ಅಮ್ಮ ಮೈಸೂರಿನಲ್ಲೇ ಪ್ರಾಣ ಬಿಡೋದು ನನ್ನ ಆಸೆ ಎಂದಿದ್ರು; ಎಸ್. ಜಾನಕಿ ಸಾಕುಮಗ ನವೀನ್
ವಯಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಗಾಯಕಿ ಎಸ್. ಜಾನಕಿ ನಿನ್ನೆ(ಜುಲೈ 11) ನಿಧನರಾಗಿದ್ದರು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದರು. ಚಿತ್ರರಂಗ, ರಾಜಕೀಯರಂಗದ ಗಣ್ಯರು, ಅಭಿಮಾನಿಗಳು ಗಾನಕೋಗಿಲೆಯ ಅಗಲಿಕೆಗೆ ಕಂಬನಿ ಮಿಡಿದಿದೆ. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಫಾರ್ಮ್ಹೌಸ್ನಲ್ಲಿ ಬ್ರಾಹ್ಮಣ ಸಂಪ್ರದಾಯಗಳಂತೆ ಅಂತ್ಯಕ್ರಿಯೆ ನಡೆಯಲಿದೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಹುಟ್ಟಿದ ಎಸ್. ಜಾನಕಿ ಅವರಿಗೆ ಮೈಸೂರು ಅಂದ್ರೆ ಬಹಳ ಅಚ್ಚುಮೆಚ್ಚಾಗಿತ್ತು. ಕೆಲ ವರ್ಷಗಳಿಂದ ಅವರು ಅರಮನೆ ನಗರಿಯಲ್ಲೇ ನೆಲೆಸಿದ್ದರು. ಅಮ್ಮ ಮೈಸೂರಿನಲ್ಲೇ ಪ್ರಾಣ ಬಿಡೋದು ನನ್ನ ಆಸೆ ಎಂದು ಹೇಳುತ್ತಿದ್ದರು ಎಂದು ಸಾಕು ಮಗ ನವೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೈದರಾಬಾದ್ನಲ್ಲಿ ಭವ್ಯ ಬಂಗಲೆ ಇದ್ದರೂ ಮೈಸೂರಿಗೆ ಆಗಾಗ್ಗೆ ಬರುತ್ತಿದ್ರು. 2018ರಲ್ಲಿ ಮೈಸೂರಿನಲ್ಲೇ ಕೊನೆಯ ಸಂಗೀತ ಕಾರ್ಯಕ್ರಮ ನೀಡಿದ್ರು ಎಂದು ನವೀನ್ ನೆನಪಿಸಿಕೊಂಡಿದ್ದಾರೆ.

18 ವರ್ಷಗಳಿಂದ ಎಸ್. ಜಾನಕಿ ಮೈಸೂರಿನಲ್ಲೇ ಇರುತ್ತಿದ್ದರು. ಅಪಾರ ದೈವಭಕ್ತೆಯಾಗಿದ್ದ ಅವರು ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಚಾಮುಂಡಿ ಬೆಟ್ಟ, ನಂಜನಗೂಡು ಸೇರಿದಂತೆ ಕೆಲ ದೇವಸ್ಥಾನಗಳಿಗೆ ಹೋಗುತ್ತಿದ್ದರು. ಮೈಸೂರಿನಲ್ಲಿ ಸಂಬಂಧಿಕರು ಯಾರು ಇರಲಿಲ್ಲ. ನಮ್ಮ ಮನೆಯಲ್ಲೇ ಇರುತ್ತಿದ್ರು, ಅವರು ನಮ್ಮ ಮನೆಯಲ್ಲಿ ಇರುವ ವಿಚಾರ ಯಾರಿಗೂ ಗೊತ್ತಿರಲಿಲ್ಲ ಎಂದು ನವೀನ್ ತಿಳಿಸಿದ್ದಾರೆ. ಭಾಗ್ಯ ಎಂಬುವವರು ಎಸ್. ಜಾನಕಿ ಅವರ ಕೇರ್ ಟೇಕರ್ ಆಗಿ ನೋಡಿಕೊಳ್ಳುತ್ತಿದ್ದರು. ಭಾಗ್ಯ ಅವರನ್ನು ಸ್ವಂತ ಮಗಳ ರೀತಿ ಭಾವಿಸಿದ್ದರು. ಈ ವಿಚಾರವನ್ನು ಸ್ವತಃ ಭಾಗ್ಯ ಹೇಳಿಕೊಂಡಿದ್ದಾರೆ.
ನಾನು ಮನೆ ಕೆಲಸದವಳ ತರ ಇರಲಿಲ್ಲ. ಅಮ್ಮ ನನ್ನನ್ನು ಮಗಳ ರೀತಿ ನೋಡಿಕೊಳ್ಳುತ್ತಿದ್ರು, ಈ ಮನೆ ನಿನ್ನದೇ, ನಿನಗೆ ಇಷ್ಟ ಬಂದಂತೆ ಇರಬಹುದು, ಎಲ್ಲಾ ವಸ್ತುಗಳನ್ನು ನೀನು ಬಳಸಬಹುದು ಎನ್ನುತ್ತಿದ್ರು.. ಸದಾ ದೇವರ ಧ್ಯಾನ ಮಾಡುತ್ತಿದ್ರು, ದೇವರಿಗೆ ಸಂಬಂಧಿಸಿದ ಪುಸ್ತಕ ಓದುವುದು, ವೀಡಿಯೋ ನೋಡುವುದು ಮಾಡುತ್ತಿದ್ರು. ಅಮ್ಮನ ಅಗಲಿಕೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾಗ್ಯ ಕಣ್ಣೀರು ಹಾಕಿದ್ದಾರೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ತೋಟದಲ್ಲಿ ಎಸ್. ಜಾನಕಿ ಅಂತ್ಯಕ್ರಿಯೆ ನಡೆಯಲಿದೆ. ಮೊಮ್ಮಗಳು ಅಪ್ಸರಾ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ. 4 ವರ್ಷಗಳ ಹಿಂದೆ ಈ ಜಾಗ ಖರೀದಿ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ತಮ್ಮ ಬಹುತೇಕ ಸಮಯವನ್ನು ಎಸ್. ಜಾನಕಿ ಇದೇ ತೋಟದಲ್ಲಿ ಕಳೆಯುತ್ತಿದ್ದರು. ಈ ತೋಟದಲ್ಲಿ ಅಂತಿಮ ಸಂಸ್ಕಾರ ಮಾಡಿ ಎಂದು ಜಾನಕಿ ಸಾಕುಮಗ ನವೀನ್ ಬಳಿ ಹೇಳುತ್ತಿದ್ದರಂತೆ.
ಅಜ್ಜಿ ಅಗಲಿಕೆ ಬಗ್ಗೆ ಮೊಮ್ಮಗಳು ಅಪ್ಸರಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅಜ್ಜಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಿರ್ಧರಿಸಿರುವ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಜ್ಜಿ ಮೈಸೂರನ್ನು ಬಹಳ ಇಷ್ಟಪಡುತ್ತಿದ್ದರು. ಎಲ್ಲಾ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಆಕೆ ಇಡೀ ಭಾರತಕ್ಕೆ ಇಡೀ ಪ್ರಪಂಚಕ್ಕೆ ಸೇರಿದವರು. ಆಕೆ ಸದಾ ನಮ್ಮೆಲ್ಲರ ಮನಸ್ಸಿನಲ್ಲಿರುತ್ತಾರೆ. ಅವ್ರು ಪುಟ್ಟ ಮಗುವಿನ ಮನಸ್ಸಿನವರಾಗಿದ್ದರು. ಅಜ್ಜಿ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ ಇಡೀ ನಾಡಿಗೆ ತುಂಬಲಾರದ ನಷ್ಟ. ಅವರ ದನಿ ಮಾತ್ರವಲ್ಲ, ಅವರ ಸಹಾಯಗುಣ, ಸರಳ ಸಜ್ಜನ ವ್ಯಕ್ತಿತ್ವ ಎಲ್ಲವೂ ನನ್ನ ಮನಸ್ಸಿನಲ್ಲಿ ಉಳಿದಿದೆ ಎಂದು ಅಪ್ಸರಾ ಹೇಳಿದ್ದಾರೆ.
ಮಗ ಮುರಳಿಕೃಷ್ಣ ಅಗಲಿಕೆ ಎಸ್. ಜಾನಕಿ ಅವರನ್ನು ಬಹಳ ಕಾಡುತ್ತಿತ್ತು. 6 ತಿಂಗಳ ಹಿಂದೆ ಮುರಳಿಕೃಷ್ಣ ಅನಾರೋಗ್ಯದಿಂದ ಮೈಸೂರಿನಲ್ಲಿ ವಿಧಿವಶರಾಗಿದ್ದರು. ತಮ್ಮ ತಾಯಿಗೆ ಮಗ, ಅಮ್ಮ ಎಲ್ಲವೂ ಆಗಿ ಅವರು ನೋಡಿಕೊಳ್ಳುತ್ತಿದ್ದರು. ಮಗ ಅಗಲಿಕೆಯಿಂದ ಎಸ್. ಜಾನಕಿ ಬಹಳ ನೊಂದಿದ್ದರು.


Click it and Unblock the Notifications