'ಕಾಂತಾರ-1' ನಾಯಕಿ ಇವ್ರೇ ನೋಡಿ; ಮೇಕಿಂಗ್ ವಿಡಿಯೋದಲ್ಲಿ ಹುಡುಕಿಬಿಟ್ರು ಫ್ಯಾನ್ಸ್!
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ'-1 ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಮೇಕಿಂಗ್ ವೀಡಿಯೋ ಮೂಲಕ ನಿರೀಕ್ಷೆ ಹೆಚ್ಚಿಸಿದೆ ಚಿತ್ರತಂಡ. ಗ್ಲಿಂಪ್ಸ್ ವೀಡಿಯೋ ನೋಡಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವುದು ಗ್ಯಾರಂಟಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಚಿತ್ರೀಕರಣ ಮುಗಿಸಿ 'ಕಾಂತಾರ'-1 ಟೀಂ ಕುಂಬಳಕಾಯಿ ಒಡೆದಿದೆ. ಇನ್ನೇನಿದ್ದರು ಪ್ರೀ ಪ್ರೊಡಕ್ಷನ್ ವರ್ಕ್ ನಡೀಬೇಕಿದೆ. ಅಕ್ಟೋಬರ್ 2ಕ್ಕೆ ಶತಾಯಗತಾಯ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. 3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಆ ಗೆಲುವು ಪ್ರೀಕ್ವೆಲ್ ಚಿತ್ರಕ್ಕೆ ವರವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ.

ಕಥೆ ಹೇಳಲು ಭಾರೀ ಸೆಟ್ಗಳನ್ನು ಚಿತ್ರತಂಡ ನಿರ್ಮಿಸಿದೆ. ಒಂದಷ್ಟು ಲೈವ್ ಲೊಕೇಶನ್ಗಳಲ್ಲಿ ಕೂಡ ಸಿನಿಮಾ ಚಿತ್ರೀಕರಿಸಲಾಗಿದೆ. ರಿಷಬ್ ಶೆಟ್ಟಿ ಬಿಟ್ಟರೆ ಇನ್ನು ಯಾರೆಲ್ಲಾ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ತಾರಾಗಣ, ಕಥೆಯ ಬಗ್ಗೆ ಚಿತ್ರತಂಡ ಗುಟ್ಟು ಕಾಪಾಡಿಕೊಂಡು ಬರ್ತಿದೆ. ಸಾವಿರಾರು ಸಹ ಕಲಾವಿದರು 'ಕಾಂತಾರ-1' ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಕರಾವಳಿ ಮಣ್ಣಿನ ಕಥೆಯನ್ನು ಮತ್ತಷ್ಟು ಅದ್ಭುತವಾಗಿ ರಿಷಬ್ ಶೆಟ್ಟಿ ತೆರೆಗೆ ತರುತ್ತಿದ್ದಾರೆ.
ಚಿತ್ರದಲ್ಲಿ ನಾಯಕಿ ಯಾರು? ರಿಷಬ್ ಶೆಟ್ಟಿ ಬಿಟ್ಟು ಬೇರೆ ಯಾರೆಲ್ಲಾ ನಟಿಸಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಎನ್ನುವ ಊಹಾಪೋಹ ಹಿಂದೆ ಶುರುವಾಗಿತ್ತು. ಆದರೆ ಆಕೆ ಸೆಟ್ಗೆ ಹೋಗಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಇದು ಪ್ರೀಕ್ವೆಲ್ ಆಗಿರುವುದರಿಂದ ಕಾಡುಬೆಟ್ಟು ಶಿವ ಹಾಗೂ ಲೀಲಾ ಪಾತ್ರಗಳಾಗಲಿ ಇರುವುದು ಅನುಮಾನ. ಕಾಡುಬೆಟ್ಟು ಶಿವನ ಪೂರ್ವಿಕರ ಕಥೆಯನ್ನು ಈ ಚಿತ್ರದಲ್ಲಿ ಹೇಳಿರುವ ಸಾಧ್ಯತೆಯಿದೆ.

