ದರ್ಶನ್ ಬಿಡುಗಡೆ ವಿಶೇಷ ಪೂಜೆ: ಕಿಚ್ಚ, ಯಶ್, ಶಿವಣ್ಣಗೂ ಆಹ್ವಾನ ಸಿಕ್ಕಿತೇ?
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಹೆಚ್ಚು ಕಡಿಮೆ ಒಂದೂವರೆ ತಿಂಗಳಾಗುತ್ತಿದೆ. ಇನ್ನೂ ಕೆಲವು ದಿನಗಳಂತೂ ದರ್ಶನ್ ಜೈಲಿನಿಂದ ಹೊರಬರುವುದು ಅನುಮಾನ. ಇನ್ನೊಂದು ಕಡೆ ದಿನದಿಂದ ದಿನಕ್ಕೆ ದರ್ಶನ್ ವಿರುದ್ಧ ಸಾಕ್ಷಿಗಳು ಬಲವಾಗಿವೆ ಅನ್ನೋ ಮಾಹಿತಿ ಕೇಳಿಬರುತ್ತಿದೆ. ರೇಣುಕಾಸ್ವಾಮಿ ಹತ್ಯೆ ನಡೆದ ಸಂದರ್ಭದಲ್ಲಿ ದರ್ಶನ್ ಧರಿಸಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸುವುದು ಬಾಕಿಯಿದೆ. ಅಲ್ಲಿವರೆಗೂ ದರ್ಶನ್ ಜೈಲಿನಿಂದ ಬಿಡುಗಡೆಯಾಗುವುದು ಡೌಟು. ಪೊಲೀಸರು ಚಾರ್ಜ್ ಶೀಟ್ನಲ್ಲಿ ಮಾಡಿರುವ ಆರೋಪಗಳನ್ನು ಮುಂದಿಟ್ಟುಕೊಂಡು ದರ್ಶನ್ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಲು ಮುಂದಾಗುತ್ತಾರೆ.

ಇನ್ನೊಂದು ಕಡೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ದರ್ಶನ್ ಬಿಡುಗಡೆಯಾಗಿ ಎದುರು ನೋಡುತ್ತಿದ್ದಾರೆ. ಮತ್ತೊಂದು ಕಡೆ ದರ್ಶನ್ ಬಿಡುಗಡೆಗಾಗಿ ಸ್ಯಾಂಡಲ್ವುಡ್ ಕಲಾವಿದರು ದೇವರ ಮೊರೆ ಹೋಗುವುದಕ್ಕೆ ನಿರ್ಧರಿಸಿದ್ದಾರಂತೆ. ದರ್ಶನ್ಗೆ ಆಪ್ತರಾಗಿರುವ ರಾಕ್ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಈ ಪೂಜೆಯನ್ನು ಆಯೋಜಿಸಿದ್ದು, ಕಲಾವಿದರಿಗೆ ಆಹ್ವಾನ ನೀಡಲಾಗಿದೆ.
ದರ್ಶನ್ ಬಿಡುಗಡೆಗಾಗಿ ಮಾಡುತ್ತಿರುವ ಈ ವಿಶೇಷ ಪೂಜೆಯನ್ನು ಆಗಸ್ಟ್ 14ರಂದು ಜರುಗುತ್ತಿದೆ. ಕಲಾವಿದರ ಸಂಘದಲ್ಲಿ ಈ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದಾರೆ ಎಂದು ವರದಿಗಳಾಗಿವೆ. ಹೀಗಾಗಿ ಕನ್ನಡದ ಎಲ್ಲಾ ಕಲಾವಿದರಿಗೂ ಈ ಪೂಜೆಗೆ ಆಹ್ವಾನವನ್ನು ನೀಡಲಾಗಿದೆ ಅನ್ನೋ ಮಾಹಿತಿ ಸ್ಯಾಂಡಲ್ವುಡ್ನಲ್ಲಿ ಹರಿದಾಡುತ್ತಿದೆ. ಸದ್ಯ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ನೇತೃತ್ವದಲ್ಲಿ ಪೂರ್ಣಾಹುತಿ ಹೋಮಕ್ಕೆ ಸಿದ್ದತೆಗಳು ನಡೆಯುತ್ತಿವೆ.

ಈಗಾಗಲೇ ಚಿತ್ರರಂಗದ ಗಣ್ಯರಿಗೆ ಆಹ್ವಾನವನ್ನು ನೀಡಲಾಗಿದೆ. ಪ್ರಮುಖವಾಗಿ ಶಿವಣ್ಣ, ಕಿಚ್ಚ ಸುದೀಪ್, ಉಪೇಂದ್ರ, ಯಶ್ಗೂ ಆಹ್ವಾನ ನೀಡಲಾಗಿದೆಯಂತೆ. ಆದರೆ, ದರ್ಶನ್ ಬಿಡುಗಡೆಗಾಗಿ ಮಾಡುತ್ತಿರುವ ಈ ಯಾಗದಲ್ಲಿ ಕನ್ನಡದ ಈ ಸೂಪರ್ಸ್ಟಾರ್ಗಳು ಬರುತ್ತಾರಾ? ಅನ್ನೋ ಪ್ರಶ್ನೆ ಎದುರಾಗಿದೆ. ಬಹುತೇಕ ಹಿರಿಯ ಹಾಗೂ ಕಿರಿಯ ಕಲಾವಿದರು ಈ ಯಾಗದಲ್ಲಿ ಭಾಗವಹಿಸುವ ಸಾಧ್ಯತೆಗಳು ಇವೆ.
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಕಷ್ಟಕ್ಕೆ ಸಿಲುಕಿರುವುದಂತೂ ಸತ್ಯ. ಈ ಕಾರಣಕ್ಕೆ ಈಗಾಗಲೇ ದರ್ಶನ್ ಅಭಿಮಾನಿಗಳು ಕೂಡ ರಾಜ್ಯದ ಮೂಲೆ ಮೂಲೆಯಲ್ಲಿ ದೇವರ ಮುಂದೆ ದರ್ಶನ್ ಫೋಟೋ ಇಟ್ಟು ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ತಮ್ಮ ನೆಚ್ಚಿನ ಅಭಿಮಾನಿ ಆದಷ್ಟು ಬೇಗ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೂಡ ಇತ್ತೀಚೆಗೆ ದೇವರ ಮೊರೆ ಹೋಗಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ದರ್ಶನ್ ಪತ್ನಿ ನವ ಚಂಡಿಕಾ ಯಾಗ ಮಾಡಿದ್ದಾರೆ. ದರ್ಶನ್ ಭಾವ, ಸಹೋದರ ದಿನಕರ್ ತೂಗುದೀಪ ಸೇರಿದಂತೆ ಕುಟುಂಬಸ್ಥರು ಸಂಕಷ್ಟದಲ್ಲಿ ಬಹುಬೇಗನೇ ಬಿಡುಗಡೆಯಾಗಿ ಹೊರ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.


Click it and Unblock the Notifications











