'ಪದ್ಮಭೂಷಣ' ಪ್ರಶಸ್ತಿ ನಿರಾಕರಿಸಿದ ಎಸ್ ಜಾನಕಿ

"ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಸಂಗತಿ ನನಗೆ ತುಂಬಾ ನೋವು ತಂದಿದೆ. ಇದು ನನಗೆ ತುಂಬಾ ನಿರಾಶೆ ತಂದಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸುತ್ತೇನೆ" ಎಂದು ಯಾವಾಗಲೂ ಹಸನ್ಮುಖಿಯಾಗಿರುವ 74 ವರ್ಷದ ಹಿರಿಯ ಗಾಯಕಿ ಎಸ್ ಜಾನಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು 'ಪದ್ಮ ಭೂಷಣ' ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆಯೂ ಅವರಿಗೆ ಅಸಮಾಧಾನವಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ 20 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ತಮಗೆ 'ಪದ್ಮ ವಿಭೂಷಣ' ಪ್ರಶಸ್ತಿ ನೀಡಿದರೆ ಮಾತ್ರ ಸ್ವೀಕರಿಸುವುದಾಗಿ ನುಡಿದಿದ್ದಾರೆ. ಒಟ್ಟು 108 ಸಾಧಕರನ್ನು ಪದ್ಮ ಪ್ರಶಸ್ತಿಗೆ 64ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ.
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿರುವ ಎಸ್ ಜಾನಕಿ ಅವರ ಅಸಮಾಧಾನದ ನುಡಿ, ಪದ್ಮ ಪ್ರಶಸ್ತಿ ಆಯ್ಕೆಯ ಪ್ರಕ್ರಿಯೆಯನ್ನು ಪ್ರಶ್ನಿಸುವಂತಾಗಿದೆ. ಮತ್ತೊಬ್ಬ ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರೊಂದಿಗೆ ಕನ್ನಡವೂ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಸಾವಿರಕ್ಕೂ ಹೆಚ್ಚು ಹಾಡು ಹಾಡಿರುವ ಜಾನಕಿ ಅವರಿಗೆ ಅಭಿಮಾನಿಗಳು ನೀಡಿರುವ ಪ್ರೀತಿಯ ಪ್ರಶಸ್ತಿಯೇ ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿ ಎಂಬುದನ್ನು ಮರೆಯುವಂತಿಲ್ಲ.


Click it and Unblock the Notifications











