'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು
''ಜಾನಕಿ ಅಮ್ಮ ಹೇಳಿದ್ದಕ್ಕೆ ನಾನು ಸಂಗೀತ ಲೋಕಕ್ಕೆ ಬಂದೆ'' ಎಂದು ಅನೇಕ ವೇದಿಕೆಗಳಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹೇಳಿಕೊಂಡಿದ್ದಾರೆ. ಆದ್ರೆ, ಜಾನಕಿ ಅವರು ಮಾತ್ರ, 'ಅವರಲ್ಲಿ ಪ್ರತಿಭೆ ಇತ್ತು, ನಾನು ಹೇಳಿದೆ ಅಷ್ಟೇ' ಎಂದು ದೊಬಾಲುಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಬಂದರು.
ಎಸ್ಪಿಬಿ ಮತ್ತು ಎಸ್ ಜಾನಕಿ ಅವರ ನಡುವೆ ಅವಿನಾಭಾವ ಸಂಬಂಧ ಇತ್ತು. ಇಬ್ಬರು ದಿಗ್ಗಜ ಗಾಯಕರಾಗಿದ್ದರು, ಅದನ್ನು ಮೀರಿದ ಆತ್ಮೀಯತೆ, ಬಾಂಧವ್ಯ, ಸ್ನೇಹ ಅವರಿಬ್ಬರಲ್ಲಿ ಇತ್ತು. ಹಾಗಾಗಿ, ಅವರಿಬ್ಬರು ಒಟ್ಟಿಗೆ ಹಾಡು ಹಾಡಿದ್ರೆ ಅದು ಪಕ್ಕಾ ಸೂಪರ್ ಹಿಟ್ ಆಗುತ್ತದೆ ಎಂಬ ಸಂಪ್ರದಾಯವೂ ಹುಟ್ಟಿಕೊಂಡಿತ್ತು.
ಆ ನಿರೀಕ್ಷೆಯಂತೆ ಸಾವಿರಾರು ಹಾಡುಗಳನ್ನು ಎಸ್ಪಿಬಿ ಮತ್ತು ಎಸ್ ಜಾನಕಿ ಹಾಡಿದ್ದಾರೆ. ಆದ್ರೀಗ, ಆತ್ಮೀಯ ಗಾಯಕನನ್ನು ಕಳೆದುಕೊಂಡ ಜಾನಕಿ ಅವರು ಕಣ್ಣೀರು ಹಾಕಿದ್ದಾರೆ. ಎಸ್ಪಿಬಿ ಕುರಿತು ಕೆಲವು ನೆನಪು ಹಂಚಿಕೊಂಡಿರುವ ಜಾನಕಿಯಮ್ಮ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ...

ಅಂದು ವೇದಿಕೆಯಲ್ಲಿ ನೋಡಿದ್ದೆ
''ನೆಲ್ಲೂರಿನ ಬಳಿಯಿರುವ ಗೂಡುರು ಬಳಿ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಅತ್ಯುತ್ತಮವಾಗಿ ಹಾಡಿದವರಿಗೆ ಪ್ರಶಸ್ತಿ ನೀಡಲು ನನ್ನನ್ನು ಆಹ್ವಾನಿಸಿದ್ದರು. ಪ್ರಶಸ್ತಿ ಗೆದ್ದವರು ಮತ್ತೆ ವೇದಿಕೆಯಲ್ಲಿ ಹಾಡಿದರು. ಆಗಲೇ ನಾನು ಬಾಲು ಅವರನ್ನು ನೋಡಿದೆ. ಒಂದೊಳ್ಳೆ ಹಾಡನ್ನು ಹಾಡಿದೆ ಬಾಲಸುಬ್ರಹ್ಮಣ್ಯಂ ಬಹಳ ಚೆನ್ನಾಗಿ ಹಾಡಿದ. ಮೂಲ ಹಾಡುಗಾಗರನ್ನು ಮೀರಿಸುವಂತೆ ತನ್ನದೇ ಸ್ವಂತ ಧ್ವನಿಯಲ್ಲಿ ಹಾಡಿದ್ದು ಗಮನ ಸೆಳೆಯಿತು'' ಎಂದು ಎಸ್ಪಿಬಿ ಬಗ್ಗೆ ಸ್ಮರಿಸಿಕೊಂಡಿದ್ದಾರೆ.

