Ramana Avatara Teaser: ಕಲಿಯುಗದ ರಾಮನ ಕಥೆಯಲ್ಲಿ ರಿಷಿ ಪ್ರೀತಿ, ಕಾಮಿಡಿ ಇತ್ಯಾದಿ
ರಿಷಿ ನಟನೆಯ 'ರಾಮನ ಅವತಾರ' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಟೀಸರ್ ಮೂಲಕ ನಿರ್ದೇಶಕ ವಿಕಾಸ್ ಪಂಪಾಪತಿ ಭರಪೂರ ನಗುವಿನ ಮ್ಯಾಜಿಕ್ಕನ್ನು ಪ್ರೇಕ್ಷಕರಿಗೆ ಉಣ ಬಡಿಸುವ ಪ್ರಯತ್ನ ಮಾಡಿದ್ದಾರೆ. ರಿಷಿ ಪಂಚಿಂಗ್ ಡೈಲಾಗ್ಸ್ ಮೂಲಕ ನೋಡುಗರನ್ನು ನಕ್ಕು ನಲಿಸುತ್ತಾರೆ. ನಾಯಕಿಯರಾಗಿ ಪ್ರಣೀತಾ ಸುಭಾಶ್ ಹಾಗೂ ಶುಭ್ರ ಅಯ್ಯಪ್ಪ ಸಾಥ್ ಕೊಟ್ಟಿದ್ದಾರೆ.
ಅರುಣ್ ಸಾಗರ್ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನನ್ನ ಚುನಾವಣೆಯಲ್ಲಿ ಗೆಲ್ಲಿಸಿದರೆ ವಿಧಾನ ಸೌಧ ಮಾರಿ ನಿಮ್ಮ ಸಾಲ ತೀರಿಸುತ್ತೇನೆ ಎಂದು ರಿಷಿ ಸ್ಪೆಷಲ್ ವಿಡಿಯೋ ಮಾಡಿ ಗಮನ ಸೆಳೆದಿದ್ದರು. ಟೀಸರ್ ರಿಲೀಸ್ ಡೇಟ್ ಘೋಷಣೆ ಮಾಡಉ ಇಂತಾದೊಂದು ಸ್ಪೆಷಲ್ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಹಾಗಾಗಿ ಸಹಜವಾಗಿಯೇ 'ರಾಮನ ಅವತಾರ' ಟೀಸರ್ ಬಗ್ಗೆ ಕುತೂಹಲ ಇತ್ತು.

ರಾಮಕೃಷ್ಣ ಅಲಿಯಾಸ್ ರಾಮನಾಗಿ ಚಿತ್ರದಲ್ಲಿ ರಿಷಿ ಚಿತ್ರದಲ್ಲಿ ನಟಿಸಿದ್ದಾರೆ. ಯುವಕರೆಲ್ಲಾ ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಹೋದರೆ ನಮ್ಮ ಊರು ಹೆಂಗೆ ಉದ್ದಾರ ಆಗುತ್ತೆ, ನಮ್ಮೂರಲ್ಲೇ ನಮ್ಮವರಿಗೆ ಕೆಲಸ ಸಿಗುವಂತೆ ಮಾಡಬೇಕು ಎನ್ನೋದು ರಾಮನ ಉದ್ದೇಶ. ಇನ್ನು ಹೆಸರು ರಾಮ ಆದರೂ ಶ್ರೀಕೃಷ್ಣನಂತೆ ಸ್ತ್ರೀಲೋಲ. ಇಬ್ಬರು ನಾಯಕಿಯರ ಜೊತೆ ಮೀಟಿಂಗು, ಡುಯೆಟ್ಟು ಎಲ್ಲಾ ಇದೆ.
ಊರಲ್ಲಿ ಆಡುವ ನಾಟಕದಲ್ಲಿ ಶ್ರೀರಾಮನ ವೇಷ ಹಾಕಿಕೊಂಡು ವೇದಕೆ ಏರುವುದು ಬಿಟ್ಟು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಾನೆ. ಇನ್ನು ಅರುಣ್ ಸಾಗರ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ I20 ಕಾಮಿಡಿ ಸೀನ್ ಪ್ರೇಕ್ಷಕರ ಗಮನ ಸೆಳೆದಿದೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಮರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಿಕಾಸ್ ಪಂಪಾಪತಿ 'ರಾಮನ ಅವತಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಟೀಸರ್ ರಿಲೀಸ್ ಬಳಿಕ ಮಾತನಾಡಿದ ರಿಷಿ, "ಸಾಮಾನ್ಯವಾಗಿ ಕಾಮಿಡಿ ಕಷ್ಟವಾದ ಜಾನರ್. ಅದರಲ್ಲಿ ಡಬಲ್ ಮೀನಿಂಗ್ ಮಾಡಬಹುದು. ಬೇರೆಯವರನ್ನು ನಿಂದಿಸಿ ಕಾಮಿಡಿ ಮಾಡಬಹುದು. ಡಬಲ್ ಮೀನಿಂಗ್ ಇಲ್ಲದೇ. ಯಾರಿಗೂ ನಿಂದಿಸದೆ ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್ ಪಂಪಾಪತಿ ಉದಾಹರಣೆ. ನಾನು ಈ ಸಿನಿಮಾವನ್ನು ತುಂಬಾ ಮಜಾಕೊಂಡು ಮಾಡಿದ್ದೇನೆ. ನನಗೆ ಖುಷಿ ಕೊಟ್ಟ ಸಿನಿಮಾ" ಎಂದಿದ್ದಾರೆ.

ನಿರ್ದೇಶಕ ವಿಕಾಸ್ ಪಂಪಾಪತಿ ಮಾತನಾಡಿ, "ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆ. ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೆ ಸಿನಿಮಾವನ್ನು ಮಾಡಿದ್ದು ಕನ್ನಡ ಸಿನಿ ರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ, ಪ್ರೇಕ್ಷಕರಿಗೆ ಮನೋರಂಜನೆ ಕೊಡುವುದರಲ್ಲಿ ಸಂದೇಹವಿಲ್ಲ" ಎಂದಿದ್ದಾರೆ.
'ರಾಮನ ಅವತಾರ' ಚಿತ್ರಕ್ಕೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಸಿನಿಮಾ ಶೂಟಿಂಗ್ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಆರಂಭಿಸಿರುವ ಚಿತ್ರತಂಡ ಜೂನ್ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.


Click it and Unblock the Notifications











