ಶೀಘ್ರದಲ್ಲೇ ಚಿತ್ರರಂಗಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಪಾದಾರ್ಪಣೆ
ಚಿತ್ರರಂಗದ ಹಿನ್ನೆಲೆ ಉಳ್ಳವರು ಸಾಕಷ್ಟು ಜನ ಬಣ್ಣದಲೋಕಕ್ಕೆ ಬಂದಿದ್ದಾರೆ. ತಮ್ಮದೇ ಪ್ರತಿಭೆಯಿಂದ ಗೆದ್ದು ಬೀಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಮಕ್ಕಳು, ಮೊಮ್ಮಕ್ಕಳು ತೆರೆಮೇಲೆ ಮೋಡಿ ಮಾಡುತ್ತಿರುವುದು ಗೊತ್ತೇಯಿದೆ. ಶಕ್ತಿ ಪ್ರಸಾದ್ ಮಗ, ಮೊಮ್ಮಕ್ಕಳು ಬಣ್ಣ ಹಚ್ಚಿ ಗೆದ್ದಿದ್ದಾರೆ. ಅಂಬರೀಷ್ ಪುತ್ರ ಅಭಿಷೇಕ್, ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇದೀಗ ಸಾಹಸಸಿಂಹ ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಚಿತ್ರರಂಗಕ್ಕೆ ಬರುವ ಸುದ್ದಿ ಜೋರಾಗಿ ಚರ್ಚೆ ಆಗ್ತಿದೆ. ದಾದಾ ಅಳಿಯ ಅನಿರುದ್ಧ್ ಜತ್ಕರ್ ಕೂಡ ಸಿನಿಪ್ರೇಮಿಗಳಿಗೆ ಚಿರಪರಿಚಿತ ಹೆಸರು. ಇದೀಗ ಅನಿರುದ್ಧ್ ಹಾಗೂ ಕೀರ್ತಿ ದಂಪತಿ ಪುತ್ರ ಜೇಷ್ಠವರ್ಧನ್ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಈಗಾಗಲೇ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ದಾದಾ ಮೊಮ್ಮಗ ತೆರೆಮೇಲೆ ರಾರಾಜಿಸಲಿದ್ದಾನೆ.

ನಟನಾಗಲು ಬೇಕಾದ ತಯಾರಿಯನ್ನು ಜೇಷ್ಠವರ್ಧನ್ ಆರಂಭಿಸಿದ್ದಾರೆ. ಶಾಲಾ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಜೇಷ್ಠ ಡ್ಯಾನ್ಸ್, ಸ್ಟಂಟ್ಸ್ ಕೂಡ ಅಭ್ಯಾಸ ಮಾಡ್ತಿದ್ದಾರೆ. ಕಾಲೇಜು ದಿನಗಳಲ್ಲಿ ಶಾರ್ಟ್ ಫಿಲ್ಮ್ಸ್ನಲ್ಲಿ ಬಣ್ಣ ಹಚ್ಚಿದ್ದು ಇದೆ. ತಾತನಂತೆ ಬೆಳ್ಳಿ ಪರದೆಯಲ್ಲಿ ಮಿಂಚುವ ಕನಸು ಕಾಣುತ್ತಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಪಡೆದಿರುವ ಜೇಷ್ಠ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಮುಂದಾಗಿದ್ದಾರೆ.
ಓದಿನ ಜೊತೆ ಜೊತೆಗೆ ಬಣ್ಣದಲೋಕದ ಕನಸು ಕಾಣುತ್ತಿದೆ. ತಾತ ಧರಿಸುತ್ತದ ಕೈಗಡಕ ಅಪ್ಪ ಅನಿರುದ್ಧ್ ಅವರ ಕೈಯಲ್ಲಿದೆ. ಆದರೆ ತಾತ ಧರಿಸುತ್ತಿದ್ದ ಉಂಗುರವನ್ನು ನೆನಪಿಗಾಗಿ ಜೇಷ್ಠ ಇಟ್ಟುಕೊಂಡಿದ್ದಾರೆ. ಚಿತ್ರರಂಗದ ಹಿನ್ನಲೆ ಉಳ್ಳವರಿಗೆ ಅವಕಾಶ ಸುಲಭವಾಗಿ ಸಿಗಬಹುದು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹಳ ಅಗತ್ಯ. ಅದಕ್ಕೆ ಒಳ್ಳೆಯ ಕಥೆ ಕೂಡ ಸಿಗಬೇಕು. ಅದಕ್ಕಾಗಿ ದಾದಾ ಫ್ಯಾಮಿಲಿ ಹುಡುಕಾಟ ನಡೆಸುತ್ತಿದೆ.

