ದುಬಾರಿ ಕಾರು ಖರೀದಿಸಿದ ಯಶ್; ಈ ಕಾರಿನ ಬೆಲೆ ಅಬ್ಬಬ್ಬಾ ಇಷ್ಟೊಂದಾ?
ಕೆಜಿಎಫ್ ಚಿತ್ರ ಸರಣಿಯ ಮೂಲಕ ಇಡೀ ದೇಶದಾದ್ಯಂತ ಖ್ಯಾತಿಯನ್ನು ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರವನ್ನು ಯಾರ ಜತೆ ಮಾಡಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಯಶ್ ಅಭಿಮಾನಿಗಳಲ್ಲಿ ಮೂಡಿದೆ.
ಹೀಗೆ ಯಶ್ ಮುಂದಿನ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಯಶ್ ಕಡೆಯಿಂದ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಹರಿದುಬಂದಿದೆ. ಹೌದು, ಯಶ್ ದುಬಾರಿ ಕಾರೊಂದನ್ನು ಖರೀದಿಸಿದ್ದು, ಅದರ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಪ್ಪು ಬಣ್ಣದ ರೇಂಜ್ ರೋವರ್ಸ್ ಸ್ಪೆಷಲ್ ಎಡಿಷನ್ ಅನ್ನು ಯಶ್ ಖರೀಸಿದ್ದು, ತಾವೇ ಚಲಾಯಿಸಿಕೊಂಡು ಬಂದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಪಕ್ಕದಲ್ಲಿಯೇ ರಾಧಿಕಾ ಪಂಡಿತ್ ಕುಳಿತಿದ್ದು, ಮನೆಗೆ ಹೊಸ ಅತಿಥಿ ಆಗಮನವಾಗಿದ್ದರ ಸಂತಸದಲ್ಲಿದ್ದಾರೆ.
ಇನ್ನು ಈ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿಗಳಾಗಿದ್ದು, ಇದರ ಬೆಲೆ ಕೇಳಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಖುಷ್ ಆಗಿದ್ದಾರೆ ಮತ್ತು ಯಶ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದ್ದಾರೆ.
ಒಂದೆಡೆ ಯಶ್ ಹೊಸ ಕಾರು ಖರೀದಿಸಿದ ಸಂತಸದಲ್ಲಿದ್ದರೆ ಮತ್ತೊಂದೆಡೆ ಯಶ್ ಅಭಿಮಾನಿಗಳು ಯಶ್ ತಮ್ಮ ಮುಂದಿನ ಚಿತ್ರವನ್ನು ಯಾವಾಗ, ಯಾವ ನಿರ್ದೇಶಕರ ಜತೆ ಘೋಷಿಸಲಿದ್ದಾರೆ ಎಂದು ಚಿಂತಿಸುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವೆಬ್ ತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿರುವ ಸುದ್ದಿಯೆಂದರೆ ರಾಕಿಂಗ್ ಸ್ಟಾರ್ ತಯಶ್ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಾಯಕ ಹಾಗೂ ನಾಯಕಿಯಾಗಿ ನಟಿಸಲಿರುವ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಲಿದ್ದಾರೆ ಎಂಬುದು.
ಹೌದು, ದಂಗಲ್ ಹಾಗೂ ಚಿಚ್ಚೋರೆ ಸೇರಿದಂತೆ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಲಿರುವ 'ರಾಮಾಯಣ್' ಚಿತ್ರದಲ್ಲಿ ಯಶ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಈ ಸುದ್ದಿಯನ್ನು ಯಶ್ ಆಪ್ತ ವಲಯ ತಳ್ಳಿಹಾಕಿದ್ದು, ಯಶ್ ರಾವಣ ಮಾತ್ರವಲ್ಲ, ರಾವಣನಷ್ಟೇ ಬಲಿಷ್ಟವಾಗಿರುವ ಯಾವುದೇ ಖಳನಾಯಕನ ಪಾತ್ರ ಬಂದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಮೂಲಕ ಯಶ್ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸುವುದಿಲ್ಲ ಎಂದು ಮಾಹಿತಿ ನೀಡಿದೆ.
ಇನ್ನು ಯಶ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಹಲವು ದಿನಗಳಿಂದಲೂ ಸಹ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಕೆಜಿಎಫ್ ಚಾಪ್ಟರ್ 3 ಘೋಷಣೆಯಾಗುತ್ತೆ, ಯಶ್ ತಮ್ಮ ಮುಂದಿನ ಚಿತ್ರವನ್ನು ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರಂತೆ, ತೆಲುಗು ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರಂತೆ, ತಮಿಳಿನ ನಿರ್ದೇಶಕರು ಯಶ್ಗೆ ಸಿನಿಮಾ ಮಾಡ್ತಾರಂತೆ, ಯಶ್ ಬಾಲಿವುಡ್ಗೆ ಹೋಗ್ತಾರಂತೆ ಎಂಬೆಲ್ಲಾ ಸುದ್ದಿಗಳು ದೊಡ್ಡ ಮಟ್ಟದಲ್ಲಿಯೇ ಹರಿದಾಡಿದ್ದವು.
ಅದೇ ರೀತಿಯ ಮತ್ತೊಂದು ವಿಚಾರ ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದೇನೆಂದರೆ ಮಲಯಾಳಂ ಚಿತ್ರರಂಗದ ನಟಿಯೊಬ್ಬರು ಯಶ್ 19ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು. ಹೌದು, ಮಲಯಾಳಂ ನಟಿ ಗೀತು ಮೋಹನ್ದಾಸ್ ಎಂಬುವವರು ಯಶ್ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟಿಯಾಗಲಿ ಅಥವಾ ಯಶ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಕುರಿತು ಸಾಕಷ್ಟು ಮೀಮ್ ಹಾಗೂ ಸುದ್ದಿ ಹರಿದಾಡುತ್ತಿವೆ.


Click it and Unblock the Notifications











