"ಗಂಡ ಹೆಂಡತಿ ಮಧ್ಯೆ ಮನಸ್ತಾಪ ಇರತ್ತೆ, ಹಾಗೆ ನನ್ನ ದರ್ಶನ್ ಮಧ್ಯೆಯೂ"; ದಿನಕರ್
ನಟ ದರ್ಶನ್ ಹಾಗೂ ಸಹೋದರ ದಿನಕರ್ ಚಿತ್ರರಂಗದಲ್ಲೇ ತಮ್ಮದೇ ಸ್ವಂತ ಪರಿಶ್ರಮದಿಂದ ಬೆಳೆದಿದ್ದಾರೆ. ದಿನಕರ್ ಕೂಡ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ. ಇದೀಗ 'ರಾಯಲ್' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ದರ್ಶನ್ ಹಾಗೂ ದಿನಕರ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿ ಇತ್ತೀಚೆಗೆ ಕೇಳಿ ಬಂದಿತ್ತು. ಈ ಬಗ್ಗೆ ದಿನಕರ್ ಮಾತನಾಡಿದ್ದಾರೆ.
ವಿರಾಟ್ ಹಾಗೂ ಸಂಜನಾ ಆನಂದ್ ನಟನೆಯ 'ರಾಯಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ದಿನಕರ್ ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಆರೋಪಿಯಾಗಿ ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೀತು. ಈ ವೇಳೆ ಸಹೋದರ ದಿನಕರ್ ಇನ್ನು ಬಾಡಿಗೆ ಮನೆಯಲ್ಲಿ ಇದ್ದಾರೆ ಎನ್ನುವ ಮಾತುಗಳು ಕೇಳಿಬಂತು. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಆ ಬಗ್ಗೆ ದಿನಕರ್ ಮಾತನಾಡಿದ್ದರು. ನಾನು ಸ್ವಾಭಿಮಾನಿ. ನಾನು ಯಾಕೆ ದರ್ಶನ್ ಬಳಿ ಕೇಳಬೇಕು, ಕೇಳಿದರೆ ಒಂದು ಕ್ಷಣ ಕೂಡ ಯೋಚಿಸದೇ ಮನೆ, ಆಸ್ತಿ ಕೊಡಿಸುತ್ತಾನೆ ಎಂದು ದಿನಕರ್ ಹೇಳಿದ್ದರು.
ದರ್ಶನ್ ಹಾಗೂ ದಿನಕರ್ ನಡುವೆ ಎಲ್ಲವೂ ಸರಿಯಿಲ್ಲ. ಅದಕ್ಕೆ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಲು ಹಿಂದು ಮುಂದು ನೋಡುತ್ತಿದ್ದಾರೆ ಎನ್ನುವ ಮಾತುಗಳು ಆಗ ಕೇಳಿಬಂದಿತ್ತು. ಅದಕ್ಕೆಲ್ಲಾ 'ರಾಯಲ್' ಸುದ್ದಿಗೋಷ್ಠಿಯಲ್ಲಿ ದಿನಕರ್ ಸ್ಪಷ್ಟನೆ ನೀಡಿದ್ದಾರೆ. ಗಂಡ- ಹೆಂಡತಿ, ಅಪ್ಪ- ಮಗ ಹೀಗೆ ಎಲ್ಲರ ನಡುವೆ ಸಣ್ಣಪುಟ್ಟ ಮಾತು ಬರುವುದು, ಮನಸ್ತಾಪ ಆಗುವುದು ಇದ್ದಿದ್ದೇ. ಅದೇ ರೀತಿ ನಮ್ಮ ನಡುವೆಯೂ ಆಗುತ್ತಿರುತ್ತದೆ ಎಂದಿದ್ದಾರೆ.
ಅಣ್ಣ-ತಮ್ಮ ಬೇರೆ ಆಗಿದ್ದರು ಅಂತ ಯಾರು ಹೇಳಿದರು ನಿಮಗೆ? ಎಂದು ದಿನಕರ್ ಮಾಧ್ಯಮಗಳಿಗೆ ಮರುಪ್ರಶ್ನೆ ಹಾಕಿದ್ದಾರೆ. "ಒಂದು ಫ್ಯಾಮಿಲಿ ಎಂದಾಗ ಸಣ್ಣ ಪುಟ್ಟ ಮಾತು ಬಂದು ಹೋಗುತ್ತದೆ. ಫ್ಯಾಮಿಲಿ ಎಂದಮೇಲೆ ಸಹಜ. ಗಂಡ-ಹೆಂಡತಿ, ಅಪ್ಪ-ಮಗನ ನಡುವೆ ಹೀಗೆ ಆಗುತ್ತಿರುತ್ತದೆ. ದರ್ಶನ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ನಾನು ಜೊತೆಗೆ ಹೋದರೆ ಮಾತ್ರ ನಿಮಗೆ ಕಾಣಿಸುತ್ತದೆ. ಮನೆಯಲ್ಲಿ ನಾನು ದರ್ಶನ್ ಜೊತೆ ಇದ್ದಾಗ ನಿಮಗೆ ಗೊತ್ತಾಗಲ್ಲ" ಎಂದು ದಿನಕರ್ ಹೇಳಿದ್ದಾರೆ.
"ಒಂದೂ ಒಂದೂವರೆ ತಿಂಗಳು ಏನಾದರೂ ಸಣ್ಣಪುಟ್ಟ ಜಗಳ ಆಗಿದ್ದಾಗ ಮಾತು ಬಿಟ್ಟಿರುತ್ತೇವೆ ಅಷ್ಟೇ. ಬಟ್ ಟಚ್ ಅಲ್ಲಿ ಇರ್ತೀವಿ. ಫೋನ್ ಅಲ್ಲಿ ಮಾತನಾಡ್ತೀವಿ. ನಮ್ಮ ಅತ್ತಿಗೆ ಜೊತೆ ಫೋನ್ ಅಲ್ಲಿ ಮಾತಾಡ್ತೀನಿ ಅದೆಲ್ಲಾ ಇದ್ದೇ ಇರುತ್ತದೆ" ಎಂದು ದಿನಕರ್ ಹೇಳಿದ್ದಾರೆ. 'ರಾಯಲ್' ಚಿತ್ರದಲ್ಲಿ ದರ್ಶನ್ ಸಾಥ್ ಕೊಟ್ಟರೆ ಖುಷಿ. ಆ ಬಗ್ಗೆ ಮಾತನಾಡಿಲ್ಲ. ಬೆಂಬಲ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ದಿನಕರ್ ಹೇಳಿದ್ದಾರೆ.
ದರ್ಶನ್ ಚಿಕಿತ್ಸೆಗಾಗಿ ಮೈಸೂರಿಗೆ ತೆರಳಿದ್ದು ಯಾಕೆ ಎನ್ನುವುದನ್ನು ಕೂಡ ದಿನಕರ್ ತಿಳಿಸಿದ್ದಾರೆ. "ಬೆನ್ನು ನೋವು ಇದೆ. ಟ್ರೀಟ್ಮೆಂಟ್ ತಗೋಬೇಕು. ಮೈಸೂರಿನಲ್ಲಿ ಚಿಕಿತ್ಸೆ ಯಾಕಂದ್ರೆ, ಅಲ್ಲಿನ ಡಾ. ಅಜಯ್ ಹೆಗ್ಡೆ ಒಂದು ರೀತಿಯಲ್ಲಿ ಫ್ಯಾಮಿಲಿ ಡಾಕ್ಟರ್ ತರ. ದರ್ಶನ್ ಎರಡೂ ಕೈ ಸರ್ಜರಿ ಮಾಡಿದ್ದು ಅವರೇ. ಹಾಗಾಗಿ ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾನೆ" ಎಂದು ದಿನಕರ್ ಮಾಹಿತಿ ನೀಡಿದ್ದಾರೆ.
2026ರಲ್ಲಿ ದರ್ಶನ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡುವುದು ಖಚಿತ ಎಂದು ದಿನಕರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಸದ್ಯ ಎರಡು ಸಿನಿಮಾಗಳಲ್ಲಿ ದರ್ಶನ್ ನಟಿಸಬೇಕಿದೆ. ಬಳಿಕ ನನ್ನ ನಿರ್ದೇಶನದ ಸಿನಿಮಾ ಶುರುವಾಗುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications











