ಒಂದಾಗ್ತಿದ್ದಾರೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್!
ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಜೋರಾಗಿ ಸದ್ದು ಮಾಡಿದ್ದು ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ವಿವಾದ. ಸಹೋದರರಂತೆ ಉತ್ತಮ ಸ್ನೇಹಿತರಂತೆ ಇದ್ದ ದರ್ಶನ್ ಮತ್ತು ಉಮಾಪತಿಯ ನಡುವೆ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಒಂದು ಸೃಷ್ಟಿಯಾಯಿತು. ಇದರಿಂದ ದರ್ಶನ್ ಮತ್ತು ಉಮಾಪತಿಯ ನಡುವೆ ವೈಮನಸ್ಸು ಬೆಳೆಯಿತು. ಈ ವಿವಾದ ಜೋರಾಗಿ ಸದ್ದು ಮಾಡಿತ್ತು.
ಈ ವಿಚಾರ ವಾರಗಟ್ಟಲೆ ಸದ್ದು ಮಾಡಿತ್ತು. ದರ್ಶನ್ ಮತ್ತು ಉಮಾಪತಿ ನಡುವೆ ಯಾರೋ ಹುಳಿ ಹಿಂಡಲು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಈ ವಿವಾದದ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೂರ ಆದರು.
ದರ್ಶನ್ ಮತ್ತು ಉಮಾಪತಿ ದೂರ ಆಗಿದ್ದರಿಂದ ಮಾಡಬೇಕಾಗಿರುವ ಸಿನಿಮಾ ಕೂಡಾ ನಿಂತುಹೋಗಿದೆ. ಅದರೆ ಇದೀಗ 'ಸಿಂಧೂರ ಲಕ್ಷ್ಮಣ' ಚಿತ್ರದ ಮೂಲಕ ಮತ್ತೆ ದರ್ಶನ್ ಮತ್ತು ಉಮಾಪತಿ ಒಂದಾಗುವ ಸೂಚನೆ ಸಿಕ್ಕಿದೆ.

'ಸಿಂಧೂರ ಲಕ್ಷ್ಮಣ' ಚಿತ್ರಕ್ಕೆ ಉಮಾಪತಿ ನಿಶಾನೆ!
ವಿವಾದದ ಬಳಿಕ ದರ್ಶನ್, ತರುಣ್ ಸುಧೀರ್ ಮತ್ತು ಉಮಾಪತಿ ಮಾಡಬೇಕೆಂದುಕೊಂಡಿದ್ದ ಸಿನಿಮಾ 'ಸಿಂಧೂರ ಲಕ್ಷ್ಮಣ' ನಿಂತುಹೋಗಿದೆ ಎನ್ನಲಾಗಿತ್ತು. ಆದರೆ ಇದೀಗ 'ಸಿಂಧೂರ ಲಕ್ಷ್ಮಣ' ಚಿತ್ರದ ಬಗ್ಗೆ ಮಾತನಾಡಿರುವ ನಿರ್ಮಾಪಕ ಉಮಾಪತಿ ಸಿನಿಮಾವನ್ನು ಮತ್ತೆ ಶುರು ಮಾಡಲು ತಯಾರಾಗಿದ್ದಾರೆ. ಈ ಸಿನಿಮಾವನ್ನು ದರ್ಶನ್ ಅವರಿಗಾಗಿಯೇ ಮಾಡುತ್ತೇನೆ ಎಂದಿದ್ದಾರೆ. ಹಾಗಾಗಿ ದರ್ಶನ್ ಮತ್ತು ಉಮಾಪತಿ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕಾಗಿ ಒಟ್ಟಿಗೆ ಕೈ ಜೋಡಿಸುತ್ತಾರಾ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.

ಮುನಿಸು ಮರೆತ ನಿರ್ಮಾಪಕ ಉಮಾಪತಿ!
ಇನ್ನು ನಿರ್ಮಾಪಕ ಉಮಾಪತಿ ದರ್ಶನ್ ಅವರ ಜೊತೆಗೆ ಮತ್ತೆ ಕೈ ಜೋಡಿಸುವ ಬಗ್ಗೆ ಮಾತನಾಡಿದ್ದಾರೆ. ಮತ್ತೆ ದರ್ಶನ್ ಜೊತೆಗೆ ಸೇರಿ ಸಿನಿಮಾ ಮಾಡುತ್ತೀರಾ ಅವರ ಜೊತೆ ಒಂದಾಗುತ್ತೀರಾ ಎನ್ನುವ ಪ್ರಶ್ನೆಗೆ ಅವರು ಫಿಲ್ಮಿಬೀಟ್ ಪ್ರತಿಕ್ರಿಯೆ ನೀಡಿದ್ದಾರೆ. "ಅದೇ ಬೇರೆ, ಇದೇ ಬೇರೆ. ಇದು ಸಿನಿಮಾ, ದರ್ಶನ್ ಸರ್ ಅವರಿಗಾಗಿಯೇ ಈ ಸಿನಿಮಾವನ್ನು ಮಾಡಬೇಕು ಎಂದುಕೊಂಡಿದ್ದೆವು. ಅಲ್ಲದೆ ಈ ಚಿತ್ರ ಅವರಿಗೆ ಸೂಕ್ತ. ಹಾಗಾಗಿ ಈ ಚಿತ್ರದಲ್ಲಿ ಅವರೇ ನಟಿಸಬೇಕು ಎನ್ನುವುದು ನನ್ನ ಬಯಕೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಕೂಡ ಶುರುವಾಗಿವೆ. ಕೆಲವೇ ದಿನಗಳಲ್ಲಿ ಮುಂದಿನ ಹಂತದ ಕೆಲಸ ಶುರುವಾಗುತ್ತೆ."

