ವಿಷ್ಣುಗೆ ದತ್ತುಪುತ್ರ ಎನ್ನುವಷ್ಟು ಹತ್ತಿರವಾಗಿದ್ದ ಶ್ರೀಧರ್ ಯಾರು? ಹಿನ್ನೆಲೆ ಏನು? ನಟಿಸಿದ್ದ ಸಿನ್ಮಾ ಯಾವ್ದು?
ಸಾಹಸಸಿಂಹ ವಿಷ್ಣುವರ್ಧನ್ ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಸಿಂಹದಂತೆ ಬದುಕಿದವರು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಅವರು ಎಲ್ಲರಿಗೂ ಆದರ್ಶ. ಹೆಣ್ಣು ಮಕ್ಕಳನ್ನು ಬಹಳ ಗೌರವದಿಂದ ಕಾಣುತ್ತಿದ್ದರು. "ಹಣೆಗೆ ಕುಂಕುಮ ಇಲ್ಲದಿದ್ದರೆ ಪ್ರಶ್ನಿಸುತ್ತಿದ್ರು. ಅವ್ರ ಎದುರು ನಾವು ಗಂಡಸರಿಗೆ ಶೇಕ್ ಹ್ಯಾಂಡ್ ಮಾಡುವಂತಿರಲಿಲ್ಲ. ನಮಸ್ಕಾರ ಮಾಡಬೇಕಿತ್ತು" ಎಂದು ಇತ್ತೀಚೆಗೆ ನಟಿ ತಾರಾ ಟಿವಿ9 ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ವಿಷ್ಣುವರ್ಧನ್ ಬಗ್ಗೆ ಸಾಕಷ್ಟು ಜನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರು, ಪರಮಾಪ್ತರು ದಾದಾ ಗುಣಗಾನ ಮಾಡಿರುವುದನ್ನು ನೋಡಿದ್ದೇವೆ. ಚಿತ್ರರಂಗದಲ್ಲಿ ವಿಷ್ಣು ಸಾಕಷ್ಟು ನೋವು ಅನುಭವಿಸಿದ್ದರು ಎಂದು ಆಪ್ತರು ಹೇಳುತ್ತಾರೆ. ಏಳೆಂಟು ವರ್ಷ ಬೆಂಗಳೂರು ಬಿಟ್ಟು ಮದ್ರಾಸ್ಗೆ ಹೋಗಿ ವಿಷ್ಣು ಜೀವನ ಸಾಗಿಸಿದ್ದು ಇದೆ. ಇನ್ನು ದಾದಾ ಮನೆಯಲ್ಲಿ ದಶಕಗಳ ಕಾಲ ಕೆಲಸ ಮಾಡಿಕೊಂಡಿದ್ದ ಶ್ರೀಧರ್ ಕೊನೆಗೆ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ್ದರು. ಸಾಕಷ್ಟು ಜನ ಅವರನ್ನು ವಿಷ್ಣು ದತ್ತುಪುತ್ರ ಎಂದೇ ಕರೆಯುತ್ತಾರೆ.

ಮಗಳು ಕೀರ್ತಿಯನ್ನು ವಿಷ್ಣುವರ್ಧನ್ ಹಾಗೂ ಭಾರತಿ ದಂಪತಿ ದತ್ತು ಪಡೆದುಕೊಂಡಿದ್ದರು. ಆದರೆ ಶ್ರೀಧರ್ ಅವರನ್ನು ದತ್ತು ಪಡೆದಿರಲಿಲ್ಲ. ತಮ್ಮ 16ನೇ ವಯಸ್ಸಿನಲ್ಲಿ ವಿಷ್ಣುವರ್ಧನ್ ಮನೆಯಲ್ಲಿ ಶ್ರೀಧರ್ ಕೆಲಸಕ್ಕೆ ಬಂದು ಸೇರಿದ್ದರು. ತಮ್ಮ ಸೇವೆಯಿಂದ ಆ ಮನೆಯ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿದ್ದರು. ಶ್ರೀಧರ್ ಅವರನ್ನು ವಿಷ್ಣು ಮಗನಂತೆ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಕೊನೆಗೆ ಅಂತ್ಯಸಂಸ್ಕಾರ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ವಿಷ್ಣು ಜೊತೆಗಿನ ದಿನಗಳನ್ನು ಶ್ರೀಧರ್ ಇನ್ನು ಮರೆತ್ತಿಲ್ಲ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಮಾತನಾಡಿದ್ದಾರೆ.
