'ಒಂದು' ಚಾನೆಲ್ ಮೇಲೆ ನಟ ಯಶ್ ಗೆ ಸಿಟ್ಟು: ಐಟಿ ವಿಚಾರಣೆ ಮುಗಿಸಿ ಬಂದ್ಮೇಲೆ ಹೇಳಿದ್ದೇನು.?
Recommended Video

ಕಳೆದ ವಾರವಷ್ಟೇ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡದ ಟಾಪ್ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಸತತ ಮೂರು ದಿನಗಳ ಕಾಲ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸಾಲದಕ್ಕೆ, ಯಶ್ ಪತ್ನಿ ರಾಧಿಕಾ ಪಂಡಿತ್ ಮನೆಯಲ್ಲೂ ಶೋಧ ನಡೆದಿತ್ತು. ಇಷ್ಟೆಲ್ಲಾ ಆದ್ಮೇಲೆ ಇಂದು ವಿಚಾರಣೆಗಾಗಿ ತಾಯಿ ಪುಷ್ಟ ಜೊತೆಗೆ ಯಶ್ ಐಟಿ ಕಛೇರಿಗೆ ಆಗಮಿಸಿದ್ದರು.
ವಿಚಾರಣೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲಿ ಯಶ್ ಕೊಂಚ ಬೇಸರಗೊಂಡಿದ್ದರು. ಒಂದು ಚಾನೆಲ್ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ''ಒಂದು ಚಾನೆಲ್ ಮಾತ್ರ ಊಹಾಪೋಹ ಹಬ್ಬಿಸುತ್ತಿದೆ. ಊಹಾಪೋಹಗಳಿಗೆಲ್ಲಾ ನಾನು ಉತ್ತರ ಕೊಡಲ್ಲ'' ಅಂತ ಯಶ್ ಹೇಳಿದರು. ಮುಂದೆ ಓದಿರಿ...

ಒಂದು ಚಾನೆಲ್ ಮಾತ್ರ ಊಹಾಪೋಹ ಹಬ್ಬಿಸುತ್ತಿದೆ
''ಒಂದು ಮಾಧ್ಯಮ, ಒಂದು ಪರ್ಟಿಕ್ಯುಲರ್ ಚಾನೆಲ್ ಮಾತ್ರ ಊಹಾಪೋಹ ಹಬ್ಬಿಸುತ್ತಿದೆ. ಅದು ಯಾವುದು ಅಂತ ಜನರಿಗೆ ಗೊತ್ತು. ಮಿಕ್ಕಿದವರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ'' ಎಂದು ಐಟಿ ವಿಚಾರಣೆ ನಡೆದ ಬಳಿಕ ಯಶ್ ಹೇಳಿದರು. ''ಯಾವ ಮಾಧ್ಯಮ, ಲೋಗೋ ಮುಟ್ಟಿ ಹೇಳಿ...'' ಎಂದು ಮಾಧ್ಯಮದವರು ಕೇಳಿದಾಗ, ''ಅದು ಜನರಿಗೆ ಗೊತ್ತಾಗುತ್ತೆ'' ಅಂತ ಯಶ್ ಹೇಳಿದರು.

ಸುಳ್ಳು ಸುದ್ದಿ ಯಾಕೆ.?
''ಯಶ್ ಮನೆಯಲ್ಲಿ ಎಷ್ಟು ಕೋಟಿ ಸಿಕ್ಕಿದೆ ಅಂತ ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರಾ.? ಮತ್ತೆ ಯಾಕೆ ಬರಬೇಕು ಅದು.? ನಿನ್ನೆ ನ್ಯೂಸ್ ನಲ್ಲೂ ಅಷ್ಟೇ... ದಯವಿಟ್ಟು ಅರ್ಥ ಮಾಡಿಕೊಳ್ಳಿ.. ಸಮಾಜದಲ್ಲಿ ಮಾಧ್ಯಮಗಳ ಕಣ್ತಪ್ಪಿಸಿ ಏನೂ ಮಾಡಲು ಸಾಧ್ಯವಿಲ್ಲ'' - ಯಶ್, ನಟ

ವೈಯುಕ್ತಿಕ ದ್ವೇಷ ಇಲ್ಲ
''ವೈಯುಕ್ತಿಕ ದ್ವೇಷಗಳನ್ನು ಇಟ್ಟುಕೊಳ್ಳಬಾರದು. ನನಗೆ ಯಾರ ಮೇಲೂ ವೈಯುಕ್ತಿಕ ದ್ವೇಷ ಇಲ್ಲ. ಯಶ್ ವಿಚಾರಣೆಗೆ ಬರಲಿಲ್ಲ, ಶೂಟಿಂಗ್ ನಲ್ಲಿದ್ದಾರೆ ಅಂತೆಲ್ಲಾ ಸುದ್ದಿ ಬಂತು. ನಾನು ಶೂಟಿಂಗ್ ಮಾಡ್ತಿಲ್ಲ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆಲ್ಲಾ ಸುಳ್ಳು ಹೇಳಬಾರದು'' - ಯಶ್, ನಟ

ಊಹಾಪೋಹಗಳಿಗೆ ಉತ್ತರ ಕೊಡಲ್ಲ
''ಆದಾಯದ ಬಗ್ಗೆ ಪ್ರಶ್ನೆ ಮಾಡಿದರು. ಅದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಊಹಾಪೋಹಗಳಿಗೆಲ್ಲಾ ನಾನು ಉತ್ತರ ಕೊಡಲ್ಲ'' - ಯಶ್, ನಟ

ಸುಮ್ಮನೆ ಇರಲ್ಲ.!
''ನನಗೆ 15-16 ಕೋಟಿ ಸಾಲ ಇದೆ. ಟ್ಯಾಕ್ಸ್ ಕಟ್ಟದೇ ಇದ್ದರೆ, ಇಷ್ಟೊಂದು ಲೋನ್ ಕೊಡ್ತಾರಾ.? ದಯವಿಟ್ಟು ಇದನ್ನ ಯೋಚನೆ ಮಾಡಿ. ಊಹಾಪೋಹಗಳನ್ನು ಹಬ್ಬಿಸಬೇಡಿ. ಸಾರ್ವಜನಿಕ ವ್ಯಕ್ತಿ ಎಂದತಕ್ಷಣ ತೇಜೋವಧೆ ಮಾಡಿಕೊಂಡು ಇದ್ದರೆ, ನೋಡಿಕೊಂಡು ನಾನು ಸುಮ್ಮನೆ ಇರಲ್ಲ'' ಎಂದು ಗುಡುಗಿದರು ನಟ ಯಶ್


Click it and Unblock the Notifications