ಹಾಸ್ಯ ನಟ ರಾಕೇಶ್ ಪೂಜಾರಿ 'ಕಾಂತಾರ-1' ಚಿತ್ರದಲ್ಲಿ ನಟಿಸಿದ್ದಾರೆ. ಮೇಕಿಂಗ್ ವೀಡಿಯೋದ ಒಂದು ಫ್ರೇಮ್ನಲ್ಲಿ ಕೂಡ ಅವರನ್ನು ಗಮನಿಸಬಹುದು. ಇನ್ನುಳಿದಂತೆ ಮಲಯಾಳಂ ನಟ ಜಯರಾಮ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನುವ ಗುಸುಗುಸು ಹಿಂದೆ ಕೇಳಿಬಂದಿತ್ತು. ಆದರೆ ಆ ಬಗ್ಗೆ ಖಚಿತ ಮಾಹಿತಿ ಸಿಗಲಿಲ್ಲ. ಸದ್ಯ ಮೇಕಿಂಗ್ ವೀಡಿಯೋದ ಮತ್ತೊಂದು ಫ್ರೇಮ್ನಲ್ಲಿ ರುಕ್ಮಿಣಿ ವಸಂತ್ ಇದ್ದಾರೆ ನೋಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಮೇಕಿಂಗ್ ವೀಡಿಯೋದಲ್ಲಿ 1 ನಿಮಿಷದ 10 ಸೆಕೆಂಡ್ನಲ್ಲಿ ಬರುವ ಲಾಂಗ್ ಡ್ರೋಣ್ ಶಾಟ್ ಅದು. ಕೊಳದ ಪಕ್ಕದಲ್ಲಿ ಒಂದಷ್ಟು ಮಹಿಳಾ ಕ್ಲಾಸಿಕಲ್ ಡ್ಯಾನ್ಸರ್ ಹೆಜ್ಜೆ ಹಾಕುತ್ತಿದ್ದಾರೆ. ಅವರ ಸಾಲಿನಲ್ಲಿ ಮುಂದೆ ನಿಂತಿರುವುದು ರುಕ್ಮಿಣಿ ವಸಂತ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್ಡೇಟ್ ಸಿಗಬಹುದು. ಕೆಲವರ ಪ್ರಕಾರ ಈ ಚಿತ್ರದಲ್ಲಿ ನಾಯಕಿ ಕೂಡ ಇರುವುದಿಲ್ಲ ಎನ್ನಲಾಗ್ತಿದೆ. ಜನಪ್ರಿಯ ಕಲಾವಿದರನ್ನು ಬಿಟ್ಟು ರಂಗಭೂಮಿ ಕಲಾವಿದರು, ಕರಾವಳಿ ಹಾಗೂ ಕೇರಳದ ಕಲಾವಿದರನ್ನು ಹೆಚ್ಚು ಬಳಸಿಕೊಂಡಿರುವ ಸಾಧ್ಯತೆಯೂ ದಟ್ಟವಾಗಿದೆ.
'ಬೀರ್ಬಲ್' ಚಿತ್ರದ ಮೂಲಕ ರುಕ್ಮಿಣಿ ವಸಂತ್ ಚಿತ್ರರಂಗ ಪ್ರವೇಶಿಸಿದ್ದರು. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳು ಆಕೆಗೆ ನೇಮು ಫೇಮು ತಂದುಕೊಟ್ಟಿತ್ತು. 'ಬಘೀರ' ಹಾಗೂ 'ಭೈರತಿ ರಣಗಲ್' ಚಿತ್ರಗಳು ಕ್ರೇಜ್ ಹೆಚ್ಚಿಸಿತ್ತು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ರುಕ್ಮಿಣಿ ಹವಾ ಜೋರಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ನಾಯಕಿಯಾಗಿ ಆಕೆಯ ಹೆಸರು ಕೇಳಿಬರ್ತಿದೆ. ಆದರೆ ಯಾವುದು ಕನ್ಫರ್ಮ್ ಆಗ್ತಿಲ್ಲ.


Click it and Unblock the Notifications











