ಹುಟ್ಟುಹಬ್ಬದ ದಿನವೇ ಎಸ್. ಕೆ ಭಗವಾನ್ ನಿಧನ: ತಾರೆಯರು, ರಾಜಕೀಯ ಮುಖಂಡರ ಸಂತಾಪ
ಕನ್ನಡ ಚಿತ್ರರಂಗದ ದಂತಕಥೆ, ಮೇರು ಪ್ರತಿಭೆ ನಿರ್ದೇಶಕ ಎಸ್. ಕೆ ಭಗವಾನ್ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಭಗವಾನ್ ಅವರನ್ನು ಕೆಲ ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾನ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ಸಂತಾಪ ಸೂಚಿಸುತ್ತಿದ್ದಾರೆ.
ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಹಿರಿಯ ನಟ ಶ್ರೀನಾಥ್, ನಟಿ ಸುಧಾರಾಣಿ ಸೇರಿದಂತೆ ಹಲವರು ಎಸ್. ಕೆ ಭಗವಾನ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿ ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಎಸ್. ಕೆ ಭಗವಾನ್ 4 ಜನ ಮಕ್ಕಳನ್ನು ಅಗಲಿದ್ದಾರೆ. 2009ರಲ್ಲಿ ಪತ್ನಿ ನಿಧನರಾಗಿದ್ದರು. ಇನ್ನು ಹುಟ್ಟುಹಬ್ಬದ ದಿನವೇ ಎಸ್. ಕೆ ಭಗವಾನ್ ಕೊನೆಯುಸಿರೆಳೆದಿರುವುದು ವಿಪರ್ಯಾಸ. ಇಂದು ಅವರಿಗೆ 94 ವರ್ಷ ತುಂಬುತ್ತಿತ್ತು ಎಂದು ಪುತ್ರ ಜೋತಿಂದರ್ ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನು ಎಸ್. ಕೆ ಭಗವಾನ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಸಂಜೆ 4 ಗಂಟೆ ವೇಳೆಗೆ ಚಾಮರಾಜ ಪೇಟೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ವಿಧಿವಿಧಾನ ನಡೆಯಲಿದೆ ಎಂದು ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಚಿತ್ರರಂಗಕ್ಕೆ ತುಂಬಲಾರದ ನಷ್ಟ
ಭಗವಾನ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ್ದ ಶಿವಣ್ಣ "ಅವರು ನಮ್ಮ ತಂದೆ ಸಮಾನರಾಗಿದ್ದರು. ನಮ್ಮ ಕುಟುಂಬದ ಜೊತೆ ಬಹಳ ಆತ್ಮೀಯ ಒಡನಾಟ ಇತ್ತು. ನಮ್ಮ ಕುಟುಂಬದ ಜೊತೆಗಿನ ಅವರ ಅನುಬಂಧ ಅಪರೂಪದ್ದು. ದೊರೆ- ಭಗವಾನ್ ಅವಳಿ ಸಹೋದರಂತೆ ಇದ್ದರು. ನಮ್ಮ ಫ್ಯಾಮಿಲಿ ಅಲ್ಲಿ ಅವ್ರು ಕೂಡ ಒಬ್ಬರು. ಶಕ್ತಿಧಾಮ ಮಾಡುವಾಗ ಸದಾ ನಮ್ಮ ಜೊತೆಗಿರ್ತಿದ್ರು. ಅವ್ರ ಮಕ್ಕಳು ನಾವುಗಳೆಲ್ಲ ಬಾಲ್ಯದಿಂದಲೂ ಸ್ನೇಹಿತರು. ಅವರು 100 ವರ್ಷ ಇರ್ತಾರೆ ಎಂದುಕೊಂಡಿದ್ದೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವ್ರ ಕುಟುಂಬಕ್ಕೆ ನೋವನ್ನ ಸಹಿಸೋ ಶಕ್ತಿ ಭಗವಂತ ಕೊಡಲಿ. ಮಹಿಳಾ ಪ್ರಧಾನ ಚಿತ್ರಗಳಿಗೆ ಅವರು ಹೆಸರುವಾಸಿ ಆಗಿದ್ದರು. ಮ್ಯೂಸಿಕ್ ನೈಟ್ಸ್ಗಳಲ್ಲಿ ಅಪಾಜಿಗೆ ಅವ್ರು ಇರಲೇಬೇಕಿತ್ತು" ಎಂದು ಹೇಳಿದ್ದಾರೆ.