ಸಿನಿಮಾ ಬಂದ್ರೆ ಒಳ್ಳೆಯ ಹೆಸರು ಬರುತ್ತೆ
''ಅಂದು ಬಾಲು ಅವರ ಪ್ರತಿಭೆ ನೋಡಿದ ನಾನು, ನೀನು ಸಿನಿಮಾಗೆ ಹಾಡಿದರೆ ಒಳ್ಳೆಯ ಹೆಸರು ಬರುತ್ತೆ ಎಂದು ಹೇಳಿದೆ. ಅದನ್ನೇ ಈಗಲೂ ಬಾಲು ಅನೇಕ ಕಡೆ ಹೇಳಿಕೊಂಡಿದ್ದಾರೆ. ಜಾನಕಮ್ಮ ಹೇಳಿದರು, ಅದಕ್ಕೆ ಬಂದೆ ಅಂತ. ಆದ್ರೆ, ಹೇಳಿದವರೆಲ್ಲ ಬರ್ತಾರೇನು? ಅವರಲ್ಲಿ ಪ್ರತಿಭೆ ಇತ್ತು, ಅದೃಷ್ಟ ಇತ್ತು ಬಂದರು. ನಾನು ಹೇಳಿದೆ ಎಂದು ಬಂದಿಲ್ಲ'' ಎಂದು ಹೇಳಿಕೊಂಡಿದ್ದಾರೆ.

ಸಾವಿರಾರು ಡುಯೇಟ್ ಹಾಡು ಹಾಡಿದ್ದೇವೆ
''ಬಾಲು ಮದ್ರಾಸ್ಗೆ ಬಂದರು. ಆಮೇಲೆ ನಾವು ಎಷ್ಟೊಂದು ಡುಯೇಟ್ ಸಾಂಗ್ಸ್ ಹಾಡಿದ್ದೀವಿ. ಈಗಲೂ ಹಾಡ್ತಿದ್ವಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಹಾಡಿದ್ದೇವೆ. ಆದ್ರೆ, ಕನ್ನಡದಲ್ಲಂತೂ ಬಹಳ ಹಾಡಿದ್ದೇವೆ'' ಎಂದು ಹೆಮ್ಮೆ ಪಟ್ಟಿದ್ದಾರೆ.

ನಾವು ಫ್ರೆಂಡ್ಸ್ ಆಗಿದ್ವಿ
''ನಾವು ಸಹ ಗಾಯಕರಲ್ಲ, ನಾವು ಫ್ರೆಂಡ್ಸ್ ಆಗಿದ್ವಿ. ರೆಕಾರ್ಡಿಂಗ್ನಲ್ಲಿ ನಾನು ಗಲಾಟೆ ಮಾಡಿಕೊಂಡಿದ್ವಿ, ಜಗಳ ಮಾಡಿದ್ವಿ, ಮತ್ತೆ ಸರಿ ಆಗ್ತಿದ್ವಿ. ಹಾಡು ಮತ್ತು ಸಂಗೀತ ಜೊತೆ ಆಟ ಆಡಿದ್ವಿ. ನಾನಾ ನೀನಾ ಎಂದು ಕಾಂಪಿಟೇಶನ್ಗೆ ಬಿದ್ದು ಹಾಡಿದ್ವಿ'' ಎಂದು ಭಾವುಕಾದರು.

ಕೊನೆ ಕಾರ್ಯಕ್ರಮ ಮೈಸೂರಿನಲ್ಲಿ
''ಬಾಲಸುಬ್ರಹ್ಮಣ್ಯಂ ಮನೆಗೆ ಬಂದಿದ್ದರು. ಮಗನ ಜೊತೆ ಮಾತಾಡಿಕೊಂಡು ಕುಳಿತಿದ್ದರು. ಕಾಕತಾಳೀಯ ಅಂದ್ರೆ ಇಬ್ಬರು ಕೊನೆಯದಾಗಿ ಮೈಸೂರಿನಲ್ಲಿಯೇ ಹಾಡಿದ್ದೇವೆ. ನನ್ನ ಸಂಗೀತದಲ್ಲಿ ಅವರು ಹಾಡಿದ್ದಾರೆ. ಅವರ ಸಂಗೀತದಲ್ಲಿ ನಾನು ಹಾಡಿದ್ದೇನೆ. ಬಹಳ ತುಂಬಾ ಕ್ಲೋಸ್ ಆಗಿದ್ವಿ'' ಎಂದು ಜಾನಕಿ ಅವರು ಕಣ್ಣೀರು ಹಾಕಿದ್ದಾರೆ.

ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು
''ಆಸ್ಪತ್ರೆಗೆ ಅಂತ ಹೋದವರು ಬರ್ತಾರೆ ಅಂದುಕೊಂಡಿದ್ದೆ, ಆದರೆ ಹಾಗೆ ಹೋಗಬಿಟ್ಟರು. ಸುದ್ದಿ ತಿಳಿದು ಬಹಳ ನೋವಾಯಿತು. ಮಾತು ಬಂದಿರಲಿಲ್ಲ. ಹಾಗಾಗಿ, ನಿನ್ನೆ ಮೊನ್ನೆ ಮಾತಾನಾಡೋಕೆ ಆಗಿಲ್ಲ. ಈಗ ಸಮಾಧಾನ ಮಾಡ್ಕೊಂಡು ಮಾತಾಡಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೊರೆಯಲ್ಲಿ ಎಂದು ನಾನು ಪ್ರಾರ್ಥಿಸುತ್ತೇನೆ'' ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications











