ಡಾಲಿ - ಧನ್ಯತಾ ಮದುವೆಗೆ ಬಂದಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ; ಫುಲ್ ಟ್ರೋಲ್
ನಟ ಧನಂಜಯ್ ಹಾಗೂ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಅಭಿಮಾನಿಗಳು ಈ ವೈಭವೋಪೇತ ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಿದ್ದಾರೆ. ಸುದೀಪ್, ರಿಷಬ್, ಯಶ್, ರಕ್ಷಿತ್ ಶೆಟ್ಟಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಚ್ಚರಿ ಅಂದರೆ ರೌಡಿ ಶೀಟರ್ ಸೈಲೆಂಟ್ ಸುನೀಲ ಕೂಡ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾನೆ.
ಎರಡು ತಿಂಗಳ ಕಾಲ ಧನಂಜಯ್ ಮದುವೆ ಆಮಂತ್ರಣ ನೀಡಿ ಅತಿಥಿಗಳನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಶಿವರಾಜ್ಕುಮಾರ್, ಯಶ್, ಸುದೀಪ್, ರಮ್ಯಾ, ರಕ್ಷಿತಾ ಹೀಗೆ ಸಾಕಷ್ಟು ಗಣ್ಯರು, ತಾರೆಯರನ್ನು ಮದುವೆಗೆ ಕರೆದಿದ್ದರು. ತಮ್ಮ ಅಭಿಮಾನಿಗಳನ್ನು ಕೂಡ ಮದುವೆಗೆ ಬರುವಂತೆ ಮನವಿ ಮಾಡಿದ್ದರು.

ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಅತಿಥಿಗಳು, ಅಭಿಮಾನಿಗಳು ವೇದಿಕೆಗೆ ಬರಲು, ಮರಳಿ ತೆರಳಲು, ಊಟಕ್ಕೆ ಕೂರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 10 ಸಾವಿರಕ್ಕೂ ಅಧಿಕ ಮಂದಿ ಧನು-ಧನ್ಯಾ ಮದುವೆ ಸಮಾರಂಭದಲ್ಲಿ ಭಾಗಿ ಆಗಿ ಶುಭ ಕೋರಿದ್ದಾರೆ.
ಶುಕ್ರವಾರದಿಂದಲೇ ಧನಂಜಯ್-ಧನ್ಯಾ ಮದುವೆ ಶಾಸ್ತ್ರಗಳು ಕಳೆಕಟ್ಟಿತ್ತು. ಶನಿವಾರ ಗಂಗೆ ತರೋ ಶಾಸ್ತ್ರ, ತಂದೆ ತಾಯಿಯರ ವಾಗ್ದಾನ ಶಾಸ್ತ್ರ, ವಧು ವರರ ನಿರೀಕ್ಷಣೆ, ವಧು ಧನ್ಯತಾ ಗೌರಿ ಪೂಜೆ ಮಾಡಿದರು. ಬಳೆ ಶಾಸ್ತ್ರ, ವಧು ವರರ ಪ್ರಥಮ ಶಾಸ್ತ್ರ ಹೀಗೆ ಹಲವು ಶಾಸ್ತ್ರಗಳು ನಡೆಯಿತು. ಅದಕ್ಕೂ ಮುನ್ ಧನಂಜಯ್ ಹುಟ್ಟೂರು ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೆಂಡ ತುಳಿದಿದ್ದರು. ಬಳಿಕ ಮನೆಯಲ್ಲಿ ಪೂಜೆ ಸಲ್ಲಿಸಿ ಮದುವೆ ಶಾಸ್ತ್ರಗಳನ್ನು ಆರಂಭಿಸಲಾಗಿತ್ತು.
