ಜೊತೆಗಾರರಿಂದಲೇ ಎಸ್.ನಾರಾಯಣ್ ಗೆ ಭಾರಿ ಮೋಸ: ದೂರು ದಾಖಲು
ನಟ-ನಿರ್ದೇಶಕ-ನಿರ್ಮಾಪಕ ಎಸ್.ನಾರಾಯಣ್ ಅವರಿಗೆ ಭಾರಿ ದೋಖಾ ಆಗಿದೆ. ಈ ಬಗ್ಗೆ ಅವರು ಪೊಲೀಸ್ ದೂರು ಸಹ ದಾಖಲಿಸಿದ್ದಾರೆ.
ತಮಗೆ 1.60 ಕೋಟಿ ರೂಪಾಯಿ ರೂಪಾಯಿ ಮೋಸ ಮಾಡಿರುವ ಬಗ್ಗೆ ಎಸ್.ನಾರಾಯಣ್ ಸಿಸಿಬಿ ವಿಭಾಗದ ಡಿಸಿಪಿ ರವಿಕುಮಾರ್ ಅವರ ಬಳಿ ದೂರು ದಾಖಲಿಸಿದ್ದಾರೆ.
ಕಳೆದ ವರ್ಷ ಎಸ್.ನಾರಾಯಣ್ ಮತ್ತು ಮೂವರು ಸೇರಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಸಿನಿಮಾ ಮುಹೂರ್ತ ಮಾತ್ರವೇ ಆಗಿ, ಶೂಟಿಂಗ್ ನಿಂತು ಹೋಯಿತು.

ಸಂಭಾವನೆ ಬದಲಿಗೆ ನಿವೇಶನ ನೀಡಿದ ಜೊತೆಗಾರರು
ಪಾರ್ಟನರ್ಗಳು ಚಿತ್ರದ ಸಂಭಾವನೆ ಬದಲಿಗೆ ಜಾಗವನ್ನು ಖರೀದಿಸುವಂತೆ ಎಸ್.ನಾರಾಯಣ್ ಗೆ ಸೂಚಿಸಿದ್ದರು. ಅಂತೆಯೇ ಎಸ್.ನಾರಾಯಣ್ ಅವರು 1.60 ಕೋಟಿ ಹಣ ಕೊಟ್ಟು ಎಚ್.ಬಿ.ಆರ್ ಬಡಾವಣೆಯಲ್ಲಿ ನಿವೇಶನವನ್ನು ಖರೀದಿಸಿದ್ದರು.

ನಕಲಿ ದಾಖಲೆ ಕೊಟ್ಟ ಹಣ ದೋಚಿದ್ದಾರೆ: ನಾರಾಯಣ್
ಆದರೆ ಖರೀದಿಸಿದ ನಿವೇಶನದ ದಾಖಲೆಗಳು ನಕಲಿ ಆಗಿವೆ. ನಕಲಿ ದಾಖಲೆ ಕೊಟ್ಟು ನನ್ನ ಬಳಿ ಹಣ ಪಡೆದುಕೊಂಡಿದ್ದಾರೆ ಎಂದು ಎಸ್.ನಾರಾಯಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾಂಕ್ ನಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದೆ: ಎಸ್.ನಾರಾಯಣ್
ನಿವೇಶನ ಕೊಳ್ಳಲು ಬ್ಯಾಂಕ್ ನಲ್ಲಿ ಸಾಲ ಮಾಡಿದ್ದೆ. ಸಾಲದ ಮೊತ್ತ ಈಗ 2 ಕೋಟಿ ದಾಟಿದೆ ಸಾಲ ಮರುಪಾವತಿ ಮಾಡಲು ಆಗುತ್ತಿಲ್ಲ, ನ್ಯಾಯ ಒದಗಿಸಿಕೊಡಿ ಎಂದು ಎಸ್.ನಾರಾಯಣ್ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಕಳೆದ ವರ್ಷ 90 ಲಕ್ಷ ಮೋಸ
ಕಳೆದ ವರ್ಷ ಸಹ ಎಸ್.ನಾರಾಯಣ್ ಅವರಿಗೆ ಸತ್ಯನರಾಯಣ ಎಂಬ ವ್ಯಕ್ತಿ 90 ಲಕ್ಷ ಮೋಸ ಮಾಡಿದ್ದ.
ವ್ಯವಹಾರಕ್ಕಾಗಿ 200 ಕೋಟಿ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದ ಆ ವ್ಯಕ್ತಿ ಎಸ್.ನಾರಾಯಣ್ ಅವರಿಂದ 90 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದ.


Click it and Unblock the Notifications