ಮಗನನ್ನು ಚಿತ್ರರಂಗಕ್ಕೆ ಕರೆತರುವ ಬಗ್ಗೆ ಅನಿರುದ್ಧ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ಒಳ್ಳೆ ಕಥೆ ಹುಡುಕುತ್ತಿದ್ದೇವೆ. ಸಿಕ್ಕ ಕೂಡಲೇ ಸಿನಿಮಾ ಘೋಷಣೆ ಆಗುತ್ತದೆ. ನಾವೇ ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶ ಇಲ್ಲ. ನೋಡೋಣ, ಕಥೆ ಸಿಗಲಿ, ಎಲ್ಲರ ಹಾರೈಕೆಯಿಂದ ಒಳ್ಳೆ ಕಥೆ ಸಿಕ್ಕಿ ಅವನು ಚಿತ್ರರಂಗಕ್ಕೆ ಬರುವುದನ್ನು ಎದುರುನೋಡುತ್ತಿದ್ದೇನೆ" ಎಂದಿದ್ದಾರೆ. ಈ ವರ್ಷವೇ ಸಿನಿಮಾ ಶುರುವಾಗಬಹುದಾ? ಎನ್ನುವ ಪ್ರಶ್ನೆಗೆ "ಗೊತ್ತಿಲ್ಲ, ಕಾಲವೇ ಉತ್ತರ ಕೊಡುತ್ತದೆ" ಎಂದಿದ್ದಾರೆ.
ವಿಷ್ಣುವರ್ಧನ್ಗೂ ಮುನ್ನ ಅವರ ತಂದೆ ಹೆಚ್. ಎಲ್ ನಾರಾಯಣ ರಾವ್ ಕನ್ನಡ ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಡಾ. ರಾಜ್ಕುಮಾರ್ ನಟನೆಯ 'ನಾಗಾರ್ಜುನ' ಚಿತ್ರಕ್ಕೆ ಅವರು ಸಂಭಾಷಣೆ ಬರೆದಿದ್ದರು. ಬಳಿಕ 'ವಿಧಿವಿಲಾಸ' ಎಂಬ ಮತ್ತೊಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಒದಗಿಸಿದ್ದರು. ಹಾಗಾಗಿ ಅವರ ನಾಲ್ಕನೇ ತಲೆಮಾರಿನ ಕುಡಿ ಜೇಷ್ಠವರ್ಧನ್ ಚಿತ್ರರಂಗಕ್ಕೆ ಬಂದಂತೆ ಆಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟರ ಕೊರತೆ ಎದ್ದು ಕಾಣುತ್ತಿದೆ. ಹೊಸ ಕಲಾವಿದರು ಹೆಚ್ಚು ದಿನ ಉಳಿದುಕೊಳ್ಳುತ್ತಿಲ್ಲ. ಸ್ಟಾರ್ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಅವಶ್ಯಕತೆಯಿದೆ. ದಾದಾ ಮೊಮ್ಮಗ ಚಿತ್ರರಂಗಕ್ಕೆ ಬಂದರೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಜೇಷ್ಠವರ್ಧನ್ ತಮ್ಮದೇ ಪ್ರತಿಭೆಯಿಂದ ಗುರ್ತಿಸಿಕೊಳ್ಳಬೇಕಿದೆ.
ಚಿತ್ರರಂಗದ ಹಿನ್ನೆಲೆಯಿಂದ ಬರುತ್ತಿರುವ ಕೆಲ ನಟ, ನಟಿಯರು ಈ ವರ್ಷ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ಸಹೋದರಿ ಮಗ ಸಂಚಿತ್, ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣುಮಕ್ಕಳು ತೆರೆಮೇಲೆ ಬರ್ತಿದ್ದಾರೆ. ಇನ್ನು ಶ್ರುತಿ ಪುತ್ರಿ, ಉಪೇಂದ್ರ ಪುತ್ರ ಆಯುಷ್ ಹೀಗೆ ಪಟ್ಟಿ ಬೆಳೆಯುತ್ತಿದೆ. ಮುಂದೆ ಇದೇ ಸಾಲಿಗೆ ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಕೂಡ ಸೇರಿಕೊಳ್ಳಲಿದ್ದಾರೆ.


Click it and Unblock the Notifications