ರಾಘಣ್ಣ ಮಾತು
ರಾಘವೇಂದ್ರ ರಾಜ್ಕುಮಾರ್ ಮಾತನಾಡಿ "ನಮ್ಮ ತಂದೆಯಾದ ನಂತರ ಶಿಸ್ತಿನ ವಿಚಾರದಲ್ಲಿ ಭಗವಾನ್ ಅವರನ್ನೆ ನೋಡಿದ್ದು. ನಮ್ಮ ತಂದೆಯವರ 3ನೇ ಚಿತ್ರಕ್ಕೆ ಭಗವಾನ್ ಅವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಂದಿದ್ರು. ತುಂಬ ಚೆನ್ನಾಗಿ ಶಿಸ್ತಿನಿಂದ ಭಗವಾನ್ ಕಾಣಿಸುತ್ತಿದ್ದರು. ನಮ್ಮ ತಂದೆ ತಾಯಿಯಂತೆ ಭಗವಾನ್ ಅವರು ಕೂಡ ಕಣ್ಣುದಾನ ಮಾಡಿದ್ದಾರೆ. ನಮ್ಮ ಮನೆಯ ಕಷ್ಟ, ಸುಖಕ್ಕೆ ಭಗವಾನ್ ಜೊತೆಯಾಗಿ ಇರುತ್ತಿದ್ದರು. ನಾನು ಹಾಡನ್ನು ಹಾಡುವುದನ್ನು ನಿಲ್ಲಿಸಿದ್ದೆ. 'ಆಡಿಸಿದಾತ' ಚಿತ್ರಕ್ಕೆ ಅವರೇ ಹಾಡಿಸಿದ್ದರು. 'ಮಂತ್ರಾಲಯ ಮಹಾತ್ಮೆ' ಸಿನಿಮಾ ಕಲರ್ನಲ್ಲಿ ಬರಬೇಕು ಅನ್ನೋದು ಅವರ ಆಸೆ ಆಗಿತ್ತು. ಅವರ ಬರವಣಿಗೆ ಚೆನ್ನಾಗಿತ್ತು" ಎಂದಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಸಂತಾಪ
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. "ಖ್ಯಾತ ನಿರ್ದೇಶಕರಾದ ಎಸ್. ಕೆ. ಭಗವಾನ್ ಅವರಿಗೆ ಭಾವಪೂರ್ಣ ನಮನಗಳು. ಅಪ್ಪಾಜಿ ಅವರ ಅನೇಕ ದಾಖಲೆ ಚಿತ್ರಗಳನ್ನು ನಿರ್ದೇಶಿಸಿದ ದೊರೈ-ಭಗವಾನ್ ಜೋಡಿ ಇಂದಿಗೂ ಅವಿಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ" ಎಂದು ಬರೆದುಕೊಂಡಿದ್ದಾರೆ.
ಕಾದಂಬರಿ ಚಿತ್ರಗಳ ಸುವರ್ಣ ಸೇತುವೆ
"ನಮ್ಮೂರ ಪಕ್ಕದ ಹಿರೀಸಾವೆ ಟೆಂಟ್ ನಲ್ಲಿ ಮೊದಲು ನೋಡಿ ಭಾವತಪ್ತನಾಗಿದ್ದು ಇವರ 'ಕಸ್ತೂರಿ ನಿವಾಸ'. ಕಾದಂಬರಿ-ಸಿನಿಮಾಗಳ ಸುವರ್ಣ ಸೇತುವೆಯಂತಿದ್ದ ದೊರೈ-ಭಗವಾನ್ ಜೋಡಿ ಅಪೂರ್ವ.
ಫಿಲಂ ಫೆಸ್ಟಿವಲ್ಗಳಿಗೆ ಹಾಜರಾಗುತ್ತಾ ಇಳಿವಯಸ್ಸಿನವರೆಗೂ ಚಿತ್ರ ಮಾಡುತ್ತಿದ್ದ ಭಗವಾನ್ ಕ್ರಿಯಾಶೀಲ. ನನ್ನ ಅಶ್ರುತರ್ಪಣ" ಎಂದು ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ರಾಜಕೀಯ ಮುಖಂಡರ ಸಂತಾಪ
ಇನ್ನು ಹಿರಿಯ ನಿರ್ದೇಶಕ ಎಸ್. ಕೆ ಭಗವಾನ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ. ಎಸ್ ಯಡಿಯೂರಪ್ಪ, ಹೆಚ್. ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಕಾಂಗ್ರೆಸ್ ಶಾಸಕ ಗುಂಡೂರಾವ್, ಸಚಿವರಾದ ಸುಧಾಕರ್, ಬಿ. ಸಿ ಪಾಟೀಲ್, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ರಾಜಕೀಯ ಮುಖಂಡರು ನಿರ್ದೇಶಕ ಎಸ್. ಕೆ ಭಗವಾನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











