ವಿವಾದದಲ್ಲಿ 'ಬಿಗ್ ಬಾಸ್ ತಮಿಳ್', ಟಿವಿ ಚಾನೆಲ್-ಕಮಲ್'ಗೆ ನೋಟಿಸ್
ತಮಿಳಿನಲ್ಲಿ 'ಬಿಗ್ ಬಾಸ್' ರಿಯಾಲಿಟಿ ಶೋ ಜನಪ್ರಿಯವಾಗುತ್ತಿದ್ದಂತೆ ಜೊತೆಗೆ ವಿವಾದಕ್ಕೂ ಸಿಲುಕಿದೆ. 'ಬಿಗ್ ಬಾಸ್ ತಮಿಳ್' ರಿಯಾಲಿಟಿ ಶೋನಲ್ಲಿ ನಟಿ ಗಾಯತ್ರಿ ರವರು ಕೊಳೆಗೇರಿ ಮತ್ತು ಗುಡಿಸಲುಗಳಲ್ಲಿ ವಾಸಿಸುವ ಜನತೆಯ ಭಾವನೆಗಳಿಗೆ ನೋವುಂಟುಮಾಡುವ ಹಾಗೆ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ ಕಮಲ್ ಹಾಸನ್ ಹಾಗೂ ಸ್ಟಾರ್ ವಿಜಯ ಟಿವಿ ಚಾನೆಲ್ ಗೆ 'ಪುದಿಯಾ ತಮಿಳಗಂ' ದಲಿತ ಪಕ್ಷ ಲೀಗಲ್ ನೋಟಿಸ್ ಜಾರಿ ಮಾಡಿದೆ.
'ಪುದಿಯಾ ತಮಿಳಗಂ' ದಲಿತ ಪಕ್ಷ ನೀಡಿರುವ ನೋಟಿಸ್ನಲ್ಲಿ, 'ಲೀಗಲ್ ನೋಟಿಸ್ ತಲುಪಿದ ಏಳು ದಿನಗಳ ಒಳಗೆ ಬಿಗ್ ಬಾಸ್ ತಮಿಳ್ ರಿಯಾಲಿಟಿ ಶೋ ನಿರೂಪಕರಾದ ಕಮಲ್ ಹಾಸನ್ ರವರು ಮತ್ತು ಟಿವಿ ಚಾನೆಲ್ ಕ್ಷಮೆ ಕೋರಬೇಕು, ಇಲ್ಲವಾದಲ್ಲಿ ಮಾನನಷ್ಟ ಪರಿಹಾರವಾಗಿ 100 ಕೋಟಿ ರೂ ನೀಡಬೇಕು' ಎಂದು ಸೂಚಿಸಲಾಗಿದೆಯಂತೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ 'ಪುದಿಯ ತಮಿಳಗಂ' ಪಕ್ಷದ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಕೃಷ್ಣಸ್ವಾಮಿ ರವರು ಹೇಳಿದ್ದಾರೆ.

ಅಂದಹಾಗೆ 'ಬಿಗ್ ಬಾಸ್ ತಮಿಳ್' ರಿಯಾಲಿಟಿ ಶೋ ನಲ್ಲಿ ಕೊಳೆಗೇರಿ ಜನತೆಗೆ ನೋವುಂಟಾಗುವಂತೆ ಮಾತನಾಡಿದ ನಟಿ ಗಾಯತ್ರಿ ರಘುರಾಮ್ ತಮ್ಮ ಹೇಳಿಕೆಗೆ ಪ್ರತಿಯಾಗಿ ಕ್ಷಮೆ ಕೇಳಬೇಕು ಎಂದು 15 ದಿನಗಳ ಹಿಂದೆಯೇ ಹೇಳಲಾಗಿತ್ತಂತೆ. ಆದರೆ ಅದಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದ ಕಾರಣ ಇದೀಗ ಕಾನೂನು ಪ್ರಕಾರ ನೋಟಿಸ್ ನೀಡಲಾಗಿದೆ.


Click it and Unblock the Notifications