ದರ್ಶನ್ಗಾಗಿ ಟೈಟಲ್ ಹಕ್ಕು ಖರೀದಿ!
ಮಾತು ಮುಂದುವರೆಸಿದ ಉಮಾಪತಿ "ಈ ಸಿನಿಮಾದಲ್ಲಿ ದರ್ಶನ್ ನಟಿಸುತ್ತಾರೆ ಎಂದಾದ ಮೇಲೆ ಚಿತ್ರಕ್ಕಾಗಿ 'ಸಿಂಧೂರ ಲಕ್ಷ್ಮಣ' ಟೈಟಲ್ ಅವಶ್ಯಕತೆ ಇತ್ತು. ಟೈಟಲ್ ಸಿಗುವುದು ಕಷ್ಟವಾದರೂ ಕೂಡ ಟೈಟಲ್ ಅನ್ನು ಖರೀದಿ ಮಾಡಿದ್ದೇನೆ. ಅಧಿಕ ಮೊತ್ತ ಕೊಟ್ಟು ಟೈಟಲ್ ಹಕ್ಕನ್ನು ಪಡೆದುಕೊಂಡಿದ್ದೇನೆ. ಮೊದಲಿನ ಯೋಜನೆಯಂತೆಯೇ 'ಸಿಂಧೂರ ಲಕ್ಷ್ಮಣ' ಸಿನಿಮಾವನ್ನು ಶುರು ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಇದ್ದೇನೆ." ಎಂದಿದ್ದಾರೆ.
Recommended Video


ದರ್ಶನ್ ನಿರ್ಧಾರ ಏನಾಗಲಿದೆ?
"ಈ ಬಗ್ಗೆ ದರ್ಶನ್ ಸರ್ ಜೊತೆಗೆ ಮಾತನಾಡಬೇಕು. ಅವರ ನಿರ್ಧಾರ ಏನಾಗಿರುತ್ತದೆ ಎನ್ನುವುದರ ಮೇಲೆ ನಮ್ಮ ಮುಂದಿನ ನಿರ್ಧಾರ ನಿಂತಿರುತ್ತದೆ. ಅವರು ಓಕೆ ಎಂದರೆ ಖಂಡಿತವಾಗಿಯೂ ಸಿನಿಮಾ ಆಗುತ್ತೆ. "ಎಂದಿದ್ದಾರೆ ಉಮಾಪತಿ ಶ್ರೀನಿವಾಸ್. ನಿರ್ಮಾಪಕ ಉಮಾಪತಿ 'ಸಿಂಧೂರ ಲಕ್ಷ್ಮಣ' ಚಿತ್ರವನ್ನು ದರ್ಶನ್ಗಾಗಿ ಮಾಡಬೇಕು ಎಂದು ಮತ್ತೆ ಮುಂದೆ ಬಂದಿದ್ದಾರೆ. ಈ ವಿಚಾರದಲ್ಲಿ ದರ್ಶನ್ ಜೊತೆಗೆ ಮತ್ತೆ ಒಂದಾಗಲು ರೆಡಿಯಾಗಿದ್ದಾರೆ. ಆದರೆ ಈ ವಿಚಾರ ದರ್ಶನ್ ಅವರ ಬಳಿ ಹೋದಾಗ ದರ್ಶನ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ? 'ಸಿಂಧೂರ ಲಕ್ಷ್ಮಣ' ಚಿತ್ರದಲ್ಲಿ ನಟಿಸಲು ಒಪ್ಪುತ್ತಾರಾ ಎನ್ನುವುದನ್ನು ನೋಡಬೇಕಿದೆ. ಒಂದು ವೇಳೆ ದರ್ಶನ್ ಓಕೆ ಎಂದರೆ, 'ಸಿಂಧೂರ ಲಕ್ಷ್ಮಣ'ನ ಅವತಾರದಲ್ಲಿ ದರ್ಶನ್ ಅವರನ್ನು ತೆರೆಯ ಮೇಲೆ ನೋಡಬಹುದು. ಇಲ್ಲವಾದರೆ ಈ ಚಿತ್ರಕ್ಕೆ ಬೇರೊಬ್ಬ ನಟನ ಆಯ್ಕೆ ಆದರೂ ಆಗ ಬಹುದು.


Click it and Unblock the Notifications