"ವಿಷ್ಣು ಅಪ್ಪಾಜಿ ಮನೆಯಲ್ಲಿ ಎಲ್ಲರೂ ನನ್ನನ್ನು ಮನೆ ಮಗನಂತೆ ನೋಡುತ್ತಿದ್ರು. ಕೊನೆಗೆ ವಿಷ್ಣು ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅಭಿಮಾನಿಗಳು ನನ್ನನ್ನು ದತ್ತುಪುತ್ರ ಎಂದೇ ಕರೀತ್ತಾರೆ. ವಿಷ್ಣುಜೀ ಇದ್ದಾಗಲೂ ನನ್ನನ್ನು ಮಗನಂತೆ ಭಾವಿಸುತ್ತಿದ್ರು. ಹೋಗುವಾಗಲೂ ಅದೇ ಸ್ಥಾನ ಕೊಟ್ಟು ಹೋಗಿದ್ದಾರೆ. ಇದು ನನ್ನ ಅದೃಷ್ಟ. ಅವರ ಸಹೋದರ, ಸಹೋದರಿಯರು, ತಾಯಿ ಹೀಗೆ ಎಲ್ಲರಿಗೂ ನನ್ನ ಬಗ್ಗೆ ಪ್ರೀತಿ ಅಭಿಮಾನ ಇತ್ತು" ಎಂದು ಶ್ರೀಧರ್ ನೆನಪಿಸಿಕೊಂಡಿದ್ದಾರೆ.
ಡಿಸೆಂಬರ್ 30, 2009ರಂದು ವಿಷ್ಣುವರ್ಧನ್ ವಿಧಿವಶರಾಗಿದ್ದರು. ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಆಗ ಅಂತ್ಯಕ್ರಿಯೆ ಮಾಡೋದು ಯಾರು ಎನ್ನುವ ಚರ್ಚೆ ಬಂದಿತ್ತು. ವಿಷ್ಣು ಸಹೋದರ ಮಾಡಬೇಕಿತ್ತು. ಆದರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಶ್ರೀಧರ ಮಾಡಲಿ ಎಂದು ಹೇಳಿದ್ದರು. ಅದಕ್ಕೆ ಕುಟುಂಬಸ್ಥರು ಒಪ್ಪಿಕೊಂಡಿದ್ದರು. "ವಿಷ್ಣು ಅವ್ರ ಅಣ್ಣ ಹೇಳಿದ್ರು, ಮಾಡಿದ್ರೆ ಅವ್ನೇ(ಶ್ರೀಧರ್) ಮಾಡಬೇಕು. ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ನನಗೆ ಹೇಳಿದ್ರು" ಎಂದು ಶ್ರೀಧರ್ ಹೇಳಿದ್ಧಾರೆ.

ಬೆಂಗಳೂರಿನಲ್ಲಿ ಕೊಂಚ ಸಮಸ್ಯೆ ಆಯಿತು ಎಂದು ಕೆಲ ವರ್ಷ ಮದ್ರಾಸ್ಗೆ ಹೋಗಿದ್ದೆವು. ಆಗ ಕೂಡ ನಾನು ಅವರ ಕುಟುಂಬ ಸದಸ್ಯರ ಜೊತೆಗಿದ್ದೆ. ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬರುತ್ತಿದ್ದರು, ಹೋಗುತ್ತಿದ್ದರು. ಆದರೆ ಶೂಟಿಂಗ್ ಇಲ್ಲದ ಬಹುತೇಕ ಸಮಯ ಮದ್ರಾಸ್ನಲ್ಲೇ ಕಳೆಯುತ್ತಿದ್ರು. ಕರ್ನಾಟಕದಲ್ಲಿ ಅವರಿಗಿದ್ದ ಗೌರವ, ಬೆಲೆ ಬೇರೆ. ಈಗ ಅವ್ರು ನಮ್ಮೊಟ್ಟಿಗಿಲ್ಲ. ಆದರೆ ಪೂಜಿಸುವ ಅವಕಾಶ ಸಿಕ್ಕಿದೆ. ಮೈಸೂರಿನಲ್ಲಿ ಸ್ಮಾರಕ ಮಾಡ್ತೀನಿ ಅಂದಾಗ ನಾನು ವಿರೋಧ ವ್ಯಕ್ತಪಡಿಸಿದ್ದೆ. ಅಭಿಮಾನಿಗಳಿಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಹೋರಾಟ ಎಂದು ಶ್ರೀಧರ್ ತಿಳಿಸಿದ್ದಾರೆ.
