ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಎಂಟ್ರಿ..!
ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಕನ್ನಡದ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಎಂಬ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಬಂದ ರಿಷಬ್ ಇವತ್ತು ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಸಿದ್ಧಿಗೆ ಕಾರಣವಾದ ಕಾಂತಾರ ಚಿತ್ರದ ಕನವರಿಕೆಯಲ್ಲಿ ಇದ್ದಾರೆ. ಕಾಂತಾರ ಚಿತ್ರದ ಮೊದಲ ಭಾಗಕ್ಕೆ ತನು-ಮನವನ್ನು ಅರ್ಪಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುತ್ತಿದ್ದಾರೆ. ನಿರೀಕ್ಷೆಯ ಮಟ್ಟವನ್ನು ತಲುಪಬೇಕೆಂದು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಹೆಗಲಿಗೆ ಹೆಗಲು ಕೊಟ್ಟು ಅನೇಕರು ದುಡಿಯುತ್ತಿದ್ದಾರೆ.
ಇನ್ನೂ.. ಈ ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಸಕಲ ಸೌಲಭ್ಯಗಳನ್ನು ಪೂರೈಸುತ್ತಿದೆ. ಹಣದ ಬಗ್ಗೆ ಯೋಚನೆ ಮಾಡದೇ ನೀರಿನಂತೆ ಕೋಟಿ ಹಣ ಖರ್ಚು ಮಾಡುತ್ತಿದೆ. ಚಿತ್ರಕ್ಕೋಸ್ಕರ ರಿಷಬ್ ಯಾರ ಕಡೆಯೆಲ್ಲ ಬೆರಳು ತೋರಿಸುತ್ತಿದ್ದಾರೋ ಅವರನ್ನೆಲ್ಲ ಹೊಂಬಾಳೆ ಸಂಸ್ಥೆ ಕರೆದುಕೊಂಡು ಬಂದು ಕುಂದಾಪುರದಲ್ಲಿ ಗುಡ್ಡೆ ಹಾಕುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಟೊಡರ್ ಲ್ಯಾಜರೋವ್.

ಹೌದು, ಟೊಡರ್ ಲ್ಯಾಜರೋವ್. ಹಾಲಿವುಡ್ ಟೆಕ್ನಿಷಿಯನ್. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದಲ್ಲಿನ ಅದ್ಭುತ -ಅಸಾಮಾನ್ಯ ಆಕ್ಷನ್ ದೃಶ್ಯಗಳ ಹಿಂದೆ ಇದ್ದಿದ್ದು ಇದೇ ಟೊಡರ್ ಲ್ಯಾಜರೋವ್. ಇವರ ಕೆಲಸವನ್ನು ಕಂಡು ಖುದ್ದು ರಾಜಮೌಳಿ ಬೆಕ್ಕಸ ಬೆರಗಾಗಿದ್ದರು. ಸಂದರ್ಶನವೊಂದರಲ್ಲಿ ಇವರ ಬಗ್ಗೆ ಮಾತನಾಡಿ ಬಾಯ್ತುಂಬ ಹೊಗಳಿದ್ದರು. ಇದೀಗ ಅದೇ ಟೊಡರ್ ಲ್ಯಾಜರೋವ್ ಅವರನ್ನು ಹುಡುಕಿ ರಿಷಬ್ ಶೆಟ್ಟಿ ದೂರದ ಬಲ್ಗೇರಿಯಾದಿಂದ ತಮ್ಮ ಕಾಂತಾರ ಚಿತ್ರಕ್ಕಾಗಿ ಕನ್ನಡಕ್ಕೆ ಕರೆದುಕೊಂಡು ಬಂದಿದ್ದಾರೆ.
ಅಂದ್ಹಾಗೇ ಕಾಂತಾರ ಮೊದಲ ಭಾಗದಲ್ಲಿ ಎರಡು ಪ್ರಮುಖವಾದ ಸಾಹಸ ಸನ್ನಿವೇಶಗಳಿವೆ. ಸದ್ಯದ ಸುದ್ದಿಯ ಪ್ರಕಾರ ಚಿತ್ರದ ಈ ಎರಡು ಆಕ್ಷನ್ ದೃಶ್ಯಗಳನ್ನು ಟೊಡರ್ ಲ್ಯಾಜರೋವ್ ನಿರ್ದೇಶನ ಮಾಡಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ಈ ಎರಡು ಸ್ಟಂಟ್ಗಳನ್ನು ಸೆರೆ ಹಿಡಿಯುವ ಆಲೋಚನೆಯನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ. ಇನ್ನೂ ಚಿತ್ರದ ಇನ್ನೊಂದು ಆಕ್ಷನ್ ದೃಶ್ಯದಲ್ಲಿ ರಿಷಬ್ ಶೆಟ್ಟಿಪಾತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆಯನ್ನು ಕಲಿತಿದ್ದಾರೆ. ಕೆಲ ದಿನಗಳ ಹಿಂದೆ ಫೋಟೊ ಹಂಚಿಕೊಂಡು ಕುತೂಹಲವನ್ನು ಹುಟ್ಟು ಹಾಕಿದ್ದಾರೆ. ಸದ್ಯ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಬಂದ ಟೊಡರ್ ಲ್ಯಾಜರೋವ್ ನಿರ್ದೇಶನದಲ್ಲಿಯೇ ಈ ಕಳರಿಪಯಟ್ಟು ಸಮರಕಲೆಯ ಚಿತ್ರೀಕರಣ ನಡೆಯುತ್ತಾ ಅಥವಾ ಈಗಾಗಲೇ ಆ ಭಾಗದ ಚಿತ್ರೀಕರಣ ನಡೆದಿದೆಯಾ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ.
ಇನ್ನುಳಿದಂತೆ ಕೆರಾಡಿಯಲ್ಲಿ ಭಾರೀ ಸೆಟ್ ನಿರ್ಮಾಣ ಮಾಡಿ ಪ್ರೀಕ್ವೆಲ್ ಚಿತ್ರೀಕರಣ ನಡೆಸಲಾಗುತ್ತಿದೆ. ಕುಂದಾಪುರದಲ್ಲಿ 22 ಸಾವಿರ ಚದರ ಅಡಿ ವಿಸ್ತೀರ್ಣದ ಶೂಟಿಂಗ್ ಫ್ಲೋರ್ ನಿರ್ಮಿಸಿ 'ಕಾಂತಾರ' ಚಾಪ್ಟರ್-1 ಚಿತ್ರೀಕರಣ ನಡೆಸಲಾಗುತ್ತಿದೆ. ಅದರ ಒಳಗೆ ನಾಲ್ಕೈದು ಸೆಟ್ಗಳನ್ನು ನಿರ್ಮಿಸಲಾಗಿದೆ.ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ.
ಇನ್ನೂ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಚಿತ್ರತಂಡ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯುವ ನಿರೀಕ್ಷೆ ಇದೆ. ಮುಂದಿನ ವರ್ಷ ಜೂನ್ ಸಮಯಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಮಿಕ್ಕಂತೆ ಕಾಂತಾರ ಮೊದಲ ಭಾಗದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟನ್ನೂ ರಿಷಬ್ ಶೆಟ್ಟಿ ಇಲ್ಲಿಯವರೆಗೆ ರಟ್ಟು ಮಾಡಿಲ್ಲ.


Click it and Unblock the Notifications











