'ಉಮಾಪತಿ ಯಾರೋ ನನಗೆ ಗೊತ್ತಿಲ್ಲ': ದರ್ಶನ್ ಪರ ನಿಂತ ಸುಮಲತಾ
ನಟ ದರ್ಶನ್ ಹೆಸರು ದುರ್ಬಳಕೆ ಮಾಡಿಕೊಂಡು ಸುಮಾರು 25 ಕೋಟಿ ರೂಪಾಯಿ ವಂಚಿಸಲು ಯತ್ನ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಂದರ್ಭದಲ್ಲಿ, ''ಕಳೆದ ವಾರ ದರ್ಶನ್ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಯಾರೋ 25 ಕೋಟಿ ಮೋಸ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಎಂದು ಹೇಳಿದ್ರು. ಆದರೆ, ಪೂರ್ತಿ ವಿಷಯದ ಬಗ್ಗೆ ಮಾತನಾಡಿಲ್ಲ'' ಎಂದು ಸುಮಲತಾ ತಿಳಿಸಿದರು.
ಈ ವಿಚಾರದಲ್ಲಿ 'ನ್ಯಾಯ ದರ್ಶನ್ ಪರ ಇದೆ, ನಾನು ನ್ಯಾಯದ ಪರ ಇರ್ತೇನೆ' ಎಂದು ಡಿ ಬಾಸ್ಗೆ ಬೆಂಬಲ ವ್ಯಕ್ತಪಡಿಸಿದರು.

ಇನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕುರಿತು ಉಲ್ಲೇಖಿಸಿದಾಗ, ''ಉಮಾಪತಿ ಯಾರು ಎನ್ನುವುದು ನನಗೆ ತಿಳಿದಿಲ್ಲ. ಅವರನ್ನು ಭೇಟಿ ಸಹ ಮಾಡಿಲ್ಲ. ಈ ಬಗ್ಗೆ ನಾನು ಮಾತನಾಡುವುದಕ್ಕೆ ಇಷ್ಟ ಪಡಲ್ಲ'' ಎಂದು ತಿಳಿಸಿದರು.
ಕಳೆದ ಒಂದು ವಾರದಿಂದ ಮಂಡ್ಯ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರ ನಡುವೆ ಕೆಆರ್ಎಸ್ ಡ್ಯಾಂ, ಅಂಬರೀಶ್ ಸ್ಮಾರಕಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ನಡೆಯುತ್ತಿದೆ.
ಸುಮಲತಾ ಹಾಗೂ ಅಂಬರೀಶ್ ಪರವಾಗಿ ಮಾತನಾಡಿದ್ದ ರಾಕ್ಲೈನ್ ವೆಂಕಟೇಶ್ ವಿರುದ್ಧ ತೀವ್ರ ಟೀಕೆ ಎದುರಾಗಿತ್ತು. ಈ ಹಿನ್ನೆಲೆ ದುಷ್ಕರ್ಮಿಗಳು ರಾಕ್ಲೈನ್ ಮನೆ ಮೇಲೆ ಕಲ್ಲು ಎಸೆದಿದ್ದರು.
ಈ ಘಟನೆ ಸಂಬಂಧ ಮಾತನಾಡಿದ ಸುಮಲತಾ, ''ಇದು ಮಂಡ್ಯ ಚುನಾವಣೆ ವೇಳೆಯೂ ಆಗಿತ್ತು. ಆಗ ದರ್ಶನ್ ಮನೆ ಮೇಲೆ ಕಲ್ಲು ಹೊಡೆದಿದ್ದರು. ಯಶ್ ಬಗ್ಗೆ ನಿಂದಿಸಿದ್ದರು. ಆಗಲೇ ಭಯ ಪಟ್ಟಿಲ್ಲ. ಈಗ ಈ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು'' ಎಂದರು.


Click it and Unblock the Notifications