ಸ್ಮಾರಕ ಧ್ವಂಸ ಮಾಡಿದ ಮೇಲೆ 10 ಗುಂಟೆ ಜಾಗಕ್ಕಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ಅದಕ್ಕೂ ಮುನ್ನ ಯಾರು ಮಾತನಾಡಲಿಲ್ಲ. ಪುಣ್ಯಭೂಮಿಯಲ್ಲೇ ಸ್ಮಾರಕ ಆಗಬೇಕು ಎನ್ನುವುದು ನಮ್ಮ ಆಸೆ ಎಂದು ಶ್ರೀಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ತಾವು ದಾದಾ ಮನೆ ಸೇರಿದ್ದು ಹೇಗೆ? ತನ್ನ ಹಿನ್ನೆಲೆ ಏನು? ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ನನ್ನ ಊರು ಶಿವಮೊಗ್ಗ ಸಾಗರದ ಸಿಂಗಧೂರಿನ ಬಳಿ ಇರುವ ಒಂದು ಹಳ್ಳಿ. ನಾನು ಬೇರೆ ಯಾವುದೋ ಕೆಲಸ ಮಾಡಿಕೊಂಡಿದ್ದೆ. ಅದನ್ನು ಬಿಟ್ಟು ಮನೆಯಲ್ಲಿದ್ದೆ. ಆಗ ಅಭಿಮಾನ್ ಸ್ಟುಡಿಯೋದಲ್ಲಿ ಒಂದು ಗಣಪತಿ ದೇವಸ್ಥಾನ ಇತ್ತು. ಅಲ್ಲಿ ಪೂಜೆ ಒಬ್ರು ಪೂಜೆ ಮಾಡುತ್ತಿದ್ರು. ಅವರ ಮೂಲಕ ವಿಷ್ಣುವರ್ಧನ್ ಅವರ ತಾಯಿಯನ್ನು ನೋಡಿಕೊಳ್ಳಲು ಸಹಾಯಕರು ಬೇಕು ಎಂದು ವಿಷಯ ಗೊತ್ತಾಯಿತು. ನನ್ನನ್ನು ಕೇಳಿದಾಗ ಭಯ ಇತ್ತು. ಇಷ್ಟು ದೊಡ್ಡ ವ್ಯಕ್ತಿ ಮನೆಯಲ್ಲಿ ಕೆಲಸ ಮಾಡುವುದು ಹೇಗೆ ಅನ್ನಿಸಿತ್ತು. ನನಗೆ ಸಿನಿಮಾಗಳ ಬಗ್ಗೆ ಮೊದಲು ಅಷ್ಟು ಗೊತ್ತಿರಲಿಲ್ಲ. ಇವರ ಮನೆಗೆ ಬಂದಮೇಲೆ ಸಿನಿಮಾ ವಿಷಯಗಳು ಗೊತ್ತಾಗಿದ್ದು ಎಂದು ಶ್ರೀಧರ್ ಹೇಳಿದ್ದಾರೆ.
"ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದೆ. ಆ ತಂದೆ ಕಳೆದುಕೊಂಡು ಈ ತಂದೆ ಸಿಕ್ಕರು. ನಮ್ಮ ತಾಯಿ ಸೇವೆ ಮಾಡುವ ಅವಕಾಶ ಸಿಗಲಿಲ್ಲ, ವಿಷ್ಣುಜೀ ತಾಯಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ. ಅದನ್ನು ನಾನು ಮರೆಯುವುದಿಲ್ಲ. ನಾನು ಕೂಡ ದಾದಾ ಜೊತೆ ಸಿನಿಮಾ ಚಿತ್ರೀಕರಣದ ಜಾಗಕ್ಕೆ ಹೋಗುತ್ತಿದ್ದೆ. 'ಜಯಸಿಂಹ' ಚಿತ್ರದ ಸಣ್ಣ ಸನ್ನಿವೇಶದಲ್ಲಿ ನಟಿಸೋ ಅವಕಾಶ ದಾದಾ ಮಾಡಿಕೊಟ್ರು. ಆ ಚಿತ್ರದಲ್ಲಿ ನಾಯಕಿ ಮಹಾಲಕ್ಷ್ಮಿ ಇಂಟ್ರಡಕ್ಷನ್ ಸೀನ್ ಅದು. ಅವ್ರು ನನ್ನ ಕಡೆ ಬಂದೂಕಿನಿಂದ ಶೂಟ್ ಮಾಡುವಂತಹ ಸನ್ನಿವೇಶ ಇದೆ. ಅದರಲ್ಲಿ ನಾನೇ ನಟಿಸಿರೋದು. ಅವತ್ತು ಚಿತ್ರೀಕರಣ ನೋಡಲು ವಿಷ್ಣು ಅವ್ರ ತಾಯಿ ಕೂಡ ಬಂದಿದ್ದರು. ಮದ್ರಾಸಿನ ವಾಹಿನಿ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೀತು. ಆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿಷ್ಣುಜೀ ನಾನು ಚಿರಋಣಿ" ಎಂದು ಶ್ರೀಧರ್ ಹೇಳಿದ್ದಾರೆ.
ನಾನು 1978-79ರ ಸಮಯದಲ್ಲಿ ವಿಷ್ಣುವರ್ಧನ್ ನಿವಾಸಕ್ಕೆ ಬಂದೆ. ಅವರ ಕೊನೆಯ ದಿನಗಳವರೆಗೆ ಜೊತೆಗಿದ್ದೆ. 2009ರಲ್ಲಿ ವಿಷ್ಣುಜೀ ನಿಧನರಾಗುವ ಹಿಂದಿನ ದಿನ ರಾತ್ರಿ 9.30ಕ್ಕೆ ನಾನು ಫೋನ್ನಲ್ಲಿ ಅವರೊಟ್ಟಿಗೆ ಮಾತನಾಡಿದ್ದೆ. ಅವ್ರು ಮೈಸೂರಿನಲ್ಲಿದ್ರು, ನಾನು ಬೆಂಗಳೂರಿನ ಮನೆಯಲ್ಲಿದ್ದೆ. ಬೆಳಗ್ಗೆ ಬರ್ತೀನಿ ಅಂದ್ರು. ಬೆಳಗ್ಗಿನ ಜಾವ 2.30ಕ್ಕೆ ಕಹಿ ಸುದ್ದಿ ಬಂದಾಗ ನಂಬೋಕೆ ಸಾಧ್ಯವಾಗಲಿಲ್ಲ. ಅವ್ರ ಪಾರ್ಥೀವ ಶರೀರ ಮನೆಗೆ ತಂದಾಗ ಶಾಕ್ನಲ್ಲಿ ಕುಸಿದು ಬಿದ್ದಿದ್ದೆ. ನಂತರ ಆಸ್ಪತ್ರೆಗೆ ಕರ್ಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು. ಬಳಿಕ ಮನೆಗೆ ಬಂದೆ. ಸಂಜೆ ಅಂತ್ಯ ಸಂಸ್ಕಾರ ಮಾಡುವ ಅವಕಾಶ ಸಿಕ್ತು. ನಾನು ಧನ್ಯ" ಎಂದು ಶ್ರೀಧರ್ ವಿವರಿಸಿದ್ದಾರೆ.
ದಾದಾ 75ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಇನ್ನೆರಡು ದಿನ ಬಾಕಿಯಿದೆ. ಈ ಬಾರಿ ಅಭಿಮಾನ್ ಸ್ಟುಡಿಯೋದಲ್ಲಿರುವ ಸ್ಮಾರಕದ ಬಳಿ ಬಹಳ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಬಾಲಕೃಷ್ಣ ಕುಟುಂಬದವರು ದಾದಾ ಸ್ಮಾರಕ ಧ್ವಂಸ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲೇ ಈ ಬಾರಿ ದಾದಾ ಹುಟ್ಟುಹಬ್ಬ ಆಚರಣೆಗೆ ಮನವಿ ಮಾಡಿದ್ದೇವೆ, ಈ ಬಗ್ಗೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ವಿಚಾರಣೆ ನಡೆದು ಅನುಮತಿ ಸಿಗಬಹುದು ಎಂದು ಶ್ರೀಧರ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











