ಸಿನಿಮಾದಲ್ಲಿಯೂ ನೈಜ ರೌಡಿಯಾಗಿ ಕಾಣಿಸಿಕೊಂಡಿದ್ದ ಕೊರಂಗು ಕೃಷ್ಣ ಸಾವು
ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಮತ್ತು ಪ್ರೇಮ ಅಭಿನಯದ 'ಓಂ' ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದ ರೌಡಿ ಕೊರಂಗು ಕೃಷ್ಣ ಮೃತಪಟ್ಟಿದ್ದಾನೆ. ಕರಳುಬೇನೆಯಿಂದ ಬಳಲುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Recommended Video
ಕೆಲವು ವರ್ಷಗಳ ಹಿಂದೆ ಕೃಷ್ಣನನ್ನು ಬೆಂಗಳೂರಿನಿಂದ ಗಡಿಪಾರು ಮಾಡಲಾಗಿತ್ತು. ಬಳಿಕ ಆತ ಚಿತ್ತೂರಿಗೆ ತೆರಳಿ ನೆಲಸಿದ್ದ. ಅನಾರೋಗ್ಯಕ್ಕೆ ತುತ್ತಾಗಿದ್ದ ಆತನನ್ನು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 1990ರ ದಶಕದಿಂದಲೂ ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿದ್ದ ಕೊರಂಗು ಕೃಷ್ಣ, ಅನೇಕ ಕೊಲೆ, ಸುಲಿಗೆ, ಜೀವ ಬೆದರಿಕೆ, ಹಲ್ಲೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಹೆಬ್ಬೆಟ್ಟು ಮಂಜನ ಗ್ಯಾಂಗ್ ದಾಳಿ ನಡೆಸಿತ್ತು. ಆಗ ಅಪಾಯದಿಂದ ಪಾರಾಗಿದ್ದ. ಮುಂದೆ ಓದಿ...

ಓಂ ಚಿತ್ರದಲ್ಲಿ ನಿಜ ರೌಡಿಗಳು
ಉಪೇಂದ್ರ ನಿರ್ದೇಶನದ 'ಓಂ' ಚಿತ್ರದಲ್ಲಿ ಅನೇಕ ರೌಡಿಗಳು ಕಾಣಿಸಿಕೊಂಡಿದ್ದರು. ರೌಡಿಸಂ ಕಥೆಯನ್ನು ಹೇಳಿದ್ದ ಉಪೇಂದ್ರ, ಇದರಲ್ಲಿ ಕೆಲವು ಪಾತ್ರಗಳಲ್ಲಿ ನಿಜವಾದ ರೌಡಿಗಳನ್ನೇ ಬಳಸಿಕೊಂಡಿದ್ದರು. ಶಿವರಾಜ್ ಕುಮಾರ್ ಮತ್ತು ಪ್ರೇಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗಷ್ಟೇ ಈ ಚಿತ್ರ ಬಿಡುಗಡೆಯಾಗಿ 25 ವರ್ಷ ತುಂಬಿದ ಸಂಭ್ರಮ ಆಚರಿಸಲಾಗಿತ್ತು.

ರೌಡಿಗಳ ದಂಡು
'ಓಂ' ಚಿತ್ರದಲ್ಲಿ ಕೊರಂಗು ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್, ಜೇಡರಹಳ್ಳಿ ಕೃಷ್ಣಪ್ಪ ಮುಂತಾದ ರಿಯಲ್ ರೌಡಿಗಳ ಜತೆಗೆ ನಟಿಸಿದ್ದ. ಈ ಚಿತ್ರದಲ್ಲಿ ನಟಿಸಿದ್ದ ಅನೇಕ ನಿಜ ರೌಡಿಗಳ ಜೀವನ ಅಂತ್ಯವಾಗಿತ್ತು. ಅವರ ಸಾಲಿಗೆ ಕೊರಂಗು ಕೃಷ್ಣ ಕೂಡ ಸೇರಿದ್ದಾನೆ.

ರಾಜ್ ಕುಮಾರ್ ಅವರಿಗೆ ಹೆದರಿದ್ದರು
ಬೆಂಗಳೂರನ್ನೇ ನಡುಗಿಸಿದ್ದ ರೌಡಿಗಳನ್ನು ಚಿತ್ರದಲ್ಲಿ ತೋರಿಸುವುದು ಸುಲಭವಾಗಿರಲಿಲ್ಲ. ಅವರು ಅಲ್ಲಿಯೂ ಗಲಾಟೆ ಮಾಡಿದರೆ ಎಂಬ ಭಯ ಎಲ್ಲರಲ್ಲಿತ್ತು. ಆದರೆ ನಿಜವಾದ ರೌಡಿಗಳೂ ಒಂದು ಹೆಸರಿಗೆ ಹೆದರಿದ್ದರು. ಅದು ಡಾ. ರಾಜ್ ಕುಮಾರ್. ರಾಜ್ ಕುಮಾರ್ ಸೆಟ್ಗೆ ಚಿತ್ರೀಕರಣ ವೀಕ್ಷಿಸಲು ಬರುತ್ತಾರೆ ಎಂದಾಗ ಅವರು ತಮ್ಮ ನಟನೆ ಕಂಡು ಏನೆನ್ನುತ್ತಾರೋ ಎಂದು ಭಯದಿಂದ ನಿಲ್ಲುತ್ತಿದ್ದರಂತೆ.

ಬದಲಾಗದ ರೌಡಿಗಳು
ಭೂಗತ ಲೋಕದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಸಿನಿಮಾದಲ್ಲಿಯೂ ನಟಿಸಿದ್ದೆ ಎಂದು ಹೇಳಿಕೊಳ್ಳುವ ಅವಕಾಶವನ್ನು 'ಓಂ' ಚಿತ್ರ ನೀಡಿತ್ತು. ಈ ಚಿತ್ರದಲ್ಲಿ ರೌಡಿಸಂ ಒಳ್ಳೆಯದಲ್ಲ. ಅದನ್ನು ಬಿಟ್ಟು ಒಳ್ಳೆಯ ಬದುಕು ಸಾಗಿಸಬಹುದು ಎಂಬ ಸಂದೇಶವಿತ್ತು. ಅದನ್ನು ನೋಡಿಯೂ ಆ ಚಿತ್ರದಲ್ಲಿ ನಟಿಸಿದ್ದ ರೌಡಿಗಳು ಬದಲಾಗಿರಲಿಲ್ಲ. ಅದಕ್ಕೆ ಬಹುಶಃ ಭೂಗತ ಜಗತ್ತು ಅವಕಾಶವನ್ನೂ ನೀಡಿರಲಿಲ್ಲ.


Click it and Unblock the Notifications











