಥ ಇನೋವೇಟಿವ್ ಲೀಡರ್ ಬೇಕು ಅಂದರೆ ನನಗೆ ನೀವು ವೋಟ್ ಹಾಕಬೇಕು"
ನನ್ನ ಬಗ್ಗೆ ಏನು ಗೊತ್ತಿಲ್ವಾ, ಹೇಗೆ ವೋಟ್ ಹಾಕೋದು ಅಂದ್ರಾ? ಎನ್ನುತ್ತಿದ್ದಂತೆ 'ರಾಮನ ಅವತಾರ' ಟೀಸರ್ ರಿಲೀಸ್ ಡೇಟ್ ಅನೌನ್ಸ್ ಆಗುತ್ತದೆ. ಟೀಸರ್ ರಿಲೀಸ್ ಡೇಟ್ ಘೋಷಿಸಿಲು ಕ್ರಿಯೇಟಿವ್ ಆಗಿ ವಿಡಿಯೋ ಮಾಡಿರೋದಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಏಪ್ರಿಲ್ 10ಕ್ಕೆ ಟೀಸರ್ ರಿಲೀಸ್ ಆಗಲಿದೆ. ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಿಕಾಸ್ ಪಂಪಾಪತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

'ರಾಮನ ಅವತಾರ' ರೊಮ್ಯಾಂಟಿಕ್ ಕಾಮಿಡಿ-ಡ್ರಾಮಾ ಎನ್ನಲಾಗ್ತಿದ್ದು ಶುಭ್ರ ಅಯ್ಯಪ್ಪ, ಪ್ರಣಿತಾ ಸುಭಾಷ್ ಮತ್ತು ಅರುಣ್ ಸಾಗರ್ ತಾರಾಗಣದಲ್ಲಿ ಇದ್ದಾರೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಮರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗೋದು ತಡವಾಗಿತ್ತು. ವಿಷ್ಣುಪ್ರಸಾದ್ ಮತ್ತು ಸಮೀರ್ ದೇಶಪಾಂಡೆ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.
ಜೂನ್ ವೇಳೆಗೆ 'ರಾಮನ ಅವತಾರ' ತೋರಿಸಲು ಚಿತ್ರತಂಡ ನಿರ್ಧರಿಸಿದೆ. ಪ್ರಮೋಷನ್ ಭಾಗವಾಗಿ ಮೊದಲು ಟೀಸರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಸಾಂಗ್ಸ್ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











