ಲಹರಿ ವೇಲುಗೆ 'ರಣವಿಕ್ರಮ' ರಾಯಧನ ಎಷ್ಟು ಗೊತ್ತೆ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರ ಬಿಡುಗಡೆಗೆ ಇದೀಗ ಯಾವುದೇ ಆತಂಕ ಇಲ್ಲ. ಕಾಪಿರೈಟ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದ ಲಹರಿ ಆಡಿಯೋ ಸಂಸ್ಥೆ ಜೊತೆ ಮಾತುಕತೆ ನಡೆಸಿದ 'ರಣವಿಕ್ರಮ' ನಿರ್ಮಾಪಕ ಜಯಣ್ಣ ರಾಜಿಯಾಗಿದ್ದಾರೆ.
ಬಿಗ್ ಬಜೆಟ್ ನಲ್ಲಿ ರೆಡಿಯಾಗಿರುವ 'ರಣವಿಕ್ರಮ' ಬಿಡುಗಡೆಗೆ ಯಾವುದೇ ಅಡ್ಡಿಯಾಗಬಾರದು ಅನ್ನುವ ಕಾರಣಕ್ಕೆ ಲಹರಿ ಆಡಿಯೋ ಸಂಸ್ಥೆಗೆ ಬರೋಬ್ಬರಿ 20 ಲಕ್ಷ ರೂಪಾಯಿಯನ್ನ ಗೌರವಧನ ರೂಪದಲ್ಲಿ ನೀಡಿದ್ದಾರೆ. ಅಲ್ಲದೇ, ಆಗಿರುವ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಈ ಮೂಲಕ 'ಮೈನಾ' ಚಿತ್ರದ ಕಾಪಿರೈಟ್ ವಿವಾದದ ಬಳಿಕ ಲಹರಿ ಆಡಿಯೋ ಸಂಸ್ಥೆಗೆ ಎರಡನೇ ಜಯ ಸಿಕ್ಕಂತಾಗಿದೆ.

ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ ಲಹರಿ ವೇಲು, ''ಗೌರವಧನಕ್ಕಿಂತ ಹೆಚ್ಚಾಗಿ ರೈಟ್ಸ್ ನಮ್ಮ ಬಳಿಯಿದೆ. ಅದನ್ನ ಕಾನೂನು ಪ್ರಕಾರ ಪಡೆದುಕೊಳ್ಳಬೇಕು. ಜಯಣ್ಣ ನಮಗೆ ಆಪ್ತರು. ಹೀಗಾಗಿ ನಾವು ಹಾಡುಗಳನ್ನ ಬಳಿಸಿಕೊಳ್ಳುವುದಕ್ಕೆ NOC ಕೊಟ್ಟಿದ್ದೇವೆ'' ಅಂತ ಹೇಳಿದರು. [ಕಡೆಗೂ ಲಹರಿ ವೇಲು ಜತೆ ರಾಜಿಯಾದ 'ರಣವಿಕ್ರಮ']
ಹೀಗಾಗಿ, ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ರಣವಿಕ್ರಮ' ಚಿತ್ರದ ಹಾಡುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರಣರಂಗ' ಚಿತ್ರದ ''ಜಗವೇ ಒಂದು ರಣರಂಗ...'' ಮತ್ತು ತೆಲುಗು ಚಿತ್ರದ ಹಾಡಿನ ಟ್ಯೂನ್ ಯಥಾವತ್ತಾಗಿ ಮುಂದುವರೆಯಲಿದೆ. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ ]
ಏಪ್ರಿಲ್ 10 ರಂದು 'ರಣವಿಕ್ರಮ' ತೆರೆಗೆ ಬರಲಿದೆ ಅಂತ ಹೇಳಲಾಗುತ್ತಿದೆ. ಸೆನ್ಸಾರ್ ಅಂಗಳದಲ್ಲಿರುವ 'ರಣವಿಕ್ರಮ' ಕ್ಲೀನ್ ಚಿಟ್ ಪಡೆದರೆ ಖಡಕ್ ಪೊಲೀಸ್ ಆಫೀಸರ್ ಗೆಟಪ್ ನಲ್ಲಿ ಪುನೀತ್ ರಾಜ್ ಕುಮಾರ್ ಆದಷ್ಟು ಬೇಗ ನಿಮ್ಮ ಮುಂದೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)


Click it and Unblock the Notifications