ಮದುವೆಗಾಗಿ ವಸ್ತು ಪ್ರದರ್ಶನ ಮೈದಾನದಲ್ಲಿ ಎರಡು ಬೇರೆ ಬೇರೆ ಸೆಟ್ ಹಾಕಲಾಗಿತ್ತು. ಅರುಣ್ ಸಾಗರ್ ನೇತೃತ್ವದಲ್ಲಿ ವೇದಿಕೆ ಸಿದ್ಧವಾಗಿತ್ತು. ಶನಿವಾರ ಸಂಜೆ 6 ಗಂಟೆಗೆ ಸರಿಯಾಗಿ ಧನು-ಧನ್ಯತಾ ಮದುವೆ ಆರತಕ್ಷತೆ ಶುರುವಾಯಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾದಿಯಾಗಿ ಅನೇಕ ಗಣ್ಯರು ಆರತಕ್ಷತೆಗೆ ಕಾರ್ಯಕ್ರಮಕ್ಕೆ ಬಂದಿದ್ದರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಉಪೇಂದ್ರ-ಪ್ರಿಯಾಂ ದಂಪತಿ, ಧ್ರುವ-ಪ್ರೇರಣಾ, ಪ್ರೇಮ್- ರಕ್ಷಿತಾ, ಅವಿನಾಶ್- ಮಾಳವಿಕಾ ದಂಪತಿ ಸೇರಿ ಸಾಕಷ್ಟು ಜನ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ್ದರು.
ಇನ್ನು ಆರತಕ್ಷತೆ ಕಾರ್ಯಕ್ರಮಕ್ಕೆ ರೌಡಿ ಸೈಲೆಂಟ್ ಸುನೀಲ ಕೂಡ ಬಂದು ಧನಂಜಯ್ ಜೊತೆ ಆತ್ಮೀಯವಾಗಿ ಮಾತನಾಡಿ ಶುಭ ಕೋರಿರುವುದನ್ನು ನೋಡಬಹುದು. ಸದ್ಯ ಆ ವೀಡಿಯೋ ವೈರಲ್ ಆಗುತ್ತಿದೆ. ಕೆಲವರು ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ರೌಡಿಗಳನ್ನು ಕೂಡ ಧನಂಜಯ್ ತಮ್ಮ ಮದುವೆಗೆ ಆಹ್ವಾನಿಸಿದ್ರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಧನಂಜಯ್ ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಇತ್ತು ಏನು ಇದೆಲ್ಲಾ? ಎಂದು ಕೆಲವರು ಕೇಳುತ್ತಿದ್ದಾರೆ.
ಈ ಹಿಂದೆ ಚಾಮರಾಜಪೇಟೆಯಲ್ಲಿ ನಡೆದಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರ ಜೊತೆ ರೌಡಿ ಸೈಲೆಂಟ್ ಸುನೀಲ ವೇದಿಕೆ ಹಂಚಿಕೊಂಡಿದ್ದು ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಸಾಕಷ್ಟು ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿತ್ತು. ವಿಚಾರಣೆ ವೇಳೆ ಪೊಲೀಸರು ಎಷ್ಟೇ ಪ್ರಶ್ನೆ ಕೇಳಿದರು ಒಂದೇ ಪದದಲ್ಲಿ ಉತ್ತರ ಹೇಳಿ ಸುಮ್ಮನಾಗುತ್ತಿದ್ದಂತೆ. ಅದಕ್ಕೆ ಈತನಿಗೆ ಸೈಲೆಂಟ್ ಸುನೀಲ ಎಂದು ಹೆಸರು ಬಂತು ಎನ್ನಲಾಗುತ್ತದೆ.
ರಾಜಕೀಯ ಪ್ರವೇಶಕ್ಕೂ ಸೈಲೆಂಟ್ ಸುನೀಲ ಪ್ರಯತ್ನಿಸುತ್ತಿರುತ್ತಾನೆ. ಈ ಹಿಂದೆ 'ಸೈಲೆಂಟ್ ಸುನೀಲ' ಎಂಬ ಸಿನಿಮಾ ಸಹ ಘೋಷಣೆ ಆಗಿತ್ತು. ದುನಿಯಾ ಸೂರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಸ್ವತಃ ಸೈಲೆಂಟ್ ಸುನೀಲ ಈ ಚಿತ್ರದಲ್ಲಿ ನಟಿಸುವುದಾಗಿ ಹೇಳಲಾಗಿತ್ತು.


Click it and Unblock the Notifications











