ಶೂಟಿಂಗ್ ನಲ್ಲಿ ಗಾಯಗೊಂಡ 'ರಾಜಾಹುಲಿ' ಯಶ್
ಗಜಕೇಸರಿ ಚಿತ್ರೀಕರಣ ವೇಳೆ 'ರಾಜಾಹುಲಿ' ಯಶ್ ಗಾಯಗೊಂಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಹಾಡಿನ ಚಿತ್ರೀಕರಣ ವೇಳೆ ಅವರು ಕುಸಿದು ಬಿದ್ದ ಪರಿಣಾಮ ಅವರ ಕಾಲಿಗೆ ಗಾಯವಾಗಿದೆ.
'ಗಜಕೇಸರಿ' ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದ್ದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ನೃತ್ಯ ನಿರ್ದೇಶಕ ಹರ್ಷ ಅವರ ಸಂಯೋಜನೆಯಲ್ಲಿ ಹಾಡನ್ನು ಚಿತ್ರೀಕರಿಸಲಾಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಯಶ್ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.
ಕೂಡಲೆ ಅವರನ್ನು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು. ಒಂದು ವಾರ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಮನೆಯಲ್ಲಿ 'ರಾಜಾಹುಲಿ' ರೆಸ್ಟ್ ತೆಗೆದುಕೊಳ್ಳುತ್ತಿದೆ.
ಗಜಕೇಸರಿ ಚಿತ್ರದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದ್ದು ಇನ್ನು ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಇದೊಂದು ಇಂಟ್ರಡಕ್ಷನ್ ಸಾಂಗ್. ಈ ಹಾಡಿಗಾಗಿ ಸಾಕಷ್ಟು ರಿಹರ್ಸಲ್ಲ್ ಮಾಡಿದ್ದರು ಯಶ್. ಇಂದು (ಫೆ.7) ನಡೆದ ಚಿತ್ರೀಕರಣ ವೇಳೆ ಅವರು ಕುಸಿದು ಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದಾರೆ ಎಂದು ಚಿತ್ರತಂಡ ವಿವರ ನೀಡಿದೆ.
ಇನ್ನು ನಿರ್ದೇಶಕ ಯೋಗರಾಜಭಟ್ಟರ ಗರಡಿಯ ಛಾಯಾಗ್ರಾಹಕ ಕೃಷ್ಣ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ವಿಕ್ಟರಿ ಯಂಥ ಹಿಟ್ ಸಿನಿಮಾ ನೀಡಿರುವ ತರುಣ್ ಸುಧೀರ್ ಈ ಚಿತ್ರಕ್ಕೆ ಕೋ-ಡೈರೇಕ್ಟರ್. ಮುಖ್ಯವಾದ ವಿಷಯ ಎಂದರೆ ಈ ಚಿತ್ರಕ್ಕೆ ಯೋಗರಾಜ ಭಟ್ ಅವರು ಕಥೆ ಒದಗಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮೆರಾ ಹಿಂದಿದ್ದರೆ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟರ ಸಾಹಿತ್ಯವಿದೆ. ಕಲೆ ವಿಭಾಗದಲ್ಲಿ ಮೋಹನ್, ರವಿವರ್ಮ ಸಾಹಸ, ಹರಿಕೃಷ್ಣ ಸಂಗೀತವಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












