ದೇವ್ರಾಣೆ ಚಿತ್ರದಿಂದ ಋಷಿಕುಮಾರನಿಗೆ ಗೇಟ್ ಪಾಸ್

'ನೈಂಟಿ' ಚಿತ್ರದಲ್ಲಿ ಲಕ್ಕಿ ಶಂಕರ್ ಅವರು ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಈಗ 'ದೇವ್ರಾಣೆ' ಚಿತ್ರದಲ್ಲಿ ಕಾವಿಧಾರಿಗಳ ಬಣ್ಣ ಬಯಲು ಮಾಡಲು ಹೊರಟಿದ್ದಾರೆ. ಈ ಚಿತ್ರದ ಒಂದು ಪಾತ್ರವನ್ನು ಋಷಿಕುಮಾರ ಸ್ವಾಮೀಜಿಗಳು ಪೋಷಿಸಿದ್ದರು.
ಆದರೆ ಈಗ ಋಷಿಕುಮಾರ ಸ್ವಾಮಿಗಳ ಬಣ್ಣವೇ ಬಯಲಾಗಿರುವ ಕಾರಣ ಅವರ ಪಾತ್ರವನ್ನು ಕೈಬಿಡುತ್ತಿರುವುದಾಗಿ ಚಿತ್ರದ ನಿರ್ದೇಶಕ ಲಕ್ಕಿ ಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇವಲ 40 ಸೆಕೆಂಡ್ ಗಳಷ್ಟಿರುವ ಅವರ ಪಾತ್ರಕ್ಕೆ ಕತ್ತರಿ ಹಾಕುತ್ತಿರುವುದಾಗಿ ಲಕ್ಕಿ ಶಂಕರ್ ಹೇಳಿದ್ದಾರೆ.
ಈ ರೀತಿಯ ವಿವಾದಾತ್ಮಕ ಸ್ವಾಮಿಗಳು ತಮ್ಮ ಚಿತ್ರದಲ್ಲಿದ್ದರೆ ತಮ್ಮ ಚಿತ್ರಕ್ಕೂ ಅಪಾಯ ತಪ್ಪಿದ್ದಲ್ಲ ಎಂಬ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಋಷಿಕುಮಾರ ಸ್ವಾಮೀಜಿಗಳ ರು.11 ಕೋಟಿ ಹಾಗೂ ಒಂದು ಫಾರ್ಚ್ಯೂನರ್ ಕಾರಿನ ಡೀಲ್ ಬಹಿರಂಗವಾಗಿರುವುದು ಗೊತ್ತೇ ಇದೆ.
ಇಷ್ಟಕ್ಕೂ ಈ ಚಿತ್ರದಲ್ಲಿ ಅಭಿನಯಿಸುವಂತೆ ಲಕ್ಕಿ ಶಂಕರ್ ಅವರೇನು ಋಷಿಕುಮಾರ ಅವರನ್ನು ಭೇಟಿ ಮಾಡಿರಲಿಲ್ಲವಂತೆ. ಬದಲಾಗಿ ಅವರೇ ತಮಗೊಂದು ಪಾತ್ರಕೊಡಿ ಎಂದು ವಿನಂತಿಸಿಕೊಂಡಿದ್ದರಂತೆ. ಇವರು ಹೇಗೂ ಟಿವಿ ವಾಹಿನಿಗಳಲ್ಲಿ ವಟವಟ ಎಂದು ಮಾತನಾಡಿ ಕಣ್ಣೀರ ಕೋಡಿ ಹರಿಸಿ ಖ್ಯಾತರಾಗಿದ್ದಾರಲ್ಲಾ ಎಂದುಕೊಂಡು ಪಾತ್ರ ಕೊಟ್ಟಿದ್ದರಂತೆ.
ಅವರ ಪಾತ್ರಕ್ಕೆ ಅವರೇ ಧ್ವನಿ ಕೊಟ್ಟು ಡೈಲಾಗ್ ಸಹ ಹೊಡೆದಿದ್ದರು. ಚಿತ್ರದ ಆರಂಭದಲ್ಲಿ ಅವರ ಸೀನ್ ಬರುತ್ತದಂತೆ. ಕಾಷಾಯ ವಸ್ತ್ರವನ್ನು ಯಾರು ತೊಡಬೇಕು, ಅದರ ಮಹತ್ವವೇನು, ಕಾವಿ ಇರೋದು ನೊಂದವರ ಕಣ್ಣೀರು ಒರೆಸಲು ಹಾಗೆ ಹೀಗೆ ಎಂದು ಡೈಲಾಗ್ ಹೊಡೀತಾರೆ. ಈಗ ಅವರೇ ವಿವಾದಲ್ಲಿ ಸಿಕ್ಕಿರುವ ಕಾರಣ ಆ ಪಾತ್ರವನ್ನು ಕಟ್ ಮಾಡಿದ್ದೇವೆ ಎನ್ನುತ್ತಾರೆ ಲಕ್ಕಿ ಶಂಕರ್. (ಏಜೆನ್ಸೀಸ್)


Click it and Unblock the Notifications